ಹೃದಯಾಘಾತದಿಂದ ಹಿರಿಯ ನಟ ಮನ್ದೀಪ್ ರಾಯ್ ಆಸ್ಪತ್ರೆಗೆ ದಾಖಲು: ಚಿಕಿತ್ಸೆಗೆ ಬೇಕು ಆರ್ಥಿಕ ನೆರವು!
ದಿಗ್ಗಜ ಕಲಾವಿದರ ಜೊತೆ ನಟಿಸಿದ ಕನ್ನಡದ ಹಿರಿಯ ನಟ ಮನ್ದೀಪ್ ರಾಯ್ ಅವರಿಗೆ ಹೃದಯಾಘಾತವಾಗಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 500 ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ನಟರಾಗಿ ಮನ್ದೀಪ್ ರಾಯ್ ನಟಿಸಿದ್ದಾರೆ. ಆದರೆ ಈಗ ಚಿಕಿತ್ಸೆಗೆ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವುದಾಗಿ ವರದಿಯಾಗಿದೆ.
3 ದಿನಗಳ ಹಿಂದೆ ಮನ್ದೀಪ್ ರಾಯ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದು ಶೀಘ್ರದಲ್ಲೇ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಿಗಲಿದೆ. ಡಾ. ರಾಜ್ಕುಮಾರ್, ಶಂಕರ್ ನಾಗ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ರಂತಹ ದಿಗ್ಗಜ ಕಲಾವಿದರು ಜೊತೆಗೆ ಮನ್ದೀಪ್ ರಾಯ್ ತೆರೆ ಹಂಚಿಕೊಂಡಿದ್ದರು. 'ಮಿಂಚಿನ ಓಟ', 'ಆಕಸ್ಮಿಕ', 'ಪ್ರೀತ್ಸೋದ್ ತಪ್ಪಾ', 'ಆಪ್ತರಕ್ಷಕ', 'ರಾಜಕುಮಾರ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹೊಸಬರ ಸಣ್ಣ ಪುಟ್ಟ ಸಿನಿಮಾಗಳಲ್ಲಿ ಮನ್ದೀಪ್ ರಾಯ್ ನಟಿಸುತ್ತಿದ್ದರು. ಮುಂಬೈನಲ್ಲಿ ಹುಟ್ಟಿ ಬೆಳೆದ ಮನ್ದೀಪ್ ರಾಯ್ ಶಂಕರ್ ನಾಗ್ ಅವರ ಕರೆಗೆ ಓಗೊಟ್ಟು ಬೆಂಗಳೂರಿಗೆ ಬಂದು ನೆಲೆಸಿದರು. ಕನ್ನಡದಲ್ಲಿ ಜನಪ್ರಿಯ ಹಾಸ್ಯನಟರಾಗಿ ಗುರ್ತಿಸಿಕೊಂಡರು. ಮುಂಬೈ ರಂಗಭೂಮಿಯಲ್ಲಿ ಶಂಕರ್ನಾಗ್ ಜೊತೆ ಸ್ನೇಹ ಏರ್ಪಟಿತ್ತು. ಮುಂದೆ ಶಂಕರ್ ನಾಗ್ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಆದರೆ ಮನ್ದೀಪ್ ರಾಯ್ ನಾಟಕದ ಜೊತೆ ಜೊತೆಗೆ ಮುಂಬೈನಲ್ಲೇ ಕೆಲಸ ಮಾಡಿಕೊಂಡು ಇದ್ದರು. 'ಮಿಂಚಿನ ಓಟ' ಸಿನಿಮಾ ಸೆಟ್ಟೇರುವ ಸಮಯದಲ್ಲಿ ಶಂಕರ್ನಾಗ್ ಬೆಂಗಳೂರಿಗೆ ಬರುವಂತೆ ಮನ್ದೀಪ್ ರಾಯ್ಗೆ ಹೇಳಿದ್ದರು. ಹಿಂದು ಮುಂದು ನೋಡದೇ ಬಂದ ಅವರಿಗೆ ಆ ಚಿತ್ರಕ್ಕೆ ನಟಿಸುವ ಕೆಲಸ ಸಿಕ್ಕಿತ್ತು.

'ಮಿಂಚಿನ ಓಟ' ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿರು. ಶಂಕರ್ನಾಗ್ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. ಅಲ್ಲಿಂದ ಮುಂದೆ ನೂರಾರು ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ಬಣ್ಣ ಹಚ್ಚಿದರು. ಕನ್ನಡ ಬರದೇ ಇದ್ದರೂ ಕಲಿತು ಕನ್ನಡ ಕಲಾವಿದರಾಗಿ ಗುರ್ತಿಸಿಕೊಂಡರು. ಹಿರಿಯ ನಟ ಶಿವರಾಂ ಅವರ ಪ್ರೋತ್ಸಾಹ ಹಾಗೂ ಶಂಕರ್ ನಾಗ್ ಅವರ ತಾಯಿ ಸಹಾಯದಿಂದ ಕನ್ನಡ ಕಲಿತರಂತೆ. ಕಮಲ್ಹಾಸನ್, ಅಮೋಲ್ ಪಾಲೇಕರ್, ನಾನಾ ಪಾಟೇಕರ್ರಂತಹ ನಟರ ಜೊತೆಗೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅಭಿಮಾನಿಗಳು ಮನ್ದೀಪ್ ರಾಯ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.


Click it and Unblock the Notifications











