ಫೇಸ್ ಬುಕ್ಕಲ್ಲಿ ಶಿವಣ್ಣ ಟ್ರಿಣ್ ಟ್ರಿಣ್ ಫೋಟೋ ಲೀಕ್!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತಿಗೆ ಸಿಕ್ಕಾಗ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ ತಮ್ಮ ತಾರುಣ್ಯದ ಗುಟ್ಟೇನು ಎಂದು. ನಿಯಮಿತ ವ್ಯಾಯಾಮ, ಮಿತವಾದ ಆಹಾರ ಎಂದು ಶಿವಣ್ಣ ಹೇಳುತ್ತಾರಾದರೂ ಊಹುಂ ಯಾರಿಗೂ ನಂಬಿಕೆ ಬರಲ್ಲ.
ಅರ್ಧ ಸೆಂಚುರಿ ಬಾರಿಸಿರುವ ಶಿವಣ್ಣನನ್ನು ನೋಡಿದರೆ ಅವರ ಯೌವನದ ಗುಟ್ಟು ಗುಟ್ಟಾಗಿಯೇ ಉಳಿಯುತ್ತದೆ. ಚಿತ್ರೀಕರಣಕ್ಕೆ ಸಮಯಕ್ಕೆ ಸರಿಯಾಗಿ ಬರುವುದರಲ್ಲಿ ಶಿವಣ್ಣ ಶಿಸ್ತಿನ ಸಿಪಾಯಿ. ಹಾಗೆಯೇ ವ್ಯಾಯಾಮ, ಊಟದ ವಿಚಾರದಲ್ಲೂ ಅಷ್ಟೇ ಕಟ್ಟುನಿಟ್ಟು.
ಶಿವಣ್ಣ ಬೈಸಿಕಲ್ ಹೊಡೆಯುತ್ತಿರುವ ಚಿತ್ರವನ್ನು ನಿರ್ದೇಶಕ ರಘು ರಾಂ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಬೆಳಗಿನ ಜಾವ ಮೈಸೂರಿನಲ್ಲಿ ಶಿವಣ್ಣ ಸೈಕಲ್ ತುಳಿಯುತ್ತಿದ್ದಾರೆ. ಶಿವಣ್ಣನ ಈ ಸಿಂಪ್ಲಿಸಿಟಿಗೆ ಅಭಿಮಾನಿಗಳು ಮತ್ತೊಮ್ಮೆ ಮಗದೊಮ್ಮೆ ಮಾರುಹೋಗುತ್ತಿದ್ದಾರೆ.
ಮೈಸೂರು ಒಂಟಿಕೊಪ್ಪಲ್ ಸಮೀಪದ ಬೃಂದಾವನ್ ಅಪಾರ್ಟ್ ಮೆಂಟ್ ಬಳಿ ಈ ಚಿತ್ರ ತೆಗೆಯಲಾಗಿಯೇ? ಗ್ತೊತ್ತಿಲ್ಲ. ತಮ್ಮೂರಿನಲ್ಲಿ ಶಿವಣ್ಣ ಈ ರೀತಿ ಸೈಕಲ್ ಹತ್ತಿರುವುದನ್ನು ರಿಯಲ್ ಆಗಿ ನೋಡದವರು ಅಯ್ಯೋ ಎಂಥಾ ಚಾನ್ಸ್ ಮಿಸ್ ಆದೆವಪ್ಪಾ ಎಂದು ಫೇಸ್ ಬುಕ್ ನಲ್ಲಿ ಚಡಪಡಿಸಿದ್ದಾರೆ.
ಶಿವಣ್ಣನ ಸ್ಟೈಲ್ ನೋಡಿ ಸೈಕಲ್ ಮೇಲೆ ಮೈಸೂರು ಮಹಾರಾಜ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಸದ್ಯಕ್ಕೆ 'ಲಕ್ಷ್ಮಿ' ಚಿತ್ರದಲ್ಲಿ ಶಿವಣ್ಣ ಬಿಜಿಯಾಗಿದ್ದು ಅವರ 'ಕಡ್ಡೀಪುಡಿ' ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಶಿವಣ್ಣ ಅಭಿನಯದ 101ನೇ ಚಿತ್ರ 'ಶಿವ' ಆಗಸ್ಟ್ ತಿಂಗಳಾಂತ್ಯಕ್ಕೆ ತೆರೆಗೆ ಬರಲು ಅಣಿಯಾಗಿದೆ.
"ಶಿವ ಎರಡು ಕಣ್ಣು ತೆರೆದರೆ ಕ್ಲಾಸ್. ಮೂರನೇ ಕಣ್ಣು ತೆರೆದರೆ ಮಾಸ್. ಮೂರೂ ಕಣ್ಣು ತೆರೆದರೆ ಖಲ್ಲಾಸ್" ಎಂಬ 'ಶಿವ' ಚಿತ್ರದ ಡೈಲಾಗ್ ಗಳು ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಓಂ ಪ್ರಕಾಶ್ ರಾವ್ ನಿರ್ದೇಶನದ ಪಕ್ಕಾ ಮಾಸ್ ಚಿತ್ರಕ್ಕೆ ಗ್ಲಾಮರ್ ಗೊಂಬೆ ರಾಗಿಣಿ ನಾಯಕಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications












