ಸದ್ದಿಲ್ಲದೇ ಬುಲೆಟ್ ಏರಿದ ಬಸ್ಯಾ ಶರಣ್..!
ಕಾಮಿಡಿ ಖಿಲಾಡಿ ಆಗಿ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸುತ್ತಿದ್ದ ಶರಣ್ ಗೆ ಅಂದು ಎಷ್ಟು ಬೇಡಿಕೆ ಇತ್ತೋ, ಅದಕ್ಕಿಂತ ದುಪ್ಪಟ್ಟು ಬೇಡಿಕೆ ಇಂದು ಹೀರೋ ಆಗಿರುವ ಶರಣ್ ಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ 'ವಿಕ್ಟರಿ' ಶರಣ್ ಗೆ ಈಗ ಒಂದು ದಿನವೂ ಪುರುಸೊತ್ತಿಲ್ಲ..!
'ಅಧ್ಯಕ್ಷ' ರಿಲೀಸ್ ಆಗ್ತಿದ್ದಂತೆ 'ರಾಜರಾಜೇಂದ್ರ' ಶೂಟಿಂಗ್ ನಲ್ಲಿ ಬಿಸಿಯಾಗಿರುವ ಶರಣ್ ಸದ್ದಿಲ್ಲದೇ ಹೊಸ ಸಿನಿಮಾಗೆ ಚಾಲನೆ ನೀಡಿದ್ದಾರೆ. ಆ ಚಿತ್ರ ಯಾವ್ದು ಗೊತ್ತಾ..? 'ಬುಲೆಟ್ ಬಸ್ಯಾ'...!

'ಬುಲೆಟ್ ಬಸ್ಯಾ' ಅನ್ನೋ ಟೈಟಲ್ ಕೇಳ್ತಿದ್ದ ಹಾಗೆ ಎಲ್ಲರಿಗೂ ಖ್ಯಾತ ಖಳನಟ ಸುಧೀರ್ ನೆನಪಿಗೆ ಬರಬಹುದು. ಆದರೆ, ಬುಲೆಟ್ ಏರಿ ಅಂದು ರೋಲ್ ಕಾಲ್ ಕಲೆಕ್ಟ್ ಮಾಡ್ತಿದ್ದ ಸುಧೀರ್ ಪಾತ್ರಕ್ಕೂ, ಇಂದು ಶರಣ್ ಅಭಿನಯಿಸುವ 'ಬಸ್ಯಾ'ನ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
''ಬಲೆಟ್ ಬಸ್ಯಾ ಅಂತ ಶೀರ್ಷಿಕೆ ಇರೋ ಕಾರಣಕ್ಕೆ ಶರಣ್ ಇಲ್ಲಿ ವಿಲನ್ ಅಲ್ಲ. ಎಷ್ಟೇ ಆಗಲಿ ಇದು ಶರಣ್ ಅಭಿನಯಿಸುವ ಸಿನಿಮಾ. ಹೀಗಾಗಿ ಕಾಮಿಡಿ ಕಚಗುಳಿ ಸ್ವಲ್ಪ ಜಾಸ್ತಿನೇ ಇರಲಿದೆ'' ಅಂತಾರೆ ಚಿತ್ರದ ನಿರ್ದೇಶಕ ಜಯತೀರ್ಥ. ['ಅಧ್ಯಕ್ಷ' ವಿಮರ್ಶೆ: ಕಡ್ಡಾಯವಾಗಿ ನಗುವವರಿಗೆ ಮಾತ್ರ]

ಟೋನಿ ಚಿತ್ರದ ಬಳಿಕ ಸ್ವಲ್ಪ ಗ್ಯಾಪ್ ತಗೊಂಡು ಕಂಪ್ಲೀಟ್ ಕರ್ಮಶಿಯಲ್ ಎಂಟರ್ ಟೇನರ್ ಸಿನಿಮಾವನ್ನ ಮಾಡುವ ಉದ್ದೇಶದಿಂದ ನಿರ್ದೇಶಕ ಜಯತೀರ್ಥ ಬುಲೆಟ್ ಬಸ್ಯಾನಿಗೆ ಜನ್ಮನೀಡಿದ್ದಾರೆ. ''ಟೈಟಲ್ ತುಂಬಾ ಕ್ಯಾಚಿ ಆಗಿದೆ. ಜನರಿಗೆ ಬೇಗ ತಲುಪುತ್ತೆ. ಚಿತ್ರದ ನಾಯಕ ಯಾವಾಗಲೂ ಬುಲೆಟ್ ಓಡಿಸಿಕೊಂಡು ಹಳ್ಳಿಯಲ್ಲಿ ಪೋಸ್ ಕೊಡುತ್ತಿರುತ್ತಾನೆ. ಅದಕ್ಕೆ ಬುಲೆಟ್ ಬಸ್ಯಾ ಅಂತ ಹೆಸರಿಟ್ಟಿದ್ದೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ.
ಅಷ್ಟಕ್ಕೂ ಬುಲೆಟ್ ಬಸ್ಯಾ ಚಿತ್ರದ ಮುಹೂರ್ತ ಈಗಾಗ್ಲೇ ಸದ್ದಿಲ್ಲದೇ ನೆರವೇರಿದೆ. ನವೆಂಬರ್ 3 ರಂದೇ ರಾಜಾಜಿನಗರದ ಗಣಪತಿ ದೇವಸ್ಥಾನದಲ್ಲಿ ಬುಲೆಟ್ ಬಸ್ಯಾ ಚಿತ್ರಕ್ಕೆ ಚಾಲನೆ ಸಿಕ್ಕಾಗಿದೆ.

ಕದ್ದುಮುಚ್ಚಿ ಮುಹೂರ್ತ ಮಾಡುವಂತದ್ದು ಏನು ಅಂದ್ರೆ, ''ಹೆಸರಿಗೆ ತಕ್ಕಂತೆ ಶರಣ್ ಚಿತ್ರದಲ್ಲಿ ಬುಲೆಟ್ ಏರಿ ಕೊಂಚ ವಿಭಿನ್ನ ಲುಕ್ ನಲ್ಲಿ ಕಾಣಿಸುತ್ತಾರೆ. ಆ ಲುಕ್ ಬಹಿರಂಗವಾಗಬಾರದು ಅನ್ನುವ ಕಾರಣಕ್ಕೆ ಮಾಧ್ಯಮ ಮತ್ತು ಪತ್ರಿಕಾ ಮಿತ್ರರಿಗೆ ತಿಳಿಸದೆ ಮುಹೂರ್ತ ಮಾಡಿದ್ದೇವೆ'', ಅಂತ ಜಯತೀರ್ಥ ತಿಳಿಸಿದ್ರು.
ಶರಣ್ ಜೊತೆ ಬುಲೆಟ್ ಏರಿ ಊರೂರು ತಿರುಗೋದು ನಟಿ ಹರಿಪ್ರಿಯಾ. ಹಳ್ಳಿ ಹುಡುಗಿ ಗೆಟಪ್ ನಲ್ಲಿ ಹರಿಪ್ರಿಯಾ ಎಲ್ಲರ ಗಮನಸೆಳೆಯಲಿದ್ದಾರೆ. ಹಳ್ಳಿ ಸೊಗಡಲ್ಲಿ ಪಕ್ಕಾ ಕಾಮಿಡಿ ಇರುವ ಚಿತ್ರ ಬುಲ್ಲೆಟ್ ಬಸ್ಯಾ ಮುಹೂರ್ತ ಮುಗಿಸಿದ್ರೂ, ಸೆಟ್ಟೇರುವುದು ಈ ತಿಂಗಳ ಕೊನೆಯಲ್ಲಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











