ಶಂಕ್ರಣ್ಣನ ಪುಣ್ಯ ಸ್ಮರಣೆ: ಆಟೋರಾಜನನ್ನು ಸ್ಮರಿಸಿದ ರಾಜಕಾರಣಿಗಳು
ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕ, ಪ್ರತಿಭಾನ್ವಿತ ನಟ ಶಂಕರ್ ನಾಗ್ ಅಗಲಿ ಇಂದಿಗೆ 31 ವರ್ಷ ಕಳೆದಿದೆ. ಸೆಪ್ಟೆಂಬರ್ 30, 1990ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕರಾಟೆ ಕಿಂಗ್ ಸಾವನ್ನಪ್ಪಿದ್ದರು. ಶಂಕ್ರಣ್ಣನ ದೈಹಿಕವಾಗಿ ಇಲ್ಲವಾದರೂ ಪ್ರತಿಯೊಬ್ಬ ಅಭಿಮಾನಿಯ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ಶಂಕರ್ ನಾಗ್ ಅವರು ಬದುಕಿದ್ದರೆ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆದಿರುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ಏಕಂದ್ರೆ ಆಗಿನ ಸಮಯದಲ್ಲೇ ಶಂಕರ್ ಅವರು ಭವಿಷ್ಯದ ಬಗ್ಗೆ ಚಿಂತಿಸಿದ್ದರು. ಅದಕ್ಕೆ ತಕ್ಕಂತೆ ಕೆಲಸ ಮಾಡ್ತಿದ್ದರು. ಕೇವಲ ಚಿತ್ರರಂಗ ಮಾತ್ರವಲ್ಲ ಸಾಮಾಜಿಕವಾಗಿಯೂ ಅನೇಕ ರೀತಿಯ ಯೋಜನೆಗಳನ್ನು ರೂಪಿಸಿದ್ದರು. ಆದರೆ ಅದೆಲ್ಲವನ್ನು ಅರ್ಧಕ್ಕೆ ಬಿಟ್ಟು ವಿಧಿಯ ಆಟಕ್ಕೆ ಶರಣಾಗಬೇಕಾಯಿತು.
ಶಂಕರ್ ನಾಗ್ ಅವರ ಪುಣ್ಯ ಸ್ಮರಣೆಯ ವಿಶೇಷವಾಗಿ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಆಟೋರಾಜನನ್ನು ಸ್ಮರಿಸಿಕೊಂಡಿದ್ದಾರೆ. ಟ್ವಿಟ್ಟರ್ ಮೂಲಕ ನಮನ ಸಲ್ಲಿಸಿದ್ದಾರೆ.

- 'ಅಪ್ರತಿಮ ನಟನೆ, ಸೃಜನಶೀಲ ನಿರ್ದೇಶನದಿಂದ ಕನ್ನಡಿಗರ ಮನದಲ್ಲಿ ನೆಲೆಸಿದ ಆಟೋರಾಜ, ಚಿತ್ರರಂಗದ ಜೊತೆಗೆ ಕಿರುತೆರೆಯಲ್ಲೂ 'ಮಾಲ್ಗುಡಿ ಡೇಸ್' ನಂತಹ ಕಲಾಕೃತಿ ನೀಡಿದ ಕಲಾವಿದ ಶ್ರೀ ಶಂಕರ್ ನಾಗ್ ಅವರ ಸಂಸ್ಮರಣೆ ದಿನದ ಅನಂತ ನಮನಗಳು. ಅವರ ಪ್ರತಿಭೆ, ಕಲಾಪ್ರೌಢಿಮೆ ಚಿತ್ರಗಳ ಮೂಲಕ ಸದಾ ನಮ್ಮ ಜೊತೆಗಿದೆ' ಎಂದು ಸಚಿವ ಗೋಪಾಲಯ್ಯ ಸ್ಮರಿಸಿದ್ದಾರೆ.
- 'ಹಲವಾರು ಯಶಸ್ವೀ ಚಲನಚಿತ್ರಗಳು ಹಾಗೂ ಧಾರಾವಾಹಿಗಳ ಮೂಲಕ ಜನರ ಮನದಲ್ಲಿ ಚಿರಸ್ಥಾಯಿಯಾಗಿರುವ ಅದ್ಭುತ ಕಲಾವಿದ, ತಂತ್ರಜ್ಞ, ನಿರ್ದೇಶಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು. ತಮ್ಮ ಆಕರ್ಷಕ ವ್ಯಕ್ತಿತ್ವ, ಅಸಾಮಾನ್ಯ ಸಾಧನೆಗಳಿಂದಾಗಿ ಅವರು ನಾಡಿನ ಕಲಾಲೋಕದ ಲೆಜೆಂಡ್ ಆಗಿಯೇ ಇರಲಿದ್ದಾರೆ' ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ನೆನಪಿಸಿಕೊಂಡಿದ್ದಾರೆ.

-'ಕನ್ನಡ ಚಿತ್ರರಂಗದ ದಂತಕಥೆಯಂತೆ ಬದುಕಿದ ಶ್ರೇಷ್ಠ ಕಲಾವಿದ, ನಟ, ನಿರ್ದೇಶಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ನಮನಗಳು. ವಿಭಿನ್ನವಾದ ಕಥೆ, ನಟನೆಗಳ ಮೂಲಕ ಶಂಕರ್ ನಾಗ್ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೆಲೆಯಾಗಿದ್ದಾರೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೋಸ್ಟ್ ಹಾಕಿದ್ದಾರೆ.
-'ಕನ್ನಡ ಚಿತ್ರರಂಗದ ಮರೆಯದ ಮಾಣಿಕ್ಯ, ಅತ್ಯುತ್ತಮ ನಿರ್ದೇಶಕ ತಮ್ಮ ನಟನಾ ಕೌಶಲ್ಯದಿಂದ ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಅಮರರಾಗಿರುವ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯ ಆದರಪೂರ್ವಕ ಸ್ಮರಣೆಗಳು. ಅವರ ಬದುಕು ಸಾಧನೆಗಳು ಸದಾ ನಮಗೆ ಸ್ಪೂರ್ತಿ' ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸ್ಮರಿಸಿದ್ದಾರೆ.
- 'ಸಿನಿಮಾ ಜಗತ್ತಿನಲ್ಲಿ ತಮ್ಮ ವಿಭಿನ್ನ ಪ್ರಯತ್ನ ಹಾಗೂ ಸಾಮಾಜಿಕ ಕಳಕಳಿಯಿಂದಾಗಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ, ಅಭಿಮಾನಿಗಳ ಪ್ರೀತಿಯ 'ಆಟೋರಾಜ' ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು' ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಚಿತ್ರರಂಗದ ಬಂಧುವನ್ನು ನೆನಪಿಸಿಕೊಂಡಿದ್ದಾರೆ

- 'ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ, ಮರೆಯಲಾಗದ ಮಾಣಿಕ್ಯ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಗೌರವ ನಮನಗಳು' ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಟ್ವೀಟ್ ಮಾಡಿದರು.
- 'ಕನ್ನಡ ಚಿತ್ರರಂಗದ ಕ್ರಿಯಾಶೀಲ ನಟ, ಕಾಲ್ಪನಿಕ ಹಳ್ಳಿ ಮಾಲ್ಗುಡಿಗೆ ಮೂರ್ತ ರೂಪ ನೀಡಿ, ಕನ್ನಡಿಗರ ಸೃಜನಶೀಲತೆಯನ್ನು ದೇಶಕ್ಕೇ ಪರಿಚಯಿಸಿ, ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಶ್ರೀ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು' ಸಚಿವ ಹಾಲಪ್ಪ ಆಚಾರ್ ನಮನ ಸಲ್ಲಿಸಿದರು.
- 'ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸದಾ ಹೊಸತನ್ನು ತಂದು ಜನರ ಮನರಂಜಿಸಿದ ಅತ್ಯಂತ ಕ್ರಿಯಾಶೀಲ ನಿರ್ದೇಶಕ, ನಟ ಶ್ರೀ ಶಂಕರ್ ನಾಗ್ ಅವರ ಸ್ಮೃತಿದಿನದಂದು ಗೌರವದ ಪ್ರಣಾಮಗಳು. ಅಪೂರ್ವ ನಟನೆ, ವಿಭಿನ್ನ ಕಲಾಕೃತಿಗಳಿಂದ ಅವರು ಕನ್ನಡನಾಡಿನ ಕಲಾಲೋಕದ ಮರೆಯಲಾರದ ಅದ್ಭುತ ತಾರೆಯಾಗಿದ್ದಾರೆ' ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ನೆನಪಿಸಿಕೊಂಡಿದ್ದಾರೆ.
'ಬಹುಮುಖ ಪ್ರತಿಭೆಯ ಖನಿ, ಅದಮ್ಯ ಕನಸುಗಾರ, ನಟ, ನಿರ್ದೇಶಕ, ನಿರ್ಮಾಪಕ, ಆಟೋರಾಜ, ಕರಾಟೆ ಕಿಂಗ್ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಕರ್ನಾಟಕ, ಕನ್ನಡ ಚಿತ್ರರಂಗ ನಿಮ್ಮ ಸೇವೆಯನ್ನು ಸದಾ ಸ್ಮರಿಸುತ್ತದೆ' ಎಂದು ಸಚಿವ ಮುನಿರತ್ನ ಟ್ವೀಟ್ ಮಾಡಿದ್ದಾರೆ.
'ಕನ್ನಡ ಚಿತ್ರರಂಗದ ದಂತಕಥೆ, ನಮ್ಮ ಕರುನಾಡಿನ ಮಾಣಿಕ್ಯ, ತಮ್ಮ ಸೃಜನಶೀಲ ನಿರ್ದೇಶನದಿಂದ ಕನ್ನಡಿಗರ ಮನದಲ್ಲಿ ಮನೆಮಾಡಿದ್ದ ಆಟೊರಾಜ, ನಟ, ನಿರ್ಮಾಪಕ ಶ್ರೀ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಅನಂತ ನಮನಗಳು' ಎಂದು ಸಚಿವ ಆರ್ ಅಶೋಕ್ ಸ್ಮರಿಸಿದ್ದಾರೆ.
'ನಾಡು ಕಂಡ ಕ್ರಿಯಾಶೀಲ ನಟ ಹಾಗೂ ನಿರ್ದೇಶಕ, ತಮ್ಮ ಸೃಜನಶೀಲ ಆಲೋಚನೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ, ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿರುವ ಶ್ರೀ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು' ಎಂದು ಸಚಿವ ಪ್ರಭು ಚೌಹಾಣ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











