ನಿನ್ನನ್ನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂಬುದನ್ನು ದೇವರಷ್ಟೆ ಬಲ್ಲ: ಶ್ರುತಿ ಹರಿಹರನ್
ನೀನು ಈ ಭೂಮಿಗಿಂತಲೂ ಒಳ್ಳೆಯ ಜಾಗಕ್ಕೆ ಹೋಗಿ ಸೇರಿದ್ದೀಯ ಎಂದು ಭಾವಿಸಿದ್ದೇನೆ. ನಾನು ನಿನ್ನನ್ನು ಅದೆಷ್ಟು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಆ ದೇವರು ಮಾತ್ರವೇ ಹೇಳಬಲ್ಲ' ಎಂದು ಸಂಚಾರಿ ವಿಜಯ್ ನೆನೆದು ಭಾವುಕರಾಗಿದ್ದಾರೆ ನಟಿ ಶ್ರುತಿ ಹರಿಹರನ್.
'ನಾನು ಈವರೆಗೆ ಜೊತೆಯಾಗಿ ನಟಿಸಿರುವ ಅದ್ಭುತ ನಟರಲ್ಲಿ ನೀನು ಮೊದಲಿಗ. ನಾನು ನಿನ್ನನ್ನು ಬಹಳವಾಗಿ ಮಿಸ್ ಮಾಡಿಕೊಳ್ಳಲಿದ್ದೇನೆ. ನನ್ನ ಹೃದಯ ನೋವಿನಿಂದ ತುಂಬಿ ಹೋಗಿದೆ' ಎಂದಿದ್ದಾರೆ ಶ್ರುತಿ ಹರಿಹರನ್.
'ನೀನು ನನ್ನ ಪ್ರಶ್ನೆ ಮಾಡಿದ್ದೀಯ, ನನ್ನೊಂದಿಗೆ ಚರ್ಚೆ, ವಾಗ್ವಾದ ಮಾಡಿದ್ದೀಯ, ನನ್ನೊಂದಿಗೆ ನಕ್ಕಿದ್ದೀಯ, ನನ್ನ ಕಷ್ಟಕ್ಕೆ ಬೆಂಬಲವಾಗಿ ನಿಂತಿದ್ದೀಯ. ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೀನಿ. ನೀನು ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದೀಯ ಎಂದು ಭಾವಿಸಿದ್ದೇನೆ' ಎಂದಿದ್ದಾರೆ ಶ್ರುತಿ ಹರಿಹರನ್.

'ನ್ಯಾಷನಲ್ ಅವಾರ್ಡ್' ಎಂದೇ ನಾನು ನಿನ್ನನ್ನು ಕರೆಯುತ್ತಿದ್ದೆ. ನಿನ್ನನ್ನು ಕಂಡಾಗಲೆಲ್ಲಾ ಆಶ್ಚರ್ಯಗೊಳ್ಳುತ್ತಿದ್ದೆ ನಾನು. ಈ ಪತ್ರ ಬರೆಯುತ್ತಿರುವ ಈ ಸಮಯದಲ್ಲಿ ನನ್ನ ಹೃದಯ ನೋವಿನಿಂದ ತುಂಬಿ ಹೋಗಿದೆ. ಆದರೆ ನೋವು ತುಸುವಾದರೂ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಇದನ್ನು ಬರೆಯುತ್ತಿದ್ದೇನೆ' ಎಂದಿದ್ದಾರೆ.
'ವಿಜಯ್ ಕುಟುಂಬಕ್ಕೆ ಮತ್ತು ಆತ್ಮೀಯ ಗೆಳೆಯರಿಗೆ ನನ್ನ ಸಂತಾಪಗಳು. ವಿಜಯ್ ಈಗಿನಿದಕ್ಕಿಂತಲೂ ಉತ್ತಮವಾದ ಜಾಗಕ್ಕೆ ಹೋಗಿದ್ದಾನೆ. ನಾವೂ ಸಹ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗಲಿದ್ದೇವೆ' ಎಂದು ಧೈರ್ಯ ಹೇಳಿದ್ದಾರೆ ಶ್ರುತಿ.
'ನಿನಗೆ ನನ್ನ ಪ್ರೀತಿ ತುಂಬಿದ ಅಸಂಖ್ಯ ಅಪ್ಪುಗೆ. ನೀನು ಇನ್ನು ಮುಂದೆ ನನ್ನ ಕರೆ ಸ್ವೀಕರಿಸಿ 'ಹೇಳಮ್ಮ ಸ್ಟೇಟ್ ಅವಾರ್ಡ್' ಎನ್ನುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿನ್ನನ್ನು ಸದಾ ಪ್ರೀತಿಸುತ್ತೇನೆ ಮತ್ತು ಮಿಸ್ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ ನಟಿ ಶ್ರುತಿ ಹರಿಹರನ್.
Recommended Video
ಶ್ರುತಿ ಹರಿಹರನ್ ಹಾಗೂ ಸಂಚಾರಿ ವಿಜಯ್ ಒಟ್ಟಿಗೆ 'ನಾತಿಚರಾಮಿ' ಸಿನಿಮಾದಲ್ಲಿ ನಟಿಸಿದ್ದರು. ಇಬ್ಬರೂ ಬಹಳ ಒಳ್ಳೆಯ ಗೆಳೆಯರಾಗಿದ್ದರು. ಸಿನಿಮಾವನ್ನು ವಿಜಯ್ರ ಮತ್ತೊಬ್ಬ ಆತ್ಮೀಯ ಗೆಳೆಯ ಮಂಸೋರೆ ನಿರ್ದೇಶನ ಮಾಡಿದ್ದರು.


Click it and Unblock the Notifications











