ಊಬರ್ ಚಾಲನೆ ಮಾಡುವಾಗ ತಂದೆ ಅಶ್ವಥ್ ಫೋಟೋ ನೋಡಿ ಭಾವುಕರಾದ ಶಂಕರ್ ಅಶ್ವಥ್
ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಮೈಸೂರಿನಲ್ಲಿ ಊಬರ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅಪರೂಪಕ್ಕೆ ಸಿಗುವ ಸಿನಿಮಾ ಅವಕಾಶಗಳನ್ನು ಬಳಸಿಕೊಳ್ಳುತ್ತ ಅಭಿನಯದ ಜೊತೆಗೆ ಊಬರ್ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಖ್ಯಾತ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಮೈಸೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿರುವುದು ಈ ಹಿಂದೆ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಸಿನಿಮಾ ಅವಕಾಶಗಳಿಲ್ಲದೆ ಊಬರ್ ಚಾಲಕನಾಗಿ ಕೆಲಸ ಮಾಡುತ್ತ ನ್ಯಾಯವಾಗಿ ದುಡಿಮೆ ಮಾಡಿ ಜೀವನ ನಡೆಸುವ ಮೂಲಕ ಅನೇಕರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ಅಶ್ವಥ್ ಬಗ್ಗೆ ತಿಳಿದು ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಯಜಮಾನ' ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು.
ಸದ್ಯ ಸಿನಿಮಾ ಮುಗಿಸಿ ಮತ್ತೆ ತನ್ನ ಕೆಸಕ್ಕೆ ಮರಳಿರುವ ಶಂಕರ್ ಇಂದು ತಂದೆಯ ಫೋಟೋ ನೋಡಿ ಭಾವುಕರಾಗಿದ್ದಾರೆ. ಊಬರ್ ಚಲಾಯಿಸುತ್ತಿದ್ದಾಗ ಶಂಕರ್ ಅವರಿಗೆ ಅನಿರೀಕ್ಷಿತವಾಗಿ ಅಪ್ಪನ ಫೋಟೋ ಎದುರಾಗಿದೆ. ಆ ಫೋಟೋ ನೋಡಿ ಶಂಕರ್ ಹೇಳಿದ್ದು ಹೀಗೆ.

"ನನ್ನ ತಂದೆ ನನ್ನನ್ನು ನೋಡಿ ಶಭಾಷ್ ಮಗನೆ ನ್ಯಾಯವಾಗಿ ಧರ್ಮವಾಗಿ ನನಗೆ ಇಷ್ಟ ವಾದ ರೀತಿಯಲ್ಲಿ ಬದುಕುತ್ತಿದ್ದೀಯಾ ಅಂದರೆನೋ ಅನ್ನಿಸಿತು. ಇವತ್ತು ಊಬರ್ ಸೇವೆಯಲ್ಲಿ ತೊಡಗಿದ್ದಾಗ ದಾರಿಯಲ್ಲಿ ಯಾರೋ ಮಹಾನುಭಾವರು ನನ್ನ ತಂದೆಯ ಫೋಟೋನ ಗೋಡೆ ಮೇಲೆ ಲ್ಯಾಮಿನೇಟ್ ಮಾಡಿ ಹಾಕಿಸಿದ್ದಾರೆ, ಅಲ್ಲಿ ಒಂದು ಕ್ಷಣ ನಿಂತು ಹೃದಯಪೂರ್ವಕವಾಗಿ ನಮಿಸಿ ಮುಂದೆ ಹೊರಟೆ" ಎಂದು ಹೇಳಿಕೊಂಡಿದ್ದಾರೆ.
ಮೈಸೂರಿನ ನಗರ ಪಾಲಿಕೆಯವರು ಗೋಡೆಗಳ ಮೇಲೆ ಗಣ್ಯರ ಫೋಟೋಗಳನ್ನು ಹಾಕಿದ್ದಾರೆ. ಶಂಕರ್ ಅಶ್ವಥ್ ಅವರಿಗೆ ಅವರ ತಂದೆಯ ಫೋಟೋ ಕಣ್ಣಿಗೆ ಬಿದ್ದಿದೆ. ಆಗ ಅಪ್ಪನ ಭಾವಚಿತ್ರಕ್ಕೆ ನಮಿಸಿ ಮುಂದೆ ಸಾಗಿದ್ದಾರೆ.


Click it and Unblock the Notifications











