ಡ್ರಗ್ಸ್ ಪ್ರಕರಣ: ಸಿಸಿಬಿ ಮುಂದೆ ಹಾಜರಾದ ನಟ ಸಂತೋಷ್ ಮತ್ತು ಅಕುಲ್
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾದ ನಂಟು ಆರೋಪ ಪ್ರಕರಣ ಸಂಬಂಧ ನಟ ಸಂತೋಷ್ ಮತ್ತು ನಿರೂಪಕ ಅಕುಲ್ ಬಾಲಾಜಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಮಾಹಿತಿ ಪಡೆಯಲು ಶನಿವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಮತ್ತು ಸಂತೋಷ್ ಇಬ್ಬರಿಗೆ ಸಿಸಿಬಿ ನೋಟಿಸ್ ನೀಡಿತ್ತು.
ಇಂದು ಬೆಳಗ್ಗೆ 10 ಗಂಟೆಗೆ ನಟ ಸಂತೋಷ್ ಮತ್ತು ಅಕುಲ್ ಇಬ್ಬರು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ. ಮೈಸೂರಿನಲ್ಲಿದ್ದ ಸಂತೋಷ್ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ವಿಚಾರಣೆಗೆ ಹಾಜರಾದ ಸಂತೋಷ್ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. 'ನಾನು ಪೆಡ್ಲರ್ ಅಲ್ಲ, ಡ್ರಗ್ ವ್ಯಸನಿಯೂ ಅಲ್ಲ. ತುಂಬಾ ಹಣ ಇದ್ದವರು ಮಾಡುವ ಕೆಲಸವಿದು, ನನ್ನ ಬಳಿ ಅಷ್ಟು ಹಣವಿಲ್ಲ' ಎಂದಿದ್ದಾರೆ.
ಯಲಹಂಕದ ಜೆ.ಡಿ ಗಾರ್ಡನ್ ಬಳಿ ಸಂತೋಷ್ ಅವರ ವಿಲ್ಲಾ ಇದ್ದು, ಆ ವಿಲ್ಲಾದಲ್ಲಿ ವೈಭವ್ ಜೈನ್ ನೋಡಿಕೊಳ್ಲುತ್ತಿದ್ದಾರೆ ಎಂದು ಸಂತೋಷ್ ಹೇಳಿದ್ದಾರೆ. ಸಂತೋಷ್ ಎಲೈಟ್ ಹಾಸ್ಪೆಟಾಲಿಟಿ ಕಂಪನಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವೈಭವ್ ಜೈನ್ ಗೂ ಈ ಕಂಪೆನಿಗೂ ಲಿಂಕ್ ಇಬರಬಹುದು ಎಂಬ ಅನುಮಾನದಲ್ಲಿ ಸಿಸಿಬಿ ನೋಟಿಸ್ ನೀಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಹೈದರಾಬಾದ್ ನಲ್ಲಿದ್ದ ಅಕುಲ್ ಸಿಸಿಬಿ ವಿಚಾರಣೆಗಾಗಿ ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಿರೂಪಕ ಅಕುಲ್, 'ನಾನು ಯಾವುದೇ ತಪ್ಪು ಮಾಡಿಲ್ಲ. ನನಗೂ ಡ್ರಗ್ಸ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವೈಭವ್ ಜೈನ್ ಹಾಯ್ ಭಾಯ್ ಫ್ರೇಂಡ್ ಅಷ್ಟೆ, ತಪ್ಪು ಮಾಡಿಲ್ಲ ಅಂದಮೇಲೆ ಹೆದರಬೇಡ ಎಂದು ತಾಯಿ ಹೇಳಿದ್ದಾರೆ. ಸಿಸಿಬಿ ವಿಚಾರಣೆಗೆ ಸ್ಪಂದಿಸುತ್ತೇನೆ' ಎಂದು ಹೇಳಿದ್ದಾರೆ.
Recommended Video
ವಿಚಾರಣೆಯಲ್ಲಿ ಯಾವೆಲ್ಲ ವಿಚಾರಗಳನ್ನು ಬಹಿರಂಗಪಡಿಸಲಿದ್ದಾರೆ, ಸಿಸಿಬಿ ಪಟ್ಟಿಯಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಇದ್ದಾರೆ, ಯಾರಿಗೆಲ್ಲ ನೋಟಿಸ್ ನೀಡಲಿದ್ದಾರೆ ಎನ್ನುವ ಕುತೂಹಲ ಎದುರಾಗಿದೆ.


Click it and Unblock the Notifications











