'ಮುಗಿಲು ಪೇಟೆ' ಸಂಗೀತದಲ್ಲಿ ಶ್ರೀಧರ್ ಸಂಭ್ರಮಾಚರಣೆ
'ಏನಾಗಲೀ ಮುಂದೆ ಸಾಗು ನೀ..' ಎಂದು ಹೇಳುತ್ತಲೇ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಯಶಸ್ವಿಯಾಗಿ ಚಿತ್ರರಂಗದಲ್ಲಿಒಂದು ದಶಕದ ದೂರವನ್ನು ಸಾಗಿ ಬಂದಿದ್ದಾರೆ. ಈಗ ಅವರಿಗೆ ಎರಡೆರಡು ಸಂಭ್ರಮಾಚರಣೆಗಳ ಕಾಲ.
ತಮ್ಮ ಯಶಸ್ವಿ ಜೋಡಿ ನಾಯಕ ನಟ ಅಜಯ್ ರಾವ್ ಅವರ ಕೃಷ್ಣ ಟಾಕೀಸ್' ಚಿತ್ರಕ್ಕೆ ಸಂಗೀತ ನೀಡುವುದರ ಜತೆಯಲ್ಲೇ ಮನೋರಂಜನ್ ರವಿಚಂದ್ರನ್ ನಾಯಕರಾಗಿರುವ 'ಮುಗಿಲು ಪೇಟೆ' ಚಿತ್ರದ ಸಂಗೀತ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಹಂಸಲೇಖಾ ಅಭಿಮಾನಿ ಶ್ರೀಧರ್
ಹಂಸಲೇಖಾ ರವಿಚಂದ್ರನ್ ಜೋಡಿಯ ದಿನಗಳಿಂದಲೇ ಹಂಸಲೇಖಾ ಅಭಿಮಾನಿಯಾಗಿ, ಶಿಷ್ಯನಾಗಿ ಗುರುತಿಸಿಕೊಂಡಿರುವ ಶ್ರೀಧರ್ ಸಂಭ್ರಮ್ ಇದೀಗ ರವಿಚಂದ್ರನ್ ಪುತ್ರನ ಚಿತ್ರಕ್ಕೆ ಸಂಗೀತ ನೀಡಲು ಸಾಧ್ಯವಾಗಿರುವುದು ಖುಷಿ ತಂದಿರುವುದಾಗಿ ಹೇಳಿಕೊಂಡಿದ್ದರು. ನಿನ್ನೆಯಷ್ಟೇ ಬಿಡುಗಡೆಯಾಗಿರುವ ಮುಗಿಲು ಪೇಟೆ ಚಿತ್ರದ ಮೋಶನ್ ಪೋಸ್ಟರ್ ನಲ್ಲಿಯೂ ಸಹ ಹಂಸಲೇಖಾ ರವಿಚಂದ್ರನ್ ಛಾಯೆ ಎದ್ದು ಕಂಡಿದೆ. ಅಂದಹಾಗೆ ಅಲ್ಲಿಯೂ ಎರಡೆರಡು ಸಂಭ್ರಮಗಳಿದ್ದವು.

ಶ್ರೀಧರ್ ಗೆ ಸಂಭ್ರಮದ ಜನ್ಮದಿನಾಚರಣೆ
ಒಬ್ಬ ವ್ಯಕ್ತಿ ಸ್ವತಃ ರಜಾ ಹಾಕಿ ಜನ್ಮದಿನವನ್ನು ಸಂಭ್ರಮಿಸುವುದಕ್ಕಿಂತಲೂ ಆತನ ಕೆಲಸವನ್ನು ನೆನಪಿಸಿಕೊಂಡ ಅಭಿಮಾನಿಗಳು ತಾವಾಗಿ ಜನ್ಮದಿನಾಚರಿಸುವುದಕ್ಕೆ ತುಂಬ ವ್ಯತ್ಯಾಸವಿದೆ. ಆ ಯೋಗ ಶ್ರೀಧರ್ ಅವರಿಗೆ ಲಭಿಸಿದೆ. ಡಿಸೆಂಬರ್ 11ರಂದು ಬಿಡುಗಡೆಗೊಳ್ಳಬೇಕಿದ್ದ ಮುಗಿಲು ಪೇಟೆ ಚಿತ್ರದ ಮೋಶನ್ ಪೋಸ್ಟರ್ ಗೆ ಹಿನ್ನೆಲೆ ಸಂಗೀತ ನೀಡುವಲ್ಲಿ ನಿರತರಾಗಿದ್ದವರು ಶ್ರೀಧರ್. ಆದರೆ ಚಿತ್ರದ ನಾಯಕ ಮನೋರಂಜನ್ ಅವರಿಂದ ಹಿಡಿದು, ಶ್ರೀಧರ್ ಸಂಗೀತಾಭಿಮಾನಿಗಳ ತನಕ ನೂರಾರು ಫೋನ್ ಕರೆಗಳು ಸಾಲಾಗಿ ಬರುತ್ತಿದ್ದವು! ಎಲ್ಲವನ್ನು ಅಟೆಂಡ್ ಮಾಡುತ್ತಲೇ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಶ್ರೀಧರ್ ಅವರ ಕಾರ್ಯವೈಖರಿಗೆ ಫಿಲ್ಮೀಬೀಟ್ ಸಾಕ್ಷಿಯಾಗಿತ್ತು. ಗಿಟಾರಿಸ್ಟ್ ಶ್ರೀನಿವಾಸ್ ಅವರಿಗೆ ಸ್ವತಃ ಶ್ರೀಧರ್ ಕೇಕ್ ತಿನ್ನಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಮರುದಿನವೇ ಮನುರಂಜನ್ ಜನ್ಮದಿನ!
ಡಿಸೆಂಬರ್ 11ರಂದು ಮನೋರಂಜನ್ ರವಿಚಂದ್ರನ್ ಜನ್ಮದಿನ. ಭರತ್ ನಾವುಂದ ನಿರ್ದೇಶನದ `ಮುಗಿಲು ಪೇಟೆ' ಸಿನಿಮಾದ ಮೂಲಕ ಮನುರಂಜನ್ ಆಗಿ ಬದಲಾಗಿರುವ ಮನೋರಂಜನ್ ಮೋಶನ್ ಪೋಸ್ಟರ್ ಮತ್ತು ಅದರ ಹಿನ್ನೆಲೆ ಸಂಗೀತಕ್ಕೆ ಸಂತೃಪ್ತಿಗೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ಅದು ಅವರ ಕಡೆಯಿಂದ ನೀಡಲಾದ ಕೊಡುಗೆಯೇ ನಿಜ. ಆದರೆ ಚಿತ್ರದ ತಂತ್ರಜ್ಞರ ಕಡೆಯಿಂದ, ಶ್ರೀಧರ್ ಸಂಭ್ರಮ್ ಕಡೆಯಿಂದ ನಿಜಕ್ಕೂ ಅದು ಮನೋರಂಜನ್ ಗೆ ನೀಡಿದ ಕೊಡುಗೆಯಾಗಿತ್ತು. ಯಾಕೆಂದರೆ ಅಭಿಮಾನಿಗಳಿಗಿಂತಲೂ ಮೊದಲು ಅದು ಮನೋರಂಜನ್ ಅವರ ಮನಗೆಲ್ಲುವ ಬಿಜಿಎಂ ನೀಡಬೇಕಾದ ಜವಾಬ್ದಾರಿ ಶ್ರೀಧರ್ ಅವರ ಮೇಲಿತ್ತು. ಆ ವಿಚಾರದಲ್ಲಿ ಗೆದ್ದಿರುವ ಶ್ರೀಧರ್ ಖುದ್ದು ಸಕಲೇಶಪುರದ ಶೂಟಿಂಗ್ ಲೊಕೇಶನ್ ಗೆ ಹೋಗಿ ಮನೋರಂಜನ್ ಜತೆಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಮನಗೆದ್ದ ಮೋಶನ್ ಪೋಸ್ಟರ್
`ಕೇಳೀ ಪ್ರೇಮಿಗಳೇ..' ಎನ್ನುವ ಟ್ಯೂನ್ ಮೂಲಕ ನಿಧಾನಕ್ಕೆ ತೆರೆದುಕೊಳ್ಳುವ ಮೋಶನ್ ಪೋಸ್ಟರ್, ಮನೋರಂಜನ್ ಅವರ ನ್ಯೂ ಲುಕ್ ತೋರಿಸಿದ ಬಳಿಕ ಅದೇ ಗಿಟಾರ್ ಟ್ಯೂನ್ ಜತೆಗೆ ಕೊನೆಯಾಗುತ್ತದೆ. ಖ್ಯಾತ ಗಿಟಾರಿಸ್ಟ್ ಶ್ರೀನಿವಾಸ್ ಅವರ ಕೈಚಳಕವನ್ನು ಶ್ರೀಧರ್ ಇಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆ ಟ್ಯೂನ್ ಗಳ ನಡುವೆ ``ವೀರಾಸ್ವಾಮಿ ವಂಶ ಕಣೋ, ಕ್ರೇಜಿಸ್ಟಾರು ಅಂಶ ಕಣೋ, ಕನ್ನಡದ ಮಗಾ ಕಣೋ, ಎದ್ದು ಬಂದ ವೀರ ಕಣೋ, ಮಗಾ ಮೆಗಾ ಕ್ರೇಜಿಸ್ಟಾರ್' ಎನ್ನುವ ಕ್ರೇಜಿ ಸಾಲುಗಳು ಮತ್ತು ಟಪ್ಪಾಂಗುಚ್ಚಿ ಮಾದರಿಯ ಸಂಗೀತ ಅಭಿಮಾನಿಗಳನ್ನುಆಕರ್ಷಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ದಾಖಲೆಯ ವ್ಯೂವ್ಸ್ ಜತೆಗೆ ಮುನ್ನುಗ್ಗಿದೆ. ಕಾಮಿಡಿಯಿಂದ ತುಂಬಿದ ಕ್ಯೂಟ್ ಲವ್ ಸ್ಟೋರಿ ಎಂದೇ ಸುದ್ದಿಯಾಗಿದ್ದ ‘ಮುಗಿಲು ಪೇಟೆ' ಚಿತ್ರದ ಈ ಆ್ಯಕ್ಷನ್ ಸನ್ನಿವೇಶದ ಪೋಸ್ಟರ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿರುವುದಂತೂ ನಿಜ.


Click it and Unblock the Notifications











