'ಟಗರು' ಹೊಡ್ಕೊಂಡು, ಗಾಂಧಿನಗರಕ್ಕೆ ಬಂದ ದುನಿಯಾ ಸೂರಿ
ಸ್ಯಾಂಡಲ್ ವುಡ್ ನಲ್ಲಿ ಈಗಲೂ ಚಿರಯುವಕನಂತೆ ಕಂಗೊಳಿಸುತ್ತಾ ಸದಾ ಒಂದಲ್ಲೊಂದು ಚಿತ್ರದಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ ಅವರಿಗೆ ಸದ್ಯಕ್ಕೆ ಒಳ್ಳೊಳ್ಳೆ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ನಿರ್ದೇಶಕ ದುನಿಯಾ ಸೂರಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮತ್ತೊಂದು ಹೊಸ ಸಿನಿಮಾ ಮಾಡಲಿದ್ದಾರೆ.
'ಕಡ್ಡಿಪುಡಿ' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಹಾಗೂ ನಟ ಶಿವರಾಜ್ ಕುಮಾರ್ ಅವರು ಮತ್ತೆ ಒಂದಾಗುತ್ತಿದ್ದು, ಇವರಿಬ್ಬರ ಜುಗಲ್ ಬಂದಿಯಲ್ಲಿ ಮತ್ತೊಂದು ಪಾಜೆಕ್ಟ್ ರೆಡಿಯಾಗುತ್ತಿದೆ.[ದುನಿಯಾ ಸೂರಿ ಸಂದರ್ಶನ, ಕಡ್ಡಿಪುಡಿ ವಿಶೇಷಗಳು]
ಸದ್ಯಕ್ಕೆ ಚಿತ್ರಕ್ಕೆ 'ಟಗರು' ಎಂದು ಹೆಸರಿಟ್ಟಿದ್ದು, 'ಮೈಯೆಲ್ಲಾ ಪೊಗರು' ಎಂಬ ಅಡಿಬರಹದಲ್ಲಿ ಈ ಸಿನಿಮಾ ಮೂಡಿಬರಲಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ದುನಿಯಾ ಸೂರಿ ಅವರು "ಇದು ಸದ್ಯಕ್ಕೆ ಪ್ರಾರಂಭವಾಗುವ ಯೋಜನೆಯೇನಲ್ಲ. ಇದೀಗ ಇಬ್ಬರೂ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದು, ನಾನು ಶಿವಣ್ಣ ಅವರೊಂದಿಗೆ ಚರ್ಚಿಸಿದ್ದೇನೆ, ಅವರು ಒಂದು ಸಾಲಿನ ಕಥೆಯನ್ನು ಒಪ್ಪಿದ್ದಾರೆ. ಸ್ಕ್ರಿಪ್ಟ್ ಮುಗಿಸಲು ಶಿವರಾಜ್ ಕುಮಾರ್ ಅವರು ನನಗೆ ಬೇಕಾದಷ್ಟು ಸಮಯಾವಕಾಶ ನೀಡಿದ್ದಾರೆ. ಚಿತ್ರಕಥೆ ಅಂತಿಮವಾದ ಮೇಲಷ್ಟೇ ಮುಂದುವರೆಯಲು ಸಾಧ್ಯವಾಗುತ್ತದೆ' ಎಂದು ಸೂರಿ ನುಡಿದಿದ್ದಾರೆ.[ಪಕ್ಕಾ ಸ್ಕ್ರೀನ್ ಪ್ಲೇ ಚಿತ್ರ ಕಡ್ಡಿಪುಡಿ, ದುನಿಯಾ ಸೂರಿ]
ಇದೀಗ ಗಾಂಧಿನಗರದ ಬಲ್ಲಮೂಲಗಳ ಪ್ರಕಾರ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರು ಶಿವಣ್ಣ ಹಾಗೂ ಸೂರಿ ಅವರ 'ಟಗರು' ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರಂತೆ.
ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ದೊಡ್ಮನೆ ಹುಡುಗ' ಸಿನಿಮಾದ ಚಿತ್ರೀಕರಣಕ್ಕಾಗಿ ನಿರ್ದೇಶಕ ದುನಿಯಾ ಸೂರಿ ಅವರು ಹುಬ್ಬಳ್ಳಿಗೆ ತೆರಳಲಿದ್ದಾರೆ. 'ದೊಡ್ಮನೆ ಹುಡುಗ'ನ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಖಳನಟ ರವಿಶಂಕರ್ ಅವರ ಭಾಗದ ಚಿತ್ರೀಕರಣ ನಡೆಯಬೇಕಿದೆ. ಜೊತೆಜೊತೆಗೆ 'ಕೆಂಡಸಂಪಿಗೆ' ಚಿತ್ರದ ಮುಂದುವರಿದ ಭಾಗ 'ಕಾಗೆ ಬಂಗಾರ' ಸಿನಿಮಾಕ್ಕೂ ನಟರ ಶೋಧನೆಯಲ್ಲಿದ್ದೇನೆ ಎಂದು ದುನಿಯಾ ಸೂರಿ ಹೇಳಿದ್ದಾರೆ.
ಅದೇನೇ ಇರಲಿ 'ಕಡ್ಡಿಪುಡಿ' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಶಿವಣ್ಣ ಅಭಿಮಾನಿಗಳಿಗೆ ಮತ್ತೊಂದು ಚಿತ್ರ ಬರೋದು ಪಕ್ಕಾ ಅಂತಾಯ್ತು.


Click it and Unblock the Notifications












