ಶೋಕಿಗಾಗಿ ಸಿನಿಮಾ ಮಾಡುವವರಿಂದ ಕನ್ನಡ ಇಂಡಸ್ಟ್ರಿ ಹಾಳಾಗುತ್ತಿದೆ ಎಂದವರಾರು?
'ಚಿತ್ರ ನಿರ್ಮಾಣದ ಗಂಧ ಗಾಳಿಯೂ ಗೊತ್ತಿಲ್ಲದವರು, ಈರುಳ್ಳಿ-ಬೆಳ್ಳುಳ್ಳಿ ಮಾರುವವರೆಲ್ಲಾ ಗಾಂಧಿನಗರಕ್ಕೆ ಬಂದು ಶೋಕಿಗಾಗಿ ಸಿನಿಮಾ ಮಾಡ್ತಾರೆ' ಅಂತ ದಶಕಗಳ ಹಿಂದೆ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ಆಡಿದ ಮಾತುಗಳು ಗಲ್ಲಿಗಲ್ಲಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಹಳೇ ಸುದ್ದಿ.
ಇದೀಗ ಅದೇ ರೀತಿಯ ಹೇಳಿಕೆ ನೀಡಿ ಸುದ್ದಿ ಮಾಡಿರುವವರು ಮಾತ್ರ ನಿರ್ಮಾಪಕ ಕಮ್ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾ.ರಾ ಗೋವಿಂದು ಅವರು.

'ಕನ್ನಡ ಚಿತ್ರರಂಗ ಹಾಳಾಗುತ್ತಿದೆ ಎಂಬು ಕೂಗು ನಿನ್ನೆ-ಮೊನ್ನೆಯದಲ್ಲಾ, ಆದರೆ ನಿಜಕ್ಕೂ ಚಿತ್ರರಂಗ ಹಾಳಾಗುತ್ತಿರುವುದು ಶೋಕಿಗಾಗಿ ಸಿನಿಮಾ ಮಾಡಲು ಬರುತ್ತಿರುವ 'ಕೆಲವರಿಂದ', ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಕೆಎಫ್ ಸಿಸಿ ನೂತನ ಅಧ್ಯಕ್ಷರಾಗಿ ಸಾರಾ ಗೋವಿಂದು ಆಯ್ಕೆ]
ಸೋಮವಾರ ವಿನೋದ್ ಪ್ರಭಾಕರ್ ಅಭಿನಯದ 'ಟೈಸನ್' ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಾ ಗೋವಿಂದು ಅವರು 'ಇತ್ತೀಚೆಗೆ ವಾರಕ್ಕೆ ಸುಮಾರು 7 ರಿಂದ 8 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅಷ್ಟೊಂದು ಸಿನಿಮಾಗಳನ್ನು ಬಿಡುಗಡೆ ಮಾಡಬೇಡಿ ಎಂದು ಹೇಳಿದರೂ ಯಾರೂ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಇತ್ತೀಚೆಗೆ 'ಮಸ್ತ್ ಮೊಹಬ್ಬತ್' ಎಂಬ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾವನ್ನು ಈಗಲೇ ಬಿಡುಗಡೆ ಮಾಡಬೇಡಿ ಎಂದು ನಿರ್ಮಾಪಕರಿಗೆ ಹೇಳಿದರೂ ಕೇಳಲಿಲ್ಲ. ಹಲವು ನಿರ್ಮಾಪಕರಿಗೆ ಚಿತ್ರ ಸೋತರೂ ದೊಡ್ಡ ವಿಷಯವಲ್ಲ'.
ಈ ರೀತಿ ಶೋಕಿ ಸಿನಿಮಾ ಮಾಡಲು ಬಂದವರಿಂದಲೇ ಇವತ್ತು ಕನ್ನಡ ಚಿತ್ರರಂಗ ಹಾಳಾಗುತ್ತಿದೆ. ಹೀಗೆ ಪ್ರತೀ ವಾರ ಹೆಚ್ಚು ಹೆಚ್ಚು ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಉದ್ಧಾರವಾಗುತ್ತಿರುವುದು ಚಿತ್ರಮಂದಿರದ ಮಾಲಿಕರೇ ಹೊರತು ಕನ್ನಡ ಚಿತ್ರರಂಗವಲ್ಲ ಎಂದು ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











