ಸಂತೋಷ್ ಆನಂದ್ ರಾಮ್ ಬರೆದಿರುವ 5 ಹಾಡು ಸೂಪರ್ ಹಿಟ್
ಕನ್ನಡದ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ನಿರ್ದೇಶಕ ಎಂದು ಮಾತ್ರ ಗೊತ್ತಿದೆ. ನಿರ್ದೇಶನದ ಜೊತೆಗೆ ಇವರೊಬ್ಬ ಚಿತ್ರ ಸಾಹಿತಿ.
ಈಗಾಗಲೇ ಐದು ಹಾಡುಗಳನ್ನ ಬರೆದಿರುವ ಸಂತೋಷ್, ಎಲ್ಲವೂ ಸೂಪರ್ ಹಿಟ್ ಎನ್ನುವುದು ವಿಶೇಷ. ಅದರಲ್ಲಿ ಒಂದು ಹಾಡಿಗೆ ಸೈಮಾ ಪ್ರಶಸ್ತಿ ಕೂಡ ಲಭಿಸಿದೆ. ಈಗ ಯಜಮಾನ ಚಿತ್ರಕ್ಕೊಂದು ಹಾಡು ಬರೆದಿದ್ದಾರೆ. ಈ ಹಾಡಿನ ಮೇಲೂ ನಿರೀಕ್ಷೆ ಹೆಚ್ಚಿದೆ.
ಹಾಗಿದ್ರೆ, ಸಂತೋಷ್ ಆನಂದ್ ರಾಮ್ ಬರೆದಿರುವ ಆ ಐದು ಹಾಡುಗಳು ಯಾವುದು? ಯಾವ ಹಾಡಿಗೆ ಸೈಮಾ ಪ್ರಶಸ್ತಿ ಸಿಕ್ಕಿದೆ. ಸಂತೋಷ್ ಬರೆದ ಮೊದಲ ಹಾಡು ಯಾವುದು? ಮುಂದೆ ಓದಿ.....

ರಾಕಿಗೆ ಮೊದಲ ಹಾಡು
ದಾಖಲೆಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ ರಾಕಿ ಚಿತ್ರದಲ್ಲಿ ಸಂತೋಷ್ ಆನಂದ್ ರಾಮ್ ಒಂದು ಹಾಡು ಬರೆದಿದ್ದಾರೆ. '20-20 ಬಲ್ಲೆ ಬಲ್ಲೆ' ಹಾಡಿಗೆ ಸಂತೋಷ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ದೇವಿಶ್ರೀ ಪ್ರಸಾದ್ ಹಾಡಿದ್ದು ವಿಶೇಷ. ಈ ಹಾಡು ಆ ಸಮಯಕ್ಕೆ ಸದ್ದು ಮಾಡಿತ್ತಾದರೂ ಈಗ ನೆನಪಿಲ್ಲ ಅಷ್ಟೇ.

ಯಾರಲ್ಲಿ ಸೌಂಡು ಮಾಡೋದು
ಸಂತೋಷ್ ಆನಂದ್ ರಾಮ್ ನಿರ್ದೇಶಕರಾಗಿ ಕೆಲಸ ಮಾಡಿದ ಮೊದಲ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ. ಈ ಚಿತ್ರ ಮತ್ತು ಹಾಡುಗಳು ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಸಂತೋಷ್ ಬರೆದಿದ್ದ ಯಾರಲ್ಲಿ ಸೌಂಡು ಮಾಡೋದು ಹಾಡಂತೂ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಯಶ್ ಬಗ್ಗೆ ಮಾತಾಡೋರಿಗೆ ಈಗಲೂ ಈ ಹಾಡು ಉತ್ತರವಾಗಿದೆ.

ಬೊಂಬೆ ಹೇಳುತೈತೆ
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಬಳಿಕ ರಾಜಕುಮಾರ ಸಿನಿಮಾಗೆ ನಿರ್ದೇಶನ ಮಾಡಿದ್ರು. ಈ ಸಿನಿಮಾ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಅದಕ್ಕಿಂತ ದೊಡ್ಡ ಹಿಟ್ ಆಗಿದ್ದು ಸಂತೋಷ್ ಬರೆದಿದ್ದ ಹಾಡು 'ಬೊಂಬೆ ಹೇಳುತೈತೆ'. ಹರಿಕೃಷ್ಣ ನಿರ್ದೇಶನ, ವಿಜಯ್ ಪ್ರಕಾಶ್ ಗಾಯನ ಮೂಡಿಬಂದಿದ್ದ ಈ ಹಾಡು ಆಲ್ ಟೈಂ ಹಿಟ್ ಆಗಿದೆ. ಈ ಹಾಡಿನ ಸಾಹಿತ್ಯಕ್ಕೆ ಸೈಮಾ ಪ್ರಶಸ್ತಿ ಸಿಕ್ಕಿದೆ.

ರಾಜಕುಮಾರ ಚಿತ್ರದಲ್ಲಿ 3 ಹಾಡು
ಬೊಂಬೆ ಹೇಳುತೈತೆ ಹಾಡಿನ ಜೊತೆ ಇನ್ನು ಎರಡು ಹಾಡುಗಳಿಗೆ ಸಂತೋಷ್ ಆನಂದ್ ರಾಮ್ ಸಾಹಿತ್ಯವಿದೆ. ಯಾರಿವನು ಕನ್ನಡದವನು ಹಾಗೂ ಅಪ್ಪು ಡ್ಯಾನ್ಸ್ ಹಾಡಿಗೆ ಸಾಹಿತ್ಯ ರಚಿಸಿದ್ದು ಇದೇ ಸಂತೋಷ್. ಅಲ್ಲಿಗೆ ಈ ಹಾಡುಗಳು ಕೂಡ ಸೂಪರ್ ಹಿಟ್ ಆಗಿತ್ತು.

ಈಗ ಯಜಮಾನ
ಈ ಹಿಂದಿನ ಎಲ್ಲ ಹಾಡುಗಳು ಹಿಟ್ ಆಗಿವೆ. ಅದೇ ನಿರೀಕ್ಷೆಯಲ್ಲಿ ಈಗ ಯಜಮಾನ ಚಿತ್ರದ ಹಾಡು ಕೂಡ ಬಂದಿದೆ. ಫೆಬ್ರವರಿ 5ಕ್ಕೆ ಯಜಮಾನ ಟೈಟಲ್ ಹಾಡು ಬಿಡುಗಡೆಯಾಗುತ್ತಿದೆ. ಹರಿಕೃಷ್ಣ ಮತ್ತು ಸಂತೋಷ್ ಜೋಡಿಯಲ್ಲಿ ಈ ಹಾಡು ಬರ್ತಿರುವುದು ವಿಶೇಷ.


Click it and Unblock the Notifications











