James: 'ಜೇಮ್ಸ್' ಸಿನಿಮಾ ಪರ ನಿಂತ ಶಿವಣ್ಣ: ಸಿಎಂ ಭೇಟಿ
'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆಯುತ್ತಿರುವ ವಿಷಯ ದೊಡ್ಡದಾಗಿ ಸದ್ದಾಗುತ್ತಿದೆ. ನಟ ಶಿವರಾಜ್ ಕುಮಾರ್ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
Recommended Video
ಶಿವರಾಜ್ ಕುಮಾರ್ ಜೊತೆಗೆ 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ಮಾಪಕ ಶ್ರೀಕಾಂತ್ ಸಹ ಸಿಎಂ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, 'ಜೇಮ್ಸ್' ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಜೊತೆಗೆ ಅಭಿಮಾನಿಗಳಿಗೆ ಆತ್ಮೀಯ ಬಂಧವಿದೆ ಹೀಗಿದ್ದಾಗ ಸಿನಿಮಾವನ್ನು ತೆಗೆದರೆ ಅದು ಸರಿಯಲ್ಲ. ಸಿನಿಮಾ ತೆಗೆಯಲು ನಾವುಗಳು ಬಿಡಬಾರದು'' ಎಂದಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಿಂದ 'ಜೇಮ್ಸ್' ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್, ಹಾಗೇನೂ ಇಲ್ಲ. ಬುಕ್ಮೈ ಶೋ ನೋಡಿದರೆ ನಿಮಗೇ ಗೊತ್ತಾಗುತ್ತದೆ. ಯಾವ ಸಿನಿಮಾದಿಂದ 'ಜೇಮ್ಸ್'ಗೆ ಸಮಸ್ಯೆ ಆಗುತ್ತಿದೆ ಎಂದು ಪರೋಕ್ಷವಾಗಿ 'RRR' ಸಿನಿಮಾದಿಂದ 'ಜೇಮ್ಸ್'ಗೆ ಸಮಸ್ಯೆ ಆಗುತ್ತಿದೆ ಎಂದರು.
'ಜೇಮ್ಸ್' ರಾಜ್ಯದಾದ್ಯಂತ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದಾಗ ಸಿನಿಮಾವನ್ನು ತೆಗೆಯುವುದು ಸರಿಯಲ್ಲ. ಸಿನಿಮಾ ಚೆನ್ನಾಗಿ ಓಡದೇ ಇದ್ದರೆ ತೆಗೆಯಲು ಅಡ್ಡಿಯಿಲ್ಲ ಆದರೆ ಸಿನಿಮಾ ಓಡುತ್ತಿದೆ. ಜನ ಇನ್ನೂ ನೋಡುತ್ತಿದ್ದಾರೆ ಹೀಗಿದ್ದಾಗ ಸಿನಿಮಾ ತೆಗೆಯುವುದು ಸೂಕ್ತವಲ್ಲ. ಸಿನಿಮಾವನ್ನು ತೆಗೆಯಲು ಅಭಿಮಾನಿಗಳು ಬಿಡಬಾರದು. ಇದರಲ್ಲಿ ಒಗ್ಗಟ್ಟಿರಬೇಕು. ಸಿನಿಮಾ ಯಾಕೆ ತೆಗೆಯುತ್ತಿದ್ದೀರಿ ಎಂದು ನಿರ್ಮಾಪಕರ ಬಳಿ, ನಿರ್ದೇಶಕರ ಬಳಿ ಜಗಳವಾಡಬೇಕು'' ಎಂದರು ಶಿವರಾಜ್ ಕುಮಾರ್.
''ದಿ ಕಾಶ್ಮೀರ್ ಫೈಲ್ಸ್' ಸಿನಿಮಾ 'ಜೇಮ್ಸ್'ಗೆ ಮುಂಚೆಯೇ ಬಿಡುಗಡೆ ಆಗಿತ್ತು. ಆದರೆ ಅದು ಓಡುತ್ತಿದ್ದ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಅನ್ನು ಬಿಡುಗಡೆ ಮಾಡಿಲ್ಲ. ಚೆನ್ನಾಗಿ ಓಡುತ್ತಿರುವ ಸಿನಿಮಾಗಳನ್ನು ಮುಟ್ಟಬಾರದು ಎಂಬುದನ್ನು ನಮಗೆ ಕಲಿಸಲಾಗಿದೆ. 'ಅನುರಾಗ ಸಂಗಮ' ಎಂಬ ಸಿನಿಮಾ ಬಂದಿತ್ತು. ಚೆನ್ನಾಗಿ ಓಡುತ್ತಿತ್ತು. ಆಗಲೇ ನಾನು ಹೇಳಿದ್ದೆ ಆ ಸಿನಿಮಾವನ್ನು ತೆಗೆಸಬೇಡಿ ಎಂದು. ಬಹಳ ವರ್ಷಗಳಿಂದಲೂ ಕನ್ನಡ ಸಿನಿಮಾಗಳ ಪರವಾಗಿ ಹೋರಾಡುತ್ತ ಬಂದಿದ್ದೇನೆ. ಈಗಲೂ ಅಷ್ಟೆ, ಇದು ನನ್ನ ತಮ್ಮನ ಸಿನಿಮಾ ಎಂಬ ಕಾರಣಕ್ಕೆ ನಾನು ಬಂದಿಲ್ಲ. ಕನ್ನಡ ಸಿನಿಮಾ ಎಂಬ ಕಾರಣಕ್ಕೆ ಬಂದಿದ್ದೇನೆ'' ಎಂದರು.
'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ''20-25 ಲಕ್ಷ ಶೇರ್ ಬರುತ್ತಿರುವ ಚಿತ್ರಮಂದಿರಗಳಿಂದ ನಮ್ಮ ಸಿನಿಮಾವನ್ನು ತೆಗೆಯಲಾಗುತ್ತಿದೆ. ಮೊದಲಿಗೆ 386 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದವು. ಈಗ 250 ಸುಮಾರು ಚಿತ್ರಮಂದಿರಗಳಷ್ಟೆ ಇವೆ. ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ಸಮಸ್ಯೆ ಬಗೆಹರಿಸುವ ನೆರವು ನೀಡಿದ್ದಾರೆ. ಫಿಲಂ ಚೇಂಬರ್ನವರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದಾರೆ'' ಎಂದರು.


Click it and Unblock the Notifications











