'ಆಟಗಾರ'ನ ಅಸಲಿ ಆಟ ಮೆಚ್ಚಿ ಭೇಷ್ ಅಂದ ಅಧಿಕಾರಿಗಳು
ನಟ-ನಿರ್ಮಾಪಕ ದ್ವಾರಕೀಶ್ ಅವರ 49 ಚಿತ್ರ 'ಆಟಗಾರ' ಭರ್ಜರಿ ಹಿಟ್ ಆಗಿದ್ದು, 50 ನೇ ದಿನದತ್ತ ಚಿತ್ರ ಮುನ್ನುಗ್ಗುತ್ತಿದೆ. 'ಆಟಗಾರ'ನ ಅಸಲಿ ಆಟವನ್ನು ಕೇವಲ ಸಾಮಾನ್ಯ ಪ್ರೇಕ್ಷಕರು ಮತ್ತು ಅಭಿಮಾನಿಗಳು ಮಾತ್ರವಲ್ಲದೇ ಆಡಳಿತಾಧಿಕಾರಿಗಳು, ರಾಜಕೀಯ ನಾಯಕರು ಕೂಡ ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ನಿರ್ದೇಶಕ ಕೆ.ಎಮ್ ಚೈತನ್ಯ ಆಕ್ಷನ್-ಕಟ್ ಹೇಳಿರುವ 'ಆಟಗಾರ' ಭರ್ಜರಿ ಪ್ರದರ್ಶನ ಕಂಡು ಇದೀಗ ಯಶಸ್ವಿ 50 ನೇ ದಿನಗಳತ್ತ ದಾಪುಗಾಲಿಕ್ಕುತ್ತಿದೆ. ಈ ಶುಭ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಚಿತ್ರ ವೀಕ್ಷಿಸುವ ಮೂಲಕ 'ಆಟಗಾರ'ನ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ರಂಗಿತರಂಗ ನಂತರ ವಿದೇಶದಲ್ಲಿ ಆಟಗಾರನ ಆಟ ಶುರು]
ಒಂದು ಕಾಲದಲ್ಲಿ ಭೃಷ್ಟ ಅಧಿಕಾರಿಗಳಿಗೆ ಚಳಿ ಹುಟ್ಟಿಸಿದ ಖಡಕ್ ಲೋಕಾಯುಕ್ತ ಅಧಿಕಾರಿ ನ್ಯಾ. ಸಂತೋಷ್ ಹೆಗ್ಡೆ, ಮಾಜಿ ಸಿಟಿ ಪೊಲೀಸ್ ಕಮಿಷನರ್ ಎಸ್.ಪಿ ಸಾಂಗ್ಲಿಯಾನ, ಸುಗುತಾ ಶ್ರೀನಿವಾಸ್, ಖ್ಯಾತ ಪತ್ರಕರ್ತರು ಹಾಗೂ ಅಂಕಣ ಬರಹಗಾರರಾದ ವಿಶ್ವೇಶ್ವರ ಭಟ್, ವಾಣಿ ಗಣಪತಿ ಹಾಗೂ ಮಯೂರಿ ಮುಂತಾದವರು ಭಾನುವಾರ (ಅಕ್ಟೋಬರ್ 4) ದಂದು ಒರೆಯಾನ್ ಮಾಲ್ ನಲ್ಲಿ ಸ್ಪೆಷಲ್ ಶೋ ನೋಡಿ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಇಡೀ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.[ಚಿತ್ರ ವಿಮರ್ಶೆ: 'ಆಟಗಾರ'ನ ಆಟ, ಓಟ ಜೋರಾಗಿದೆ ಗುರು]
ಸ್ಯಾಂಡಲ್ ವುಡ್ ನ 10 ಸ್ಟಾರ್ ಗಳು ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ದ್ವಾರಕೀಶ್ ಅವರ ಹೋಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದಿತ್ತು. 'ಆ ದಿನಗಳು' ಫೇಮಸ್ ಡೈರೆಕ್ಟರ್ ಕೆ.ಎಮ್ ಚೈತನ್ಯ ಅವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.
ಇನ್ನು ವಿಶೇಷವಾಗಿ ಮಾಜಿ ಲೋಕಾಯುಕ್ತ ಅಧಿಕಾರಿ ಸಂತೋಷ್ ಹೆಗ್ಡೆ ಅವರು 1969 ರಲ್ಲಿ ಅಂದರೆ 29 ವರ್ಷದವರಿರುವಾಗ ಕಡೆಯ ಬಾರಿ ಚಿತ್ರ ನೋಡಿದ್ದರಂತೆ. ತದನಂತರ ಇದೀಗ 46 ವರ್ಷಗಳ ನಂತರ ಥಿಯೇಟರ್ ಗೆ ಬಂದು 'ಆಟಗಾರ'ನ ಅಸಲಿ ಆಟ ವೀಕ್ಷಿಸಿದ ಸಂತೋಷ್ ಹೆಗ್ಡೆ ಅವರು ಸಖತ್ ಥ್ರಿಲ್ಲ್ ಆಗಿದ್ದಾರೆ.['ಆಟಗಾರ'ನ ಆಟಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]
ಚಿತ್ರದಲ್ಲಿ ಬರುವ ಭೃಷ್ಟ ವ್ಯವಸ್ಥೆಯ ವಿರುದ್ದ ಹೋರಾಡುವ ಮನಸ್ಥಿತಿಯನ್ನು ಸಂತೋಷ್ ಅವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಒಟ್ನಲ್ಲಿ ದೊಡ್ಡ ದೊಡ್ಡ ಗೌರವಾನ್ವಿತ ವ್ಯಕ್ತಿಗಳು ಇಂತಹ ಒಂದು ಉತ್ತಮ ಚಿತ್ರ ನೋಡಿದ್ದು, ನಿಜಕ್ಕೂ ಕನ್ನಡ ಚಿತ್ರರಂಗದ ಸಾರ್ಥಕತೆಗೆ ಹಿಡಿದ ಕೈಗನ್ನಡಿ ಅಂದ್ರು ತಪ್ಪಾಗ್ಲಿಕ್ಕಿಲ್ಲ.


Click it and Unblock the Notifications













