ದಲಿತನ ಮೇಲೆ ದರ್ಶನ್ ಹಲ್ಲೆ ಆರೋಪ: ಇಂದ್ರಜಿತ್ ಸುಳ್ಳು ಹೇಳುತ್ತಿದ್ದಾರೆಂದ ಸಂದೇಶ್ ನಾಗರಾಜ್
ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಒಡೆತನದ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ದರ್ಶನ್ ಹಾಗೂ ಅವರ ಗೆಳೆಯರು ದಲಿತ ಸಪ್ಲೈಯರ್ ಒಬ್ಬನನ್ನು ಹೊಡೆದಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದು, ಗೃಹ ಸಚಿವರಿಗೆ ದೂರು ಸಹ ನೀಡಿದ್ದಾರೆ.
Recommended Video
ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಂದೇಶ್ ನಾಗರಾಜ್, ''ನಮ್ಮ ಹೋಟೆಲ್ನಲ್ಲಿ ಆ ರೀತಿಯ ಘಟನೆ ನಡೆದಿಲ್ಲ. ಬೇಕಾದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಿ'' ಎಂದಿದ್ದಾರೆ.
''ನಮ್ಮ ಹೋಟೆಲ್ನಲ್ಲಿ ದಲಿತ ಸಪ್ಲೈಯರ್ಗಳು ಇಲ್ಲ. ಪೊಲೀಸರು ಬೇಕಾದರೆ ತನಿಖೆ ಮಾಡಲಿ. ಇಂದ್ರಜಿತ್ ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೆಯೋ ಗೊತ್ತಿಲ್ಲ'' ಎಂದಿದ್ದಾರೆ ಸಂದೇಶ್ ನಾಗರಾಜ್.

ಹೋಟೆಲ್ ಅನ್ನು ಬೆಳೆಸುತ್ತಿರುವವರ ಪರ ನಿಲ್ಲಿ: ಇಂದ್ರಜಿತ್
ಸಂದೇಶ್ ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಂದ್ರಜಿತ್ ಲಂಕೇಶ್, ''ನಿಮ್ಮ ಹೋಟೆಲ್ ಉದ್ಯಮವನ್ನು ಕಟ್ಟಿ ಬೆಳೆಸಿರುವುದು ನಿಮ್ಮ ಸಪ್ಲೈಯರ್ಗಳು. ನೀವು ಅವರ ಪರ ನಿಲ್ಲಬೇಕು ಅದನ್ನು ಬಿಟ್ಟು ಸೆಲೆಬ್ರಿಟಿಗಳ ಪರ ನಿಂತಿದ್ದೀರ'' ಎಂದಿದ್ದಾರೆ.

ಇತರ ಸಪ್ಲೈಯರ್ಗಳು ಪ್ರತಿಭಟನೆ ಮಾಡಿದ್ದಾರೆ: ಇಂದ್ರಜಿತ್
''ಸಿಸಿಟಿವಿ ದೃಶ್ಯಾವಳಿಗಳ ತನಿಖೆ ನಡೆಯಲಿ ಸತ್ಯ ಏನೆಂಬುದು ಗೊತ್ತಾಗುತ್ತದೆ. ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಇತರೆ ಸಪ್ಲೈಯರ್ಗಳು ಪ್ರತಿಭಟನೆ ಸಹ ಮಾಡಿದ್ದಾರೆ. ಪ್ರತಿಭಟನಾಕಾರರ ಜೊತೆ ಸೆಟಲ್ಮೆಂಟ್ ಮಾಡಿ ಪ್ರಕರಣವನ್ನು ಹತ್ತಿಕ್ಕಲಾಗಿದೆ'' ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಹಣದ ಕಟ್ಟುಗಳನ್ನು ಸಹ ಎಸೆದಾಡಲಾಗಿದೆ: ಇಂದ್ರಜಿತ್ ಲಂಕೇಶ್
'ಆರ್ಡರ್ ಮಾಡಿದ ಊಟ ತಡವಾಗಿ ತಂದ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ. ಹಣದ ಕಟ್ಟುಗಳನ್ನು ಎಸೆದಾಡಲಾಗಿದೆ. ಐದು ನೂರು ರೂಪಾಯಿಯ ಹಣದ ಕಟ್ಟೊಂದು ಲಾಬಿಗೆ ಬಂದು ಬಿದ್ದಿದೆ. ಇನ್ನೂ ಹಲವು ಮಾಹಿತಿ ನನ್ನ ಬಳಿ ಇದೆ. ದರ್ಶನ್ ಹಾಗೂ ಅದಕ್ಕೆ ಸಂಬಂಧಿಸಿದವರು, ಆರೋಪಗಳನ್ನು ನಿರಾಕರಿಸಿದ ನಂತರ ನಾನು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ'' ಎಂದಿದ್ದಾರೆ ಇಂದ್ರಜಿತ್ ಲಂಕೇಶ್.

ಗೃಹ ಸಚಿವರನ್ನು ಭೇಟಿಯಾಗಿ ದೂರು ನೀಡಿದ ಇಂದ್ರಜಿತ್ ಲಂಕೇಶ್
ಇಂದು ಬೆಳಿಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ ಹಾಗೂ ಅವರ ಗೆಳೆಯರಾದ ರಾಕೇಶ್ ಪಾಪಣ್ಣ, ಹರ್ಷಾ ಮೆಲಂಟಾ ಹಾಗೂ ಇತರರು ಕೆಲವು ದಿನಗಳ ಹಿಂದೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ದಲಿತ ಸಪ್ಲೈಯರ್ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು.


Click it and Unblock the Notifications











