ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಲೀಲಾವತಿ
ಸ್ಯಾಂಡಲ್ ವುಡ್ ಹಿರಿಯ ನಟಿ ಲೀಲಾವತಿ ಬಚ್ಚಲು ಮನೆಯಲ್ಲಿ ಕಾಲು ಜಾರಿಬಿದ್ದು ಸೊಂಟ ಮತ್ತು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ತಕ್ಷಣ ಅವರನ್ನು ನೆಲಮಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪುತ್ರ ವಿನೋದ್ ರಾಜ್ ಜೊತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಲೀಲಾವತಿ ಅವರಿಗೆ ವೈದ್ಯರು ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
Recommended Video
ಈ ಬಗ್ಗೆ ಮಾಹಿತಿ ನೀಡಿರುವ ವಿನೋದ್ ರಾಜ್ ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಸುಮಾರು ಒಂದು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿದ್ದಾರೆ. ಜೋರಾಗಿ ಕೂಗಿ ಯಾರನ್ನಾದರೂ ಕರೆಯಲೂ ಸಾಧ್ಯವಾಗಿಲ್ಲ. ಬಚ್ಚಲ ಮನೆಯಲ್ಲೇ ನೆರಳಾಗಿದ್ದಾರೆ. ಬಳಿಕ ನಿಧಾನವಾಗಿ ಬಾಗಿಲು ತೆಗೆದು ಹೊರಬಂದಿದ್ದಾರೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ನಟಿ ಲೀಲಾವತಿ ಅವರಿಗೆ 83 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದಾರೆ. ನಟಿ ಲೀಲಾವತಿ ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಮಾಂಗಲ್ಯ ಯೋಗ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಲೀಲಾವತಿ ಅನೇಕ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ, ಪೋಷಕ ನಟಿಯಾಗಿ 3 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರಾಭಿಮಾನಿಗಳನ್ನು ರಂಜಿಸಿದ್ದಾರೆ.

ಲೀಲಾವತಿ ಸದ್ಯ ಬಣ್ಣ ಹಚ್ಚದೆ ವರ್ಷವೇ ಆಗಿದೆ. 2009ರಲ್ಲಿ ಲೀಲಾವತಿ ಕೊನೆಯದಾಗಿ ಯಾರದು ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಪುತ್ರ ವಿನೋದ್ ರಾಜ್ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಮತ್ತೆ ತೆರೆಮೇಲೆ ಬಂದಿಲ್ಲ. ನಟನೆಯ ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
ಇನ್ನು ಇತ್ತೀಚಿಗಷ್ಟೆ ನಟ ವಿನೋದ್ ರಾಜ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದರು. ಹಿರಿಯ ಕಲಾವಿದೆ ಲೀಲಾವತಿ ಮತ್ತು ವಿನೋದ್ ರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡುತ್ತಿರುವವರ ವಿರುದ್ಧ ವಿನೋದ್ ರಾಜ್ ಪೋಲೀಸರ ಮೊರೆ ಹೋಗಿದ್ದರು. ಸದ್ಯ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಬಂಧಿತ ವ್ಯಕ್ತಿ ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸ್ ವಶದಲ್ಲಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಕಳೆದ ಎಂಟು ತಿಂಗಳಿಂದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಟ ವಿನೋದ್ ರಾಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿದಾಡಿತ್ತು. ದೂರು ನೀಡಿದ ಬಳಿಕ ಮಾತನಾಡಿದ್ದ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದರು. "ನಾನು ಯಾವುದೇ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದಿಲ್ಲ. ಸಕ್ರಿಯವಾಗಿಯೂ ಇಲ್ಲ. ಆದರೆ ಕೆಲ ತಿಂಗಳ ಹಿಂದೆ ನನ್ನ ಮಾನಹಾನಿ ಆಗುವಂತ ಫೋಟೋ ಫೇಸ್ ಬುಕ್ ಪೋಸ್ಟ್ ಆಗಿರುವುದು ಸ್ನೇಹಿತರು ಗಮನಕ್ಕೆ ತಂದರು" ಎಂದು ಹೇಳಿದರು.
ಪೋಸ್ಟ ನಲ್ಲಿ ನನ್ನ ಫೋಟೋವನ್ನು ಮಾರ್ಫ್ ಮಾಡಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಈ ರೀತಿಯಾಗಿ ಮಾಡಿ ನನ್ನ ಮಾನಕಳೆಯುವ ಪ್ರಯತ್ನ ನಡೆದಿದೆ. ದೂರು ನೀಡೋಣ ಎಂದು ಸ್ನೇಹಿತರು ಹೇಳಿದರು. ಈ ರೀತಿ ಯಾರಿಗಾದರೂ ಮಾಡಿದರೆ ನೋವಾಗುತ್ತಿದೆ. ಈ ರೀತಿಯ ಸುಳ್ಳು ಆರೋಪಗಳು ನೋವು ತರಿಸುತ್ತದೆ. ನಾನು ನನ್ನ ತಾಯಿ ನೋಡಿಕೊಂಡು, ಕೃಷಿ ಮಾಡಿಕೊಂಡು ನಮ್ಮ ಪಾಡಿಗೆ ನಾವು ಇದ್ದೀವಿ. ನಮ್ಮ ವಿರುದ್ಧ ಈ ರೀತಿಯ ಪೋಸ್ಟ್ ಗಳನ್ನು ಯಾರು ಮಾಡುತ್ತಿದ್ದಾರೊ ಗೊತ್ತಿಲ್ಲ" ಎಂದು ವಿನೋದ್ ರಾಜ್ ಮಾಧ್ಯಮದ ಜೊತೆ ಮಾತನಾಡಿದರು.
ಇದರ ಬೆನ್ನಲ್ಲೇ ಈಗ ತಾಯಿ, ಹಿರಿಯ ನಟಿ ಕಾಲುಜಾರಿ ಬಿದ್ದು ಗಾಯಗೊಂಡಿರುವುದು ವಿನೋದ್ ರಾಜ್ ಅವರಿಗೆ ಮತ್ತಷ್ಟು ನೋವು ತಂದಿದೆ.


Click it and Unblock the Notifications











