ಅಭಿಮಾನ ಹೃದಯದಲ್ಲಿ ಇರಬೇಕು, ಕಿರುಚಾಟದಲ್ಲಲ್ಲ; ಶಿವಣ್ಣ ಗರಂ!
ಶಿವ ರಾಜ್ಕುಮಾರ್ ಅಭಿನಯದ 125ನೇ ಚಿತ್ರ ವೇದ ಕಳೆದ ಶುಕ್ರವಾರವಷ್ಟೇ ( ಡಿಸೆಂಬರ್ 23 ) ಬಿಡುಗಡೆಗೊಂಡು ರಾಜ್ಯಾದ್ಯಂತ ಅಬ್ಬರಿಸುತ್ತಿದೆ. ನಿರ್ದೇಶಕ ಎ ಹರ್ಷ ಜತೆ ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ಬಳಿಕ ನಾಲ್ಕನೇ ಬಾರಿಗೆ ಕೈಜೋಡಿಸಿರುವ ಶಿವ ರಾಜ್ಕುಮಾರ್ ಗೆಲುವು ಕಂಡಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡಿರುವ ಗೀತಾ ಶಿವ ರಾಜ್ಕುಮಾರ್ ಫಸ್ಟ್ ಬಾಲ್ ಸಿಕ್ಸರ್ ಸಿಡಿಸಿದ್ದಾರೆ.
ವೇದ ಚಿತ್ರ ಕೇವಲ ಕಮರ್ಷಿಯಲ್ ಚಿತ್ರವಾಗಿ ಮಾತ್ರವಲ್ಲದೇ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿರುವ ಮಾದರಿ ಸಿನಿಮಾವಾಗಿದೆ. ಅದರಲ್ಲಿಯೂ ಮಹಿಳೆಯರು, ಬಾಲಕಿಯರು ನೋಡಲೇಬೇಕಾದ ಕಥೆಯನ್ನು ವೇದ ಹೊಂದಿದೆ. ಹೀಗಾಗಿಯೇ ವೇದ ಚಿತ್ರವನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಎಲ್ಲಾ ವರ್ಗದ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ ಹಾಗೂ ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸುತ್ತಿದ್ದಾರೆ.
ಬಿಡುಗಡೆಯಾದ ದಿನವೇ ಬ್ಲಾಕ್ ಬಸ್ಟರ್ ರಿಪೋರ್ಟ್ ಪಡೆದುಕೊಂಡ ವೇದ ಚಿತ್ರ ವಾರಾಂತ್ಯದಲ್ಲಿ ಹೌಸ್ಫುಲ್ ಪ್ರದರ್ಶನಗಳನ್ನು ಕಂಡಿದೆ. ಹೀಗೆ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಕಾರಣ ಶಿವ ರಾಜ್ಕುಮಾರ್ ವೇದ ಚಿತ್ರತಂಡದ ಜತೆ ರಾಜ್ಯದ ವಿವಿಧ ಚಿತ್ರಮಂದಿರಗಳಿಗೆ ಭೇಟಿ ನೀಡಿ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳನ್ನು ಹಾಗೂ ಸಿನಿ ರಸಿಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಹೀಗೆ 27ರ ಡಿಸೆಂಬರ್ ಮಂಗಳವಾರದಂದು ವೇದ ಚಿತ್ರತಂಡ ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿತ್ತು. ಈ ವೇಳೆ ಚಿತ್ರಮಂದಿರದೊಳಗೆ ಮಾತನಾಡಿದ ಶಿವ ರಾಜ್ಕುಮಾರ್ ಅಭಿಮಾನಿಗಳ ನಡೆಗೆ ಕೋಪಗೊಳ್ಳುವುದು ಮಾತ್ರವಲ್ಲದೇ ಸಲಹೆಯನ್ನೂ ಸಹ ನೀಡಿದ್ದಾರೆ.

ಮಾತನಾಡಲು ಬಿಡದ ಫ್ಯಾನ್ಸ್
ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳ ಜತೆ ಶಿವಣ್ಣ ಮಾತನಾಡಲು ಶುರು ಮಾಡುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಜೈ ಶಿವಣ್ಣ ಎಂದು ಕೂಗಲು ಆರಂಭಿಸಿದರು. ಇದರಿಂದ ಶಿವ ರಾಜ್ಕುಮಾರ್ ಅವರು ಮಾತನಾಡಲು ಅಡಚಣೆಯಾದ ಕಾರಣ ಅಭಿಮಾನಿಗಳ ನಡೆಯಿಂದ ಬೇಸರಕ್ಕೊಳಗಾದರು ಹಾಗೂ ಕೋಪಗೊಂಡರು. ಇದೇ ವೇಳೆ "ನಾವು ನಿಮ್ಮನ್ನು ನೋಡಲು ಹಾಗೂ ನಿಮ್ಮ ಜತೆ ಮಾತನಾಡಲು ಬಂದರೆ ನಮಗೆ ಮಾತಾಡೋಕೆ ಬಿಡಲ್ಲ ಅಂತೀರ, ನಿಮಗೋಸ್ಕರನೇ ತಾನೇ ನಾವು ಬಂದಿರೋದು, ಮಾತನಾಡಲು ಬಿಡಿ" ಎಂದು ಅಭಿಮಾನಿಗಳಿಗೆ ಸಮಾಧಾನದಿಂದಿರಲು ಹೇಳಿದರು.

ಅಭಿಮಾನ ಹೃದಯಲ್ಲಿರಬೇಕು ಕಿರುಚಾಟದಲ್ಲಲ್ಲ
ಹೀಗೆ ಶಿವ ರಾಜ್ಕುಮಾರ್ ಅವರು ಎಷ್ಟೇ ಹೇಳಿದರೂ ಅಭಿಮಾನಿಗಳು ಮಾತ್ರ ಜೈಕಾರ ಹಾಕುವುದನ್ನೂ ನಿಲ್ಲಿಸಲೇ ಇಲ್ಲ. ಹೀಗೆ ಕಿರುಚಾಟ ಜಾಸ್ತಿ ಆದದ್ದನ್ನು ಗಮನಿಸಿದ ಶಿವ ರಾಜ್ಕುಮಾರ್ "ಅಭಿಮಾನ ಮನದಲ್ಲಿರಬೇಕು, ಕಿರುಚಾಟದಲ್ಲಲ್ಲ" ಎಂದು ಹೇಳಿದರು. ಶಿವ ರಾಜ್ಕುಮಾರ್ ಅವರ ಈ ಹೇಳಿಕೆ ಕೇಳಿ ನೆರೆದಿದ್ದ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಬಾರಿಸಿದರು ಹಾಗೂ ವೇದ ಚಿತ್ರತಂಡ ಚಪ್ಪಾಳೆ ತಟ್ಟಿ ಶಿವಣ್ಣ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಜಿಲ್ಲೆಗಳ ವಿವಿಧ ಊರುಗಳಿಗೆ ವೇದ ಭೇಟಿ
ಇನ್ನು ಮೈಸೂರು ಮಾತ್ರವಲ್ಲದೇ ಮಂಡ್ಯ, ಹುಣಸೂರು, ರಾಮನಗರ, ಟಿ ನರಸಿಪುರ ಹಾಗೂ ಕೊಳ್ಳೇಗಾಲದ ಚಿತ್ರಮಂದಿರಗಳಿಗೂ ಸಹ ನಟ ಶಿವ ರಾಜ್ಕುಮಾರ್ ಭೇಟಿ ನೀಡಿದ್ದರು. ತಮ್ಮ ಊರಿಗೆ ಬಂದ ಶಿವ ರಾಜ್ಕುಮಾರ್ ನೋಡಲು ಅಭಿಮಾನಿಗಳ ಸಾಗರ ಚಿತ್ರಮಂದಿರಗಳ ಮುಂದೆ ತುಂಬಿತ್ತು. ಅಭಿಮಾನಿಗಳು ಶಿವ ರಾಜ್ಕುಮಾರ್ ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು ಹಾಗೂ ಶಿವ ರಾಜ್ಕುಮಾರ್ ಅಭಿಮಾನಿಗಳನ್ನು ಡಾನ್ಸ್ ಮಾಡುವ ಮೂಲಕ ಹಾಗೂ ಡೈಲಾಗ್ ಹೇಳುವ ಮೂಲಕ ರಂಜಿಸಿದರು.


Click it and Unblock the Notifications











