ಕಷ್ಟದಲ್ಲಿದ್ದ ನಟಿ ಲೀಲಾವತಿಗೆ ಕರುಣಾನಿಧಿ 'ಮಹಾನ್' ವ್ಯಕ್ತಿಯಾಗಿದ್ದೇಕೆ.?
Recommended Video

ತಮಿಳುನಾಡು ಕಂಡ ಧೀಮಂತ ರಾಜಕಾರಣಿ ಹಾಗೂ ಸಾಹಿತಿ ಕರುಣಾನಿಧಿಗೆ ಕನ್ನಡ ಚಿತ್ರರಂಗದ ಜೊತೆ ಅಷ್ಟಾಗಿ ಸಂಬಂಧ ಇರಲಿಲ್ಲ. ಅಂದ್ರೆ, ಯಾವುದೇ ಕನ್ನಡ ಸಿನಿಮಾಗಳಲ್ಲಿಯೂ ಕರುಣಾನಿಧಿ ಕೆಲಸ ಮಾಡಿಲ್ಲ. ಆದ್ರೆ, ಕನ್ನಡದ ಹಲವು ಸಿನಿತಾರೆಯರ ಜೊತೆ ಕರುಣಾನಿಧಿಗೆ ಆತ್ಮೀಯ ಸಂಬಂಧವಿತ್ತು.
ಕನ್ನಡ ಕಲಾವಿದರನ್ನ ಕಂಡ್ರೆ ಕರುಣಾನಿಧಿ ತುಂಬಾ ಸೌಜನ್ಯದಿಂದ ಕಾಣುತ್ತಿದ್ದರು. ಇನ್ನು ಆಗಿನ ಸಮಯದಲ್ಲಿ ಅನೇಕ ಕನ್ನಡ ಕಲಾವಿದರು ಚೆನ್ನೈನಲ್ಲೇ ಉಳಿದುಕೊಂಡಿದ್ದರಿಂದ ಕರುಣಾನಿಧಿ ಅವರ ಪರಿಚಯ ಚೆನ್ನಾಗಿತ್ತು. ಹೀಗಾಗಿ, ಅನೇಕ ಸ್ಯಾಂಡಲ್ ವುಡ್ ತಾರೆಯರು ಅವರ ಜೊತೆ ಉತ್ತಮ ಬಾಂಧವ್ಯವನ್ನ ಕೂಡ ಹೊಂದಿದ್ದರು.
ಅದಕ್ಕೆ, ನಿದರ್ಶನ ಹಿರಿಯ ನಟಿ ಲೀಲಾವತಿ. ಹೌದು, ಲೀಲಾವತಿ ಅವರನ್ನ ಕಂಡರೇ ಕರುಣಾನಿಧಿ ಅವರಿಗೆ ಹೆಚ್ಚು ಗೌರವ. ಲೀಲಾವತಿ ಅವರು ಕಷ್ಟದಲ್ಲಿದ್ದಾಗ 'ಕಲೈನಾರ್' ಸಹಾಯಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿ ಶೂಟೌಟ್ ಆಗಿದ್ದಾಗಲೂ ಇದೇ ಕರುಣಾನಿಧಿ ಲೀಲಾವತಿ ಪರವಾಗಿ ದನಿ ಎತ್ತಿದ್ದರು. ಈ ಎಲ್ಲಾ ವಿಷ್ಯಗಳ ಬಗ್ಗೆ ನಟಿ ಲೀಲಾವತಿ ಬೇಸರದಿಂದ ಹೇಳಿಕೊಂಡಿದ್ದಾರೆ. ಹಾಗಿದ್ರೆ, ಕರುಣಾನಿಧಿ ಬಗ್ಗೆ ಲೀಲಾವತಿ ಹೇಳಿದ್ದೇನು.? ಮುಂದೆ ಓದಿ....

ಅವರೊಬ್ಬ ದೊಡ್ಡ ಕಲಾವಿದ
''ಕರುಣಾನಿಧಿ ಒಳ್ಳೆಯ ಸಾಹಿತಿ. ಸಕಲಕಲಾವಲ್ಲಭ ಎನ್ನುವ ರೀತಿಯಲ್ಲಿ ಎಲ್ಲ ಕಲೆಯಲ್ಲೂ ಅವರಿದ್ರು. ಅವರೊಬ್ಬ ದೊಡ್ಡ ಕಲಾವಿದರು. ಒಳ್ಳೆ ಮಾತುಗಾರ. ಅವರ ಮಾತಲ್ಲಿ ಜನರನ್ನ ಆಕರ್ಷಣೆ ಮಾಡುವ ಶಕ್ತಿ ಇತ್ತು. ಎರಡು ಚಕ್ರದ ಗಾಡಿಯಲ್ಲಿ ತಳ್ಕೊಂಡು ಬಂದು ಜನರ ಜೊತೆಯಲ್ಲಿ ಇರ್ತಿದ್ರು. ಕರುಣಾನಿಧಿ ಅವರನ್ನ ನೋಡಿದಾಗ ಬದುಕುಬೇಕೆಂಬ ಆಸೆ ಬರ್ತಿತ್ತು''.

ನನಗೆ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಂದ್ರು
''ನಾನು 60 ವರ್ಷ ತೋಟ ಮಾಡ್ಕೊಂಡು ತಮಿಳುನಾಡಿನಲ್ಲಿದ್ದೆ. ಎನ್.ಟಿ.ಆರ್, ಚಿರಂಜೀವಿ, ಎಂ.ಜಿ.ಆರ್ ಅಂತಹ ಶ್ರೇಷ್ಠ ಕಲಾವಿದರೆಲ್ಲಾ ಅಲ್ಲಿ ಇದ್ದು ಬಂದವರೇ. ನಾನು ತಮಿಳುನಾಡಿನಲ್ಲಿದ್ದಾಗ ನನಗೆ ಯಾವುದೇ ತೊಂದರೆಯಾದ್ರು, ಕೂಡಲೇ ಅವರ ಗಮನಕ್ಕೆ ತರುತ್ತಿದ್ದೆ. ತೋಟದಲ್ಲಿ ಏನಾದರೂ ಸಮಸ್ಯೆಯಾದ್ರೆ, ಕಳ್ಳತನ ಆದ್ರೆ ಅವರ ಬಳಿ ಹೇಳುತ್ತಿದ್ದೆ. ಆಗ ಅವರು ಜನರನ್ನ ಕಳುಹಿಸಿ ನಮಗೆ ಏನು ತೊಂದರೆಯಾಗಂದೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸುತ್ತಿದ್ದರು''.

ಶೂಟೌಟ್ ಆದಾಗಲೂ ಪರವಾಗಿದ್ದರು
''ಬೆಂಗಳೂರಿನಲ್ಲಿ ನಮ್ಮ ಮೇಲೆ ಶೂಟೌಟ್ ಆದಾಗ, ತಮಿಳುನಾಡಿನಲ್ಲಿದ್ದ ಕರುಣಾನಿಧಿ ಅವರಿಗೆ ವಿಷ್ಯ ಗೊತ್ತಾಗಿ, ನಮ್ಮ ನೆರವಿಗೆ ಬಂದ್ರು. ಇಲ್ಲಿನ ಸರ್ಕಾರದ ಜೊತೆ ಮಾತನಾಡಿ, ನಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಹೀಗೆ, ಯಾವಗಲೂ ನಮಗೆ ನೆರವಾಗುತ್ತಿದ್ದರು''.

ಹೆಸರಲ್ಲೇ ಕರುಣೆ ಹೊಂದಿರುವ ಕರುಣಾಮಯಿ
''ಅವರ ಹೆಸರು ಕರುಣಾನಿಧಿ. ಅವರ ಬಳಿ ಕರುಣೆಗೆ ಜಾಗವಿಲ್ಲ ಎಂದು ಹೇಳೋದಕ್ಕೆ ಆಗಲ್ಲ. ಕರುಣೆ ಎಂಬ ಬೊಕ್ಕಸವೇ ಅವರ ಬಳಿ ಇದೆ. ತುಂಬಾ ಒಳ್ಳೆಯವರು ಅವರು. ಅವರನ್ನ ಕಂಡ್ರೆ ಯಾರಿಗೂ ದ್ವೇಷವಿಲ್ಲ ಎಂದು ಎನಿಸುತ್ತಿದೆ. ಸಿನಿಮಾದ ಜೊತೆ ನಂಟು ಹೇಗೋ ಗೊತ್ತಿಲ್ಲ, ಆದ್ರೆ ವೈಯಕ್ತಿಕವಾಗಿ ನಾನು ಅವರ ವ್ಯಕ್ತಿತ್ವವನ್ನ ಬಲ್ಲೆ'' ಎಂದು ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕರುಣಾನಿಧಿ ಜೊತೆ ಸಿನಿಮಾ ಮಾಡಬೇಕಿತ್ತು
''ನಾನು ಆಗ ತುಂಬಾ ಕಷ್ಟದಲ್ಲಿದ್ದೆ. ಆಗ ಕಥಾನಾಯಕಿ ಪಾತ್ರಕ್ಕೆ 1200 ರೂಪಾಯಿ ಸಂಭಾವನೆ ಕೊಡ್ತಿದ್ರು. ಅಂತಹ ಸಮಯದಲ್ಲಿ ಕರುಣಾನಿಧಿ ಅವರು ನಾನು ಕನ್ನಡ ಸಿನಿಮಾ ಮಾಡ್ತೀನಿ, ನೀವು ಅದರಲ್ಲಿ ಅಭಿನಯಿಸಿ ಎಂದು ಕೇಳಿದ್ದರು. ಈ ಸಿನಿಮಾ ಮಾಡೋದಕ್ಕೆ 10 ಸಾವಿರ ಕೊಡ್ತೀನಿ ಅಂದ್ರು. ನಾನು 12 ಸಾವಿರ ಕೊಡಿ ಎಂದೆ. ಇಲ್ಲಮ್ಮ ನನ್ನಿಂದ ಆಗಲ್ಲ, ನಾನು ಕಷ್ಟದಲ್ಲಿದ್ದೇನು ಎಂದ್ರು. ನಾನು ಕೇಳಿದ್ದು ನನ್ನ ಜೀವನಕ್ಕಾಗಿ... ಈಗ ಅನಿಸುತ್ತಿದೆ, ಯಾಕಾದ್ರೂ ಆ ಸಿನಿಮಾ ಬಿಟ್ಟೆ ಅಂತ'' ಬೇಸರ ವ್ಯಕ್ತಪಡಿಸಿದರು ಲೀಲಾವತಿ.


Click it and Unblock the Notifications











