ನೀನಾಸಂ ಸತೀಶನ 'ಕ್ವಾಟ್ಲೆ' ಅವತಾರ ಬಹಿರಂಗ
ರಂಗಭೂಮಿಯ ಪ್ರತಿಭೆ ನೀನಾಸಂ ಸತೀಶ ಇತ್ತೀಚೆಗಷ್ಟೇ ಅಂಜದ ಗಂಡು ನಾನು ಎಂದು ಹಾಡಿ ಜನರನ್ನು ರಂಜಿಸಿದ್ದರು. ಈಗ ಕ್ವಾಟ್ಲೆ ಸತೀಶ ನಾಗಿ ಕಾಣಿಸಿಕೊಂಡಿದ್ದಾರೆ. ಕ್ವಾಟ್ಲೆ ಸತೀಶ ಹೆಸರಿನ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಕುತೂಹಲ ಹುಟ್ಟಿಸಿದೆ.
ಲೂಸಿಯಾ ಯಶಸ್ಸಿನ ನಂತರ ಡ್ರಾಮಾ ಚಿತ್ರದ ನಟನೆಗೂ ಪ್ರಶಂಸೆ ಗಿಟ್ಟಿಸಿಕೊಂಡ ಸತೀಶ ಅವರು ಈಗ ರಿಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡ ನೈಜ ಘಟನಾವಳಿ ಆಧಾರಿತ ಚಿತ್ರ 'ನಡುವಲ ಕೊಂಜಮ್ ಪಕ್ಕಥ ಕಾಣುಮ್" ಚಿತ್ರದ ಕನ್ನಡ ಆವೃತ್ತಿ 'ಕ್ವಾಟ್ಲೆ ಸತೀಶ' ಚಿತ್ರದಲ್ಲಿ ನೀನಾಸಂ ಸತೀಶ ನಾಯಕ.
ಕರ್ನಾಟಕದ ಅಯೋಧ್ಯಾಪುರಂ ಚಿತ್ರದ ನಾಯಕಿ ಸೋನಿಯಾ ಗೌಡ ಈ ಚಿತ್ರದಲ್ಲಿ ಸತೀಶನಿಗೆ ನಾಯಕಿಯಾಗಲಿದ್ದಾರೆ. ಚಿತ್ರದ ಫಸ್ಟ್ ಲುಕ್ ನೋಡಿ ಇದು ಘಜನಿ ರಿಮೇಕ್ ಅಂದುಕೊಳ್ಳಬೇಡಿ. ಘಜನಿ ಅವತಾರದಲ್ಲಿ ಸತೀಸ ಕಾಣಿಸಿಕೊಳ್ಳುವುದಕ್ಕೂ ಚಿತ್ರದ ಕಥೆಗೂ ನಂಟಿದೆ. ಅದರೆ, ಅದಕ್ಕೂ ಘಜನಿ ಕಥೆಗೂ ಸಂಬಂಧವಿಲ್ಲ. "ಈ ಚಿತ್ರದಲ್ಲಿ ಕಾಣುವ ಕ್ವಾಟ್ಲೆ ಸತೀಶನಿಗೂ ಘಜನಿ ಚಿತ್ರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ" ಎಂದು ಅಡಿಬರಹ ಹಾಕಲಾಗಿದೆ.

ಕ್ವಾಟ್ಲೆ ಸತೀಶ ಚಿತ್ರದ ಶೂಟಿಂಗ್ ಫೆ.20 ರಿಂದ ಅರಂಭಗೊಂಡಿದ್ದು, ನಿರ್ದೇಶಕ ಮಹೇಶ್ ರಾವ್ ಅವರು ಈ ರೀತಿ ವಿಶಿಷ್ಟ ಪೋಸ್ಟರ್ ವಿನ್ಯಾಸಗೊಳಿಸಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. ತಮಿಳಿನ ಬಾಲಾಜಿ ಅವರ ಚೊಚ್ಚಲ ನಿರ್ದೇಶನದಲ್ಲಿ ವಿಜಯ್ ಸೇಥುಪತಿ ಹಾಗೂ ಗಾಯತ್ರಿ ಅಭಿನಯದ ಈ ಚಿತ್ರದ ಕಥೆಯನ್ನು ಕನ್ನಡದಲ್ಲಿ ಬದಲಾಯಿಸಲಾಗಿದೆ ಎಂದು ಮಹೇಶ್ ರಾವ್ ಹೇಳಿಕೊಂಡಿದ್ದಾರೆ.
ಕೇಸ್ ನಂ. 18/9, ಭದ್ರ, ಮುರಳೀ ಮೀಟ್ಸ್ ಮೀರಾ ಚಿತ್ರದ ನಂತರ ಮಹೇಶ್ ರಾವ್ ಅವರು ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ಸಂಭಾಷಣೆ ಬರೆಯುತ್ತಿರುವುದು ವಿಶೇಷ.


Click it and Unblock the Notifications











