ಕೈ ಮುರಿದುಕೊಂಡಿದ್ದ ಬಾಲಕನ ಜತೆ ಫೋಟೊಗೆ ಪೋಸ್ ನೀಡಿದ ಶಿವಣ್ಣ; ನೆಟ್ಟಿಗರ ಮನಗೆದ್ದ ವಿಡಿಯೊ
ಶಿವ ರಾಜ್ಕುಮಾರ್ ಸದ್ಯ ವೇದ ಚಿತ್ರದ ಗೆಲುವಿನ ಅಲೆಯಲ್ಲಿದ್ದಾರೆ. ಚಿತ್ರ ನಿರೀಕ್ಷೆಗೂ ಮೀರಿ ಗೆದ್ದಿದ್ದು, ಚಿತ್ರವನ್ನು ಗೆಲ್ಲಿಸಿದ ಸಿನಿ ರಸಿಕರಿಗೆ ಕೃತಜ್ಞತೆ ಸಲ್ಲಿಸಲು ಶಿವ ರಾಜ್ಕುಮಾರ್ ತಮ್ಮ ವೇದ ಚಿತ್ರತಂಡದ ಜತೆ ರಾಜ್ಯದ ವಿವಿಧ ನಗರಗಳಿಗೆ ಭೇಟಿ ನೀಡಿ ವಿಜಯ ಯಾತ್ರ ಮಾಡುತ್ತಿದ್ದಾರೆ. ಕಳೆದ ವಾರ ಬೆಂಗಳೂರು, ಮೈಸೂರು, ಕೊಳ್ಳೇಗಾಲ ಹಾಗೂ ರಾಮನಗರದ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದ ಶಿವ ರಾಜ್ಕುಮಾರ್ ಈಗ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಭಾಗಗಳಿಗೆ ಭೇಟಿ ನೀಡಿದ್ದಾರೆ.
ಅದೇ ರೀತಿ ಇಂದು ( ಜನವರಿ 5 ) ಶಿವ ರಾಜ್ಕುಮಾರ್ ಹಾಗೂ ವೇದ ಚಿತ್ರತಂಡ ದಾವಣಗೆರೆ, ಹರಿಹರ, ರಾಣೆಬೆನ್ನೂರು, ಗದಗ ಹಾಗೂ ಹಾವೇರಿಯ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದರು. ತಮ್ಮನ್ನು ನೋಡಲು ಬಂದಿದ್ದ ಜನರನ್ನು ರಂಜಿಸಲು ಶಿವ ರಾಜ್ಕುಮಾರ್ ಹಾಡು ಹಾಡಿದರು ಹಾಗೂ ಡಾನ್ಸ್ ಮಾಡಿದರು.
ಇನ್ನು ದಾವಣಗೆರೆಯಲ್ಲಿ ವಾಹನದ ಮೇಲೇರಿ ರೋಡ್ ಶೋ ನಡೆಸಿದ ಶಿವ ರಾಜ್ಕುಮಾರ್ ಅವರನ್ನು ನೋಡಲು ಮಕ್ಕಳಿಂದ ವಯಸ್ಕರವರೆಗೂ ಸಹ ಬಂದಿದ್ದರು. ಈ ಪೈಕಿ ಶಿವ ರಾಜ್ಕುಮಾರ್ ಅವರನ್ನು ನೋಡಿ ಅವರ ಜತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಬಾಲಕನೋರ್ವ ವಾಹನದ ಬಳಿ ಬಂದಿದ್ದ. ಆ ಬಾಲಕ ಕೈ ಮುರಿದುಕೊಂಡು ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದನ್ನು ಕಂಡ ಶಿವ ರಾಜ್ಕುಮಾರ್ ಆತನನ್ನು ಮೇಲೆ ಕರೆಸಿ ಫೋಟೊಗೆ ಪೋಸ್ ನೀಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿವಣ್ಣನ ಸರಳತೆಗೆ ಮೆಚ್ಚುಗೆ
ಬಾಲಕನ ಜತೆ ಶಿವಣ್ಣ ನಡೆದುಕೊಂಡ ರೀತಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೊದಲ್ಲಿ ಶಿವಣ್ಣ ಬಾಲಕನೊಂದಿಗೆ ಖುಷಿಯಿಂದ ಪೋಸ್ ನೀಡಿದ್ದು, ಪುಟ್ಟ ಬಾಲಕ ತನ್ನ ಫೇವರಿಟ್ ಹೀರೋಗೆ ಮುತ್ತು ನೀಡಿದ್ದಾನೆ. ಈ ವಿಡಿಯೊ ವೀಕ್ಷಿಸಿದ ನೆಟ್ಟಿಗರು ಸರಳತೆ ಎನ್ನುವುದು ಇವರಿಗೆ ರಕ್ತದಲ್ಲೇ ಬೆರತು ಹೋಗಿದೆ ಎಂದು ಕೊಂಡಾಡಿದ್ದಾರೆ.

ಶಿವಣ್ಣ ಮುಂದಿನ ಪಯಣ ಎಲ್ಲಿಗೆ?
ಇಂದು ( ಜನವರಿ 5 ) ದಾವಣಗೆರೆಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿರುವ ಶಿವ ರಾಜ್ಕುಮಾರ್ ಜನವರಿ 6ರ ಶುಕ್ರವಾರ ಬೆಳಗಾವಿಯ ಚಿತ್ರ ಥಿಯೇಟರ್, ಧಾರಾವಾಡದ ಸಂಗಮ್ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ. ಜನವರಿ 7ರ ಶನಿವಾರದಂದು ಶಿವಮೊಗ್ಗದ ಮಲ್ಲಿಕಾರ್ಜುನ, ಭದ್ರಾವತಿಯ ಸತ್ಯ, ತಿಪಟೂರಿನ ತ್ರಿಮೂರ್ತಿ ಹಾಗೂ ತುಮಕೂರಿನ ಮಾರುತಿ ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ.

ವೇದ ಮೊದಲ ವಾರದ ಗಳಿಕೆ ಎಷ್ಟು?
ವೇದ ಶಿವ ರಾಜ್ಕುಮಾರ್ ಹಾಗೂ ನಿರ್ದೇಶಕ ಎ ಹರ್ಷ ಕಾಂಬಿನೇಶನ್ನ ನಾಲ್ಕನೇ ಚಿತ್ರವಾಗಿದ್ದು, ಮೊದಲ ವಾರದಲ್ಲಿ ಬರೋಬ್ಬರಿ 19.6 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ. ಈ ಮೂಲಕ ಬಹಳ ದಿನಗಳಿಂದ ಸರಿಯಾದ ಹಿಟ್ಗಾಗಿ ಕಾಯುತ್ತಿದ್ದ ಶಿವ ರಾಜ್ಕುಮಾರ್ಗೆ ಈ ಚಿತ್ರ ದೊಡ್ಡ ಕಮ್ಬ್ಯಾಕ್ ಚಿತ್ರವಾಗಿ ಸಿಕ್ಕಿದೆ ಎಂದೇ ಹೇಳಬಹುದು. ಸದ್ಯ ವೇದ ಸಕ್ಸಸ್ ಅಲೆಯಲ್ಲಿರುವ ಶಿವ ರಾಜ್ಕುಮಾರ್ ಶ್ರೀನಿ ನಿರ್ದೇಶನದ ಘೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರಗಳ ಬಳಿಕ ಅರ್ಜುನ್ ಜನ್ಯ ನಿರ್ದೇಶನದ ಚಿತ್ರ ಹಾಗೂ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ನಿರ್ದೇಶನದ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.


Click it and Unblock the Notifications











