ಡಬ್ಬಿಂಗ್ ಜನರಿಗೆ ಬೇಕಂದ್ರೆ ತಡೆಯಲು ನಾನ್ಯಾರು: ಶಿವಣ್ಣ
ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಡಬ್ಬಿಂಗ್ ಗೆ ಹಲವು ವರ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಆಗಾಗ ಈ ಬಗ್ಗೆ ಮುಖ್ಯ ವಾಹಿನಿಗಳಲ್ಲಿ ಪದೇ ಪದೇ ಚರ್ಚೆಯು ಆಗುತ್ತಿರುತ್ತದೆ.
ಪರಭಾಷೆ ಸಿನಿಮಾಗಳ ಡಬ್ಬಿಂಗ್ ಗೆ ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ್ದ ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ(Competition Appellate Tribunal) ಇತ್ತೀಚೆಗೆ ವಜಾಗೊಳಿಸಿತ್ತು. ಇದರಿಂದ ಡಬ್ಬಿಂಗ್ ವಿರುದ್ಧದ ಹೋರಾಟದಲ್ಲಿ ಕೆಎಫ್ಸಿಸಿ'ಗೂ ಹಿನ್ನೆಡೆ ಉಂಟಾಗಿದೆ. ಈ ಮಾಹಿತಿಯನ್ನು ಈಗ ಏಕೆ ಹೇಳ್ತಿದ್ದೀವಿ ಅಂದ್ರೆ ನಿನ್ನೆಯಷ್ಟೆ ನಟ ಶಿವರಾಜ್ ಕುಮಾರ್ ರವರು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಡಬ್ಬಿಂಗ್ ಕುರಿತು ಮಾತನಾಡಿದ್ದಾರೆ. ಅವರು ಏನು ಹೇಳಿದ್ರು ತಿಳಿಯಲು ಮುಂದೆ ಓದಿರಿ.

ಸುದ್ದಿಗಾರರೊಂದಿಗೆ ಡಬ್ಬಿಂಗ್ ಬಗ್ಗೆ ಶಿವಣ್ಣ ಹೇಳಿದ್ದು..
ನಿನ್ನೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಡಬ್ಬಿಂಗ್ ಕುರಿತು ಮಾತನಾಡಿರುವ ಶಿವಣ್ಣ, 'ಜನರಿಗೆ ಇತರೆ ಭಾಷೆ ಚಿತ್ರಗಳ ಡಬ್ಬಿಂಗ್ ಬೇಕೇ ಬೇಕು ಎಂದಲ್ಲಿ ರಾಜ್ಯದಲ್ಲಿ ಬೇರೆ ಯಾವ ಭಾಷೆಯ ಸಿನಿಮಾಗಳನ್ನು ಬಿಡುಗಡೆ ಮಾಡಬೇಡಿ' ಎಂದಿದ್ದಾರೆ.

ಕನ್ನಡದಲ್ಲೇ ಬಿಡುಗಡೆ ಮಾಡಿ
'ಡಬ್ಬಿಂಗ್ ಬೇಕೆ ಬೇಕು ಎಂದಾದಲ್ಲಿ ಇತರೆ ಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿಯೇ ಬಿಡುಗಡೆ ಮಾಡಿ. ಆಗ ಜನರಿಗೂ ಖುಷಿಯಾಗುತ್ತದೆ. ಕನ್ನಡಕ್ಕೂ ಒಳ್ಳೆಯದಾಗುತ್ತದೆ' ಎಂದು ಹ್ಯಾಟ್ರಿಕ್ ಹೀರೋ ಹೇಳಿದ್ದಾರೆ.

ಡಬ್ಬಿಂಗ್ ಪ್ರಯೋಜನ ಬಗ್ಗೆ ಶಿವಣ್ಣ ಹೇಳಿದ್ದು
''ಡಬ್ಬಿಂಗ್ ಮಾಡೋದು 'ವರ್ತ್' ಅನಿಸುವುದಿಲ್ಲ. ಹಿಂದೆ ನಾನು ಕಾರ್ಮಿಕರ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂದಿದ್ದೆ. ವಿರೋಧಿಸಿದ್ದು ನಿಜ. ಆದರೆ ಈಗ ವ್ಯಾವಹಾರಿಕ ದೃಷ್ಟಿಯಿಂದ ಬೇಡ ಎನ್ನಲು ಆಗುವುದಿಲ್ಲ' -ಶಿವರಾಜ್ ಕುಮಾರ್

ಡಬ್ಬಿಂಗ್ ಬೇಡ ಎನ್ನಲು ನಾನ್ಯಾರು?
ಡಬ್ಬಿಂಗ್ ಬಗ್ಗೆಯೇ ಮಾತು ಮುಂದುವರೆಸಿ ತಮ್ಮ ಕಡೆಯ ಅಭಿಪ್ರಾಯ ತಿಳಿಸಿದ ಶಿವಣ್ಣ, 'ಡಬ್ಬಿಂಗ್ ನಿಂದ ಪ್ರಯೋಜನ ಇಲ್ಲ ಎಂಬುದು ನನ್ನ ಅನಿಸಿಕೆ. ಆದರೆ ಜನರಿಗೆ ಬೇಕು ಅಂದರೆ ಬೇಡ ಅನ್ನೋದಕ್ಕೆ ನಾನ್ಯಾರು? ಜನರ ಮನೋರಂಜನೆಗಾಗಿಯೇ ತಾನೆ ಸಿನಿಮಾ ಮಾಡೋದು? ಜನರಿಗೆ ಇಷ್ಟವಾದಲ್ಲಿ ಹೂಂ ಎನ್ನಬೇಕೇ ಹೊರತು ಉಹೂಂ ಎನ್ನುವುದಕ್ಕೆ ಆಗುವುದಿಲ್ಲ. ಆದ ಕಾರಣ ಜನರ ಅಭಿಪ್ರಾಯಕ್ಕೆ ನಾನು ಯಾವಾಗಲು ಬದ್ಧನಾಗಿರುತ್ತೇನೆ' ಎಂದಿದ್ದಾರೆ.


Click it and Unblock the Notifications











