ಅಸಹಾಯಕ ಹುಬ್ಬಳ್ಳಿ ಅಭಿಮಾನಿಗೆ ಶಿವಣ್ಣ ನೆರವು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಯೊಬ್ಬರ ಜೀವ ಉಳಿಸಲು ನೆರವಾಗುತ್ತಿದ್ದಾರೆ. ಸುಮಾರು ಏಳು ವರ್ಷಗಳ ಹಿಂದೆ ಶಿವಣ್ಣನ ಮಹಾ ಅಭಿಮಾನಿಯೊಬ್ಬರು 'ಜೋಗಿ' ಚಿತ್ರದ ಹಾಡು ಕೇಳುತ್ತಾ ಕಟ್ಟಡವೊಂದರಿಂದ ಕೆಳಗೆ ಬಿದ್ದು ಸೊಂಟಕ್ಕೆ ಬಿದ್ದ ಭಾರೀ ಏಟಿನಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಮಡಿವಾಳಪ್ಪ ಹೆಸರಿನ ಈ ವ್ಯಕ್ತಿ ಹುಬ್ಬಳ್ಳಿಯವರಾಗಿದ್ದು ನಟ ಶಿವರಾಜ್ ಕುಮಾರ್ ಅವರ ಮಹಾ ಅಭಿಮಾನಿ.
ಏಳು ವರ್ಷಗಳಿಂದ ಹಾಸಿಗೆ ಹಿಡಿದಿರುವ ಈ ವ್ಯಕ್ತಿ ಸಾಯುವುದರೊಳಗಾಗಿ ಶಿವಣ್ಣನನ್ನು ನೋಡಲು ಬಯಸಿದ್ದಾರಂತೆ. ಅವರ ಏಕೈಕ ಆಸೆಯೆಂದರೆ ತಮ್ಮ ಆರಾಧ್ಯ ದೈವ ಶಿವರಾಜ್ ಕುಮಾರ್ ಅವರನ್ನು ಕಣ್ತುಂಬ ನೋಡಿಕೊಂಡು ನಂತರವೇ ಕೊನೆಯುಸಿರೆಳೆಯುವುದು. ಈ ವಿಷಯ ಇತ್ತೀಚಿಗಷ್ಟೇ ಬೆಳಕಿಗೆ ಬಂದಿದ್ದು ಹಾಗೂ ಶಿವಣ್ಣರಿಗೂ ತಿಳಿದದ್ದು.

ತಮ್ಮ ಅಭಿಮಾನಿ ಮಡಿವಾಳಪ್ಪ ದೀರ್ಘ ಕಾಲದಿಂದ ಹಾಸಿಗೆ ಹಿಡಿದು ಈ ಪರಿಸ್ಥಿತಿಯಲ್ಲಿ ಇರುವ ಸುದ್ದಿ ತಿಳಿಯುತ್ತಿದ್ದಂತೆ ನಟ ಶಿವರಾಜ್ ಕುಮಾರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಕ್ಷಣ ಇದಕ್ಕೆ ಸ್ಪಂದಿಸಿದ ಶಿವಣ್ಣ, ತಮ್ಮ ಆ ಅಭಿಮಾನಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆಸಿಕೊಂಡು ಆತನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.
ಈ ವಿಷಯವನ್ನು ಟಿವಿ ಮಾಧ್ಯಮವೊಂದಕ್ಕೆ ತಿಳಿಸಿರುವ ಶಿವಣ್ಣ, "ತಕ್ಷಣ ನನ್ನ ಅಭಿಮಾನಿ ಮಡಿವಾಳಪ್ಪನವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆಸಿಕೊಳ್ಳಲಿದ್ದೇನೆ. ಅವರ ಸಂಪೂರ್ಣ ಖರ್ಚನ್ನು ನಾನೇ ಭರಿಸುತ್ತೇನೆ" ಎಂದಿದ್ದಾರೆ. ಶಿವಣ್ಣನ ಈ ಮಾತು ಕಮರಿಹೋಗಿದ್ದ ಅಭಿಮಾನಿಯ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆಯಂತೆ.
ಅದಕ್ಕೂ ಹೆಚ್ಚಾಗಿ ಬಹಳ ಕಾಲದಿಂದಲೂ ಹ್ಯಾಟ್ರಿಕ್ ಹೀರೋ ಶಿವಣ್ಣರನ್ನು ನೋಡಲು ಬಯಸಿದ್ದ ಆ ಅಭಿಮಾನಿ, ಈ ಸುದ್ದಿಯಿಂದ ಭಾರೀ ಖುಷಿಯಾಗಿದ್ದಾರಂತೆ. ಸದ್ಯದಲ್ಲೇ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆತರಲಾಗುವುದು ಎಂಬ ವಿಷಯವನ್ನು ಸುದ್ದಿಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ತೆರೆಯ ಮೇಲೆ ಒಳ್ಳೆಯ ಪಾತ್ರ ಮಾಡುವುದಷ್ಟೇ ಅಲ್ಲ, ಅಭಿಮಾನಿಯೊಬ್ಬರ ಜೀವನಕ್ಕೆ ಆಸರೆಯಾಗುವ ಮೂಲಕ ವಾಸ್ತವದಲ್ಲೂ ಒಳ್ಳೆಯತನ ಮೆರೆದು ದೊಡ್ಡವರೆನಿಸಿದ್ದಾರೆ ಶಿವಣ್ಣ. (ಒನ್ ಇಂಡಿಯಾ ಕನ್ನಡ)


Click it and Unblock the Notifications











