ಮೈಸೂರಿನಲ್ಲಿ ಅಭಿಮಾನಿಗಳೊಂದಿಗೆ 'ಬಂಗಾರದ ಮನುಷ್ಯ' ನೋಡಿದ ಶಿವಣ್ಣ
'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರವು 30 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್ಗಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಮೈಸೂರಿನ ಲಕ್ಷ್ಮಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೇ ತಮ್ಮ ಅಭಿನಯದ ಚಿತ್ರವನ್ನು ಅಭಿಮಾನಿಗಳೊಂದಿಗೆ ಕುಳಿತು ವೀಕ್ಷಿಸಿದರು.
ಚಿತ್ರ ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, "ರೈತರಿಗೆ ಸಂಬಂಧಪಟ್ಟ ರೀತಿಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರ ಸಮಸ್ಯೆಗಳು ಅವರು ಅನುಭವಿಸುವ ನೋವುಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ರೈತರಿಗೆ ನಮ್ಮ ಕೈಯಲ್ಲಾದ ಸಹಾಯವನ್ನೂ ಮಾಡುತ್ತೇವೆ" ಎಂದರು.

ಇದೇ ವೇಳೆ ಶಿವರಾಜ್ ಕುಮಾರ್ ಅವರ ಅಭಿಮಾನಿ ಒಬ್ಬರು ಅವರಿಗೆ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರವನ್ನು ಹಾಕಿ ಸಂಭ್ರಮಿಸಿದರು. ತಮ್ಮ ನೆಚ್ಚಿನ ನಟನನ್ನು ಕಂಡ ಕೆಲವು ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರೆ, ಇನ್ನೂ ಕೆಲವರು ಅವರನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದುಕೊಳ್ಳುತ್ತಿರುವುದು ಕಂಡು ಬಂತು. ಬಳಿಕ ಅಲ್ಲಿಂದ ತೆರಳಿದ ಶಿವಣ್ಣ, ಅಂಡರ್ ಫೀಟ್ ರಸ್ತೆಯಲ್ಲಿರುವ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.


Click it and Unblock the Notifications











