ರಾಜ್,ವಿಷ್ಣು,ಅಂಬಿ ಸ್ಮಾರಕ ಒಂದೇ ಕಡೆ ಇರಲಿ: ಶಿವರಾಜ್ ಕುಮಾರ್
Recommended Video
ಕನ್ನಡ ಚಿತ್ರರಂಗದ ಖ್ಯಾತ ನಟ ಪದ್ಮಭೂಷಣ ಡಾ ರಾಜ್ ಕುಮಾರ್ ಅವರ 91ನೇ ಹುಟ್ಟುಹಬ್ಬ. ಅಣ್ಣವ್ರು ಇಂದು ಅಭಿಮಾನಿಗಳ ನಡುವೆ ಇಲ್ಲ ಅಂದರು ಅವರ ಮೇಲಿನ ಅಭಿಮಾನಿ ಕಿಂಚ್ಚಿತ್ತು ಕಮ್ಮಿ ಆಗಿಲ್ಲ. ಸಿನಿಮಾಗಳ ಮೂಲಕ ಮೇರು ನಟ ಎಂದಿಗೂ ಜೀವಂತ. ಇಂದು ಡಾ.ರಾಜ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.
ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಲು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸ್ಮಾರಕ ಬಳಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಹುಟ್ಟುಹಬ್ಬದ ಪ್ರಯುಕ್ತ ರಾಜ್ ಸ್ಮಾರಕವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಅಭಿಮಾನಿಗಳ ಜೊತೆಗೆ ರಾಜ್ ಕುಟುಂಬ ಕೂಡ ಕಂಠೀರವ ಸ್ಟುಡಿಯೋಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಅಪ್ಪಾಜಿಯ ಹುಟ್ಟುಹಬ್ಬವನ್ನು ಆಚರಿಸಿದರು.
ಇನ್ನು ವಿಶೇಷ ಅಂದ್ರೆ ಅಣ್ಣವ್ರ ಹುಟ್ಟುಹಬ್ಬದ ದಿನವೆ ಕಂಠೀರವ ಸ್ಟುಡಿಯೋದ ಮತ್ತೊಂದೆಡೆ ರೆಬೆಲ್ ಸ್ಟಾರ್ ಅಂಬರೀಶ್ ಅವರ 5ನೇ ತಿಂಗಳಿನ ಪುಣ್ಯ ಸ್ಮರಣೆ ಆಚರಿಸಲಾಯಿತು. ಅಂಬರೀಶ್ ಕುಟುಂಬ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿ ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ ತನ್ನಲ್ಲಿದ್ದ ಒಂದು ಆಸೆಯನ್ನು ಹೊರಹಾಕಿದ್ದಾರೆ. ಮುಂದೆ ಓದಿ..

ಮೂವರು ದಿಗ್ಗಜರು ಒಂದೆ ಕಡೆ ಇರಲಿ
ಡಾ.ರಾಜ್ ಹುಟ್ಟುಹಬ್ಬ ಆಚರಿಸಿ ಮಾತನಾಡಿದ ಶಿವರಾಜ್ ಕುಮಾರ್, "ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಮೂವರು ಉತ್ತಮ ಗೆಳೆಯರಾಗಿದ್ರು. ಈ ಮೂವರ ಸಮಾಧಿ ಒಂದೆ ಕಡೆ ಇರಬೇಕು ಎನ್ನುವುದು ನನ್ನ ಆಸೆ" ಎಂದು ಶಿವಣ್ಣ ಹೇಳಿದ್ದಾರೆ. ಈ ಮೂಲಕ ವಿಷ್ಣು ಸ್ಮಾರಕವು ಕಂಠೀರವ ಸ್ಟುಡಿಯೋದಲ್ಲೇ ಆದರೆ ಚೆನ್ನಾಗಿರುತ್ತೆ ಎಂದು ತನ್ನ ಮನದಲ್ಲಿ ಇದ್ದ ಆಸೆಯನ್ನು ಬಹಿರಂಗ ಪಡಿಸಿದ್ದಾರೆ.

ರಾಜ್ ಕುಟುಂಬದಲ್ಲಿ ಹುಟ್ಟಿದ್ದೆ ನಮ್ಮ ಭಾಗ್ಯ
ಅಭಿಮಾನಿಗಳ ಪ್ರೀತಿ ವಿಶ್ವಾಸ ಎಷ್ಟು ಕೋಟಿ ಕೊಟ್ಟರು ಪಡೆಯುಲು ಸಾಧ್ಯವಿಲ್ಲ. ಆದ್ರೆ ಅಪ್ಪಾಜಿ ಸಂಪಾದನೆ ಮಾಡಿದ್ರು. ಆ ಕುಟುಂಬದಲ್ಲಿ ಹುಟ್ಟಿದ್ದೇ ನಮ್ಮ ಭಾಗ್ಯ ಎಂದು ಶಿವಣ್ಣ ಹೇಳಿದ್ದಾರೆ. ಇನ್ನು ಅಪ್ಪಾಜಿ ಅವರನ್ನು ಮಿಸ್ ಮಾಡಿಕೊಳ್ಳೋಕೆ ಅವರ ಹುಟ್ಟುಹಬ್ಬ ಅಥವಾ ತಿಥಿನೆ ಬರಬೇಕು ಎಂದು ಏನು ಇಲ್ಲ. ಯಾವಾಗಲು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಹುಟ್ಟುಹಬ್ಬದ ದಿನ ಇನ್ನು ಜಾಸ್ತಿ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಅಪ್ಪಾಜಿಯನ್ನು ನೆನಪಿಸಿಕೊಂಡರು ಸೆಂಚುರಿ ಸ್ಟಾರ್.

ಅಣ್ಣವ್ರಿಗೆ ಕೇಕ್ ಕಟ್ ಅಂದ್ರೆ ಆಗುತ್ತಿರಲ್ಲಿ
"ಶೂಟಿಂಗ್ ಇದ್ದಾಗಲು ಅಪ್ಪಾಜಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮನೆ ಹತ್ರಾನೆ ಬರುತ್ತಿದ್ದರು. ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿದ್ದೆವು. ಆದ್ರೆ ಅಪ್ಪಾಜಿಗೆ ಕೇಕ್ ಕಟ್ ಮಾಡುವುದೆಂದರೆ ಬೈಯುತ್ತಿದ್ದರು. ಕೇಕ್ ಗೆ ಖರ್ಚು ಮಾಡುವ ಹಣವನ್ನು ಬೇರೆಯಾವುದಕ್ಕಾದರು ಉಪಯೋಗಿಸಿ ಎಂದು ಹೇಳುತ್ತಿದ್ದರು" ಎಂದು ಅಪ್ಪಾಜಿಯ ಹುಟ್ಟುಹಬ್ಬದ ನೆನಪನ್ನು ಹಂಚಿಕೊಂಡರು ಶಿವಣ್ಣ.

ಸ್ಮಾರಕಕ್ಕಿಂತ ಅಭಿಮಾನಿಗಳ ಪ್ರೀತಿ ಮುಖ್ಯ
"ಸ್ಮಾರಕ ಎನ್ನುವುದು ಮುಖ್ಯ ಅಲ್ಲ. ಅಭಿಮಾನಿಗಳ ಪ್ರೀತಿ, ವಿಶ್ವಾಸ ಮುಖ್ಯ. ಸ್ಮಾರಕ ಆಗಬೇಕಾದ ಸಮಯದಲ್ಲಿ ಆಗುತ್ತೆ. ಆದ್ರೆ ಕನ್ನಡದ ಲೆಜಂಡರಿ ವ್ಯಕ್ತಿಗಳು ಈ ಮೂವರು. ಇವರ ಸ್ಮಾರಕ ಆಗಬೇಕು. ಈ ಮೂವರ ಸ್ಮಾರಕ ನಿರ್ಮಾಣ ಆದರೆ ತುಂಬ ಖುಷಿ ಆಗುತ್ತೆ. ಈ ಮೂವರು ನಟರು ಯಾವುದೆ ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡಿದವರು" ಎಂದು ಶಿವಣ್ಣ ಹೇಳಿದ್ದರು.

ತ್ರಿಮೂರ್ತಿಗಳ ನೆನಪನ್ನು ಹಂಚಿಕೊಂಡ ಹ್ಯಾಟ್ರಿಕ್ ಹೀರೋ
"ಅಪ್ಪಾಜಿ ಜೊತೆ ತುಂಬ ಕ್ಲೋಸ್ ಆಗಿ ಮಾತನಾಡುತ್ತಿದ್ದವರು ಅಂದ್ರೆ ಅಂಬರೀಶ್ ಮಾಮ. ವಿಷ್ಣುವರ್ಧನ್ ಸಹೋದರನಂತೆ ಇದ್ದರು. ಅಪ್ಪಾಜಿ ಮತ್ತು ವಿಷ್ಣುವರ್ಧನ್ ನಡುವೆ ತುಂಬಾ ಗೌರವವಾದ ಮಾತುಕತೆ ನಡೆಯುತ್ತಿತ್ತು. ಆದ್ರೆ ಅಂಬರೀಶ್ ಹಾಗಲ್ಲ, ತುಂಬಾ ಕಾಮಿಡಿ ಮಾಡುತ್ತಿದ್ದರು. ಲೀಲಾಜಾಲವಾಗಿ ಅಪ್ಪಾಜಿ ಕಾಲೆಳೆಯುತ್ತಿದ್ದರು. ಅಂಬರೀಶ್ ಒಂದು ಗಂಟೆ ಅಪ್ಪಾಜಿ ಜೊತೆ ಇದ್ರೆ ಸಾಕಿತ್ತು ಅವರ ನೋವೆಲ್ಲ ಮರೆತು ಹೋಗುತ್ತೆ ಅಂತ ಹೇಳುತ್ತಿದ್ದರು" ಎಂದು ಮೂವರ ದಿಗ್ಗಜರ ಸ್ನೇಹ ಸಂಬಂಧವನ್ನು ಮೆಲಕು ಹಾಕಿದ್ರು ಶಿವಣ್ಣ.


Click it and Unblock the Notifications











