ಡಬ್ಬಿಂಗ್ ವಿರುದ್ಧ ಮತ್ತೆ ಮೂರನೇ ಕಣ್ಣು ತೆರೆದ ಶಿವಣ್ಣ
ಡಬ್ಬಿಂಗ್ ಚಿತ್ರಗಳ ಕುರಿತ ವಿವಾದ ಮತ್ತೆ ರಾಜ್ಯದಲ್ಲಿ ಭುಗಿಲೆದ್ದಿದೆ. ಕೆಲವರು ಡಬ್ಬಿಂಗ್ ಬೇಕೇ ಬೇಕು ಎಂದು ವಾದಿಸುತ್ತಿದ್ದರೆ, ಇನ್ನೂ ಕೆಲವರು ಡಬ್ಬಿಂಗ್ ಬಂದರೆ ಕನ್ನಡ ಚಿತ್ರಗಳ ಸಂಸ್ಕೃತಿ ಹಾಳಾಗುತ್ತದೆ ಎಂದು ಕಿಡಿಕಾರುತ್ತಿದ್ದಾರೆ. ಈಗಾಗಲೆ ಕನ್ನಡ ಚಿತ್ರರಂಗದಲ್ಲಿ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
'ಮೈ ಹಸ್ಬೆಂಡ್ಸ್ ವೈಫ್' ಎಂಬ ಚಿತ್ರಕ್ಕೆ ಕನ್ನಡಕ್ಕೆ ನನ್ನ ಗಂಡನ ಹೆಂಡತಿ ಎಂಬ ಹೆಸರಲ್ಲಿ ಡಬ್ ಆಗಿದ್ದು ಇನ್ನೇನು ತೆರೆಯ ಮೇಲೆ ಡಾನ್ಸ್ ಮಾಡಲು ಸಿದ್ಧವಾಗಿದೆ. ಇನ್ನೂ ಕೆಲವು ನಿರ್ಮಾಪಕರು ಯಾವುದಕ್ಕೂ ಇರಲಿ ಎಂದು ಪರಭಾಷೆಯ ಕೆಲವು ಹಿಟ್ ಚಿತ್ರಗಳ ಡಬ್ಬಿಂಗ್ ರೈಟ್ಸ್ ತೆಗೆದುಕೊಂಡಿದ್ದಾರೆ. [ಅಪ್ಪಾಜಿ ಆಶಯದ ವಿರುದ್ಧ ಹೋದರೆ ಸುಮ್ಮನಿರಲ್ಲ]
ಈ ಎಲ್ಲಾ ಬೆಳವಣಿಗಗಳ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮತ್ತೆ ಗರಂ ಆಗಿದ್ದಾರೆ. ಸದ್ಯಕ್ಕೆ ಅವರು ಆರ್ಯನ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದು ಸಿಂಗಪುರದಿಂದ ಭಾನುವಾರ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ.

ಸಿಂಗಪುರದಿಂದಲೇ ಮಾಹಿತಿ ಕಲೆ ಹಾಕಿದ ಶಿವಣ್ಣ
ಶಿವಣ್ಣ ಸಿಂಗಪುರದಲ್ಲಿದ್ದರೂ ಇಲ್ಲಿನ ಕ್ಷಣಕ್ಷಣದ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಈಗವರು ಭಾನುವಾರ (ಜ.19) ನಗರಕ್ಕೆ ಹಿಂತಿರುಗಿದ ತಕ್ಷಣ ತುರ್ತು ಸಭೆ ಕರೆದಿದ್ದಾರೆ. ಡಬ್ಬಿಂಗ್ ವಿಷಯದ ಸಲುವಾಗಿ ಮಾತನಾಡಲು ಎಲ್ಲಾ ಕಲಾವಿದರನ್ನೂ ಅವರು ಕರೆದಿದ್ದಾರೆ.

ಅಂಬರೀಶ್, ಶಿವಣ್ಣ ನೇತೃತ್ವದಲ್ಲಿ ಸಭೆ
ಈ ತುರ್ತು ಸಭೆಗೆ ಯಾರು ಬರುತ್ತಾರೆ ಯಾರು ಬರಲ್ಲ ಎಂಬ ಜಿಜ್ಞಾಸೆಯೂ ಶುರುವಾಗಿದೆ. ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಳೆದೆರಡು ವರ್ಷಗಳಿಂದ ಶಿವಣ್ಣ ಡಬ್ಬಿಂಗ್ ವಿರುದ್ಧ ಗುಡುಗುತ್ತಿರುವುದು ಕಲಾರಸಿಕರಿಗೆ ಗೊತ್ತಿರುವ ಸಂಗತಿ.

ಡಬ್ಬಿಂಗ್ ಬೇಕು ಎನ್ನುತ್ತಿರುವ ನಿರ್ಮಾಪಕರು
ಕಲಾವಿದರ ಸಂಘದಿಂದ ಡಬ್ಬಿಂಗ್ ಚಿತ್ರಗಳಿಗೆ ವಿರೋಧ ಇದ್ದರೆ ನಿರ್ಮಾಪಕರ ಸಂಘ ಡಬ್ಬಿಂಗ್ ಬೇಕು ಎನ್ನುತ್ತಿದೆ. ಈ ಹಿನ್ನೆಲೆಯಲ್ಲಿಯೇ ಶಿವಣ್ಣ ತುರ್ತು ಸಭೆ ಕರೆದಿದ್ದಾರೆ ಎನ್ನಲಾಗಿದೆ. ಮತ್ತೆ ಕನ್ನಡ ಚಿತ್ರರಂಗ ಬಲುದೊಡ್ಡ ಹೋರಾಟಕ್ಕೆ ಸಿದ್ಧವಾಗುವ ಸೂಚನೆಗಳನ್ನು ಕೊಟ್ಟಿದೆ.

ಶಿವಣ್ಣ ರೊಚ್ಚಿಗೇಳಲು ಕಾರಣ ಏನು?
ಕಲಾವಿದರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಬಹುತೇಕ ಸಂಘಗಳು ಡಬ್ಬಿಂಗ್ ಬೇಡ ಎನ್ನುತ್ತಿವೆ. ಆದರೆ ನಿರ್ಮಾಪಕರ ಸಂಘ ಮಾತ್ರ ಬೇಕು ಎನ್ನುತ್ತಿರುವುದು ಶಿವಣ್ಣ ಅವರನ್ನು ರೊಚ್ಚಿಗೆಬ್ಬಿಸಿದೆ. ಇನ್ನೊಂದು ಮೂಲದ ಪ್ರಕಾರ ಡಬ್ಬಿಂಗ್ ಪರ ಹಾಗೂ ವಿರೋಧ ವ್ಯಕ್ತಪಡಿಸುತ್ತಿರುವ ಪಟ್ಟಿಯನ್ನೂ ತಯಾರಿಸಲಾಗುತ್ತಿದೆಯಂತೆ. ಇದು ಈಗಾಗಲೆ ಶಿವಣ್ಣ ಕೈಸೇರಿದೆ ಎನ್ನುತ್ತವೆ ಮೂಲಗಳು.

ತುರ್ತು ಸಭೆಗೆ ಯಾರೆಲ್ಲಾ ಬರುತ್ತಾರೋ?
ವರನಟ ಡಾ.ರಾಜ್ ಕುಮಾರ್ ಕಾಲದಲ್ಲೇ ಡಬ್ಬಿಂಗ್ ಇತ್ತು. ಆಗೆಲ್ಲಾ ಸಿನಿಮಾಗಳು ಓಡುತ್ತಿರಲಿಲ್ಲವೇ ಎಂಬ ಮಾತುಗಳು ಶಿವಣ್ಣ ಕಿವಿಗೆ ತಲುಪಿವೆ. ಈ ರೀತಿಯ ಸಾಕಷ್ಟು ವಿಷಯಗಳು ತುರ್ತು ಸಭೆಯಲ್ಲಿ ಪ್ರಸ್ತಾಪವಾಗಲಿವೆ. ಭಾನುವಾರದ ತುರ್ತುಸಭೆಗೆ ಕಲಾವಿದರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದೇ ಈಗಿರುವ ಪ್ರಶ್ನೆ.


Click it and Unblock the Notifications











