ಗಾಂಧಿನಗರದಿಂದ ಬಂದ 4 ತಾಜಾ ಸಿನಿಮಾ ಸುದ್ದಿಗಳಿವು.!
ಗಾಂಧಿನಗರವನ್ನು ಸುಮ್ಮನೆ ಒಂದು ರೌಂಡ್ ಹಾಕೊಂಡು ಬಂದರೆ ಬೇಜಾನ್ ಸಿನಿಮಾ ಸುದ್ದಿಗಳು ಕಿವಿಗೆ ಬೀಳುತ್ತವೆ. ಸದಾ ಗಿಜಿಗುಡುವ ಗಾಂಧಿನಗರದಲ್ಲಿ ಸಿನಿಮಾ ಬಿಟ್ಟರೆ ಬೇರೆ ಖಾಸ್ ಖಬರ್ ಸಿಕ್ಕಲ್ಲ.
ಸಿನಿಮಾ ಮಾತುಕತೆ, ಚಿತ್ರ ವಿತರಣೆ, ಥಿಯೇಟರ್ ಪ್ರಾಬ್ಲಮ್, ಟೈಟಲ್ ಕಾಂಟ್ರವರ್ಸಿ, ಡಬ್ಬಿಂಗ್, ರೀರೆಕಾರ್ಡಿಂಗ್.. ಹೀಗೆ ಯಾವುದಾದರೂ ಒಂದು ಸಿನಿಮಾದ ಏನಾದರೂ ಒಂದು ಕಾರ್ಯ ಸ್ಯಾಂಡಲ್ ವುಡ್ ನ ಹೃದಯ ಭಾಗ ಗಾಂಧಿನಗರದಲ್ಲಿ ನಡೆಯುತ್ತಲೇ ಇರುತ್ತದೆ.
ಅಂಥದೇ ಸುದ್ದಿಗಳನ್ನು ಇವತ್ತು ನಾವು ನಿಮ್ಮ ಮುಂದೆ ತಂದಿದ್ದೇವೆ. ಗಾಂಧಿನಗರದಿಂದ ಬಂದ ನಾಲ್ಕು ತಾಜಾ ತಾಜಾ ಸಿನಿಮಾ ಸುದ್ದಿಗಳು ಇಲ್ಲಿವೆ ಓದಿರಿ...

ಗಡ್ಡ ಬಿಟ್ಟ ಗೋಲ್ಡನ್ ಸ್ಟಾರ್
ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿರುವ '99' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿದ್ದು, ಎರಡು ವಿಭಿನ್ನ ಶೇಡ್ ಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಲುಕ್ ನಲ್ಲಿ ಕ್ಲಾಸ್ ಆಗಿ ಕಾಣುವ ಗಣೇಶ್ ಮತ್ತೊಂದು ಲುಕ್ ಗಾಗಿ ಗಡ್ಡ ಬಿಟ್ಟಿದ್ದಾರೆ. ಗಣೇಶ್ ಗಡ್ಡ ಬಿಟ್ಟಿರುವ ಲುಕ್ ಸದ್ಯ ಔಟ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ.

ಮಾತಿನ ಮನೆಯಲ್ಲಿ 'ರಾಜ ಮಾರ್ತಾಂಡ'
ಚಿರಂಜೀವಿ ಸರ್ಜಾ ಅಭಿನಯದ 'ರಾಜ ಮಾರ್ತಾಂಡ' ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಮೈಸೂರಿನಲ್ಲಿ 45 ದಿನಗಳಿಗೂ ಹೆಚ್ಚು ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಮೂರು ಹಾಡುಗಳು ಮತ್ತು ಒಂದು ಫೈಟ್ ಸೀನ್ ಶೂಟಿಂಗ್ ಬಾಕಿ ಇದೆ. 'ರಾಜ ಮಾರ್ತಾಂಡ' ಚಿತ್ರಕ್ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿದ್ದು, ಚಿರಂಜೀವಿ ಸರ್ಜಾ ಜೊತೆಗೆ ದೀಪ್ತಿ ಸಾತಿ, ದೇವರಾಜ್ ಮುಂತಾದವರು ನಟಿಸಿದ್ದಾರೆ.

ಸೆನ್ಸಾರ್ ಮುಂದೆ 'ಮಜ್ಜಿಗೆ ಹುಳಿ'
ರವೀಂದ್ರ ಕೊಟಕಿ ನಿರ್ದೇಶನದ 'ಮಜ್ಜಿಗೆ ಹುಳಿ' ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಲಿದ್ದು, ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ. ಈ ಚಿತ್ರದ ತಾರಾಬಳಗದಲ್ಲಿ ದೀಕ್ಷಿತ್, ರೂಪಿಕಾ, ಸುಚೀಂದ್ರ ಪ್ರಸಾದ್, ರಮೇಶ್ ಭಟ್ ಮುಂತಾದವರಿದ್ದಾರೆ.

'ಆವಂತಿಕ' ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ
ಕೆಂಪೇಗೌಡ ಮಾಗಡಿ ನಿರ್ದೇಶನದ 'ಆವಂತಿಕ' ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಮಾಗಡಿ, ಚಿಕ್ಕಮಗಳೂರು, ಮಂಗಳೂರು ಮುಂತಾದ ಕಡೆ ಚಿತ್ರದ ಚಿತ್ರೀಕರಣ ನಡೆಯಲಿದೆ.


Click it and Unblock the Notifications











