ಸ್ನೇಹಿತೆಯರ ಸಂಘ: ಮೇಘನಾ ರಾಜ್ ಮುಖದಲ್ಲಿ ಮತ್ತೆ ಮೂಡಿದ ನಗು
ಚಿರಂಜೀವಿ ಸರ್ಜಾ ನಿಧನ ಹೊಂದಿ ಮೂರು ತಿಂಗಳಾಯಿತು. ಪ್ರೀತಿಸಿ ಮದುವೆಯಾಗಿದ್ದ ಮೇಘನಾಗೆ ಚಿರು ಸಾವು ಬರಸಿಡಿಲು. ಚಿರು ಸಾವಿನಿಂದ ಮೇಘನಾ ಅನುಭವಿಸಿದ ನೋವನ್ನು ಇಡೀಯ ಕರ್ನಾಟಕವೇ ಕಂಡು ಮರುಗಿತ್ತು.
ಮೇಘನಾ ಸಹ ನಿಧಾನಕ್ಕೆ ಮರಳಿ ಸಹಜ ಜೀವನದತ್ತ ಮರಳುತ್ತಿದ್ದಾರೆ. ನೋವಿನಲ್ಲಿ ಮುಳುಗಿದ್ದ ಮೇಘನಾ ರಾಜ್ ಕುಟುಂಬಕ್ಕೆ ಚಿತ್ರೋದ್ಯಮದ ಸ್ನೇಹಿತರು ಭರವಸೆ ತುಂಬುವ ಯತ್ನ ಮಾಡುತ್ತಲೇ ಇದ್ದಾರೆ.
ತೀವ್ರ ಆಘಾತದಲ್ಲಿದ್ದ ಮೇಘನಾ ರಾಜ್ ಅವರನ್ನು ಆಗಾಗ್ಗೆ ಚಿತ್ರೋದ್ಯಮದ ಗೆಳೆಯರು ಭೇಟಿಯಾಗುತ್ತಲೇ ಇದ್ದಾರೆ. ಆರಂಭದಲ್ಲಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದ ಚಿತ್ರೋದ್ಯಮ ಸ್ನೇಹಿತರು ಈಗ ಮೇಘನಾ ರನ್ನು ನೋವಿನಿಂದ ಹೊರತರುವ ಯತ್ನ ಮಾಡುತ್ತಿದ್ದಾರೆ.

ತಾರಾಮಣಿಯರ ಭೇಟಿ
ಮೇಘನಾ ರಾಜ್ ಮನೆಗೆ ಇಂದು ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಅವರುಗಳು ಭೇಟಿ ನೀಡಿದ್ದರು. ಹಲವು ಸಮಯವನ್ನು ಒಟ್ಟಿಗೆ ಕಳೆದ ಇವರು ಮೇಘನಾ ಗೆ ಹೊಸ ಹುರುಪು ತುಂಬುವ ಯತ್ನ ಮಾಡಿದ್ದಾರೆ.

ಪ್ರಮಿಳಾ ಜೋಷಾಯ್ ಮಸಾಲೆ ದೋಸೆ ಪಾರ್ಟಿ
ಶ್ರುತಿ, ಸುಧಾರಾಣಿ ಅವರುಗಳು ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಅವರಿಗೂ ಆಪ್ತರು, ಮೇಘನಾ ರಾಜ್ಗಿಂತಲೂ ಹಿರಿಯರಾದರೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದವರು. ಹಾಗಾಗಿ ಮನೆಗೆ ಭೇಟಿ ನೀಡಿ ಒಟ್ಟಿಗೆ ಸಮಯ ಕಳೆದಿದ್ದಾರೆ. ಪ್ರಮಿಳಾ ಜೋಷಾಯ್ ಅವರು ಮಸಾಲೆ ದೋಸೆ ಉಣಬಡಿಸಿದ್ದಾರೆ.

ಮೇಘನಾ ಮುಖದಲ್ಲಿ ಕಿರುನಗೆ
ಗರ್ಭಿಣಿ ಆಗಿರುವ ಮೇಘನಾ ರಾಜ್ ಗೆ ಈ ಸಮಯದಲ್ಲಿ ಇಂಥಹಾ ಸಾಂಗತ್ಯದ ಅಗತ್ಯವೂ ಇದೆ. ಅದನ್ನು ಚಿತ್ರೋದ್ಯಮದ ಗೆಳೆಯರು ಅರ್ಥ ಮಾಡಿಕೊಂಡಿದ್ದಾರೆ. ಎಲ್ಲ ಸ್ನೇಹಿತೆಯರು ಒಟ್ಟಿಗೆ ತೆಗೆಸಿಕೊಂಡಿರುವ ಚಿತ್ರದಲ್ಲಿ ಮೇಘನಾ ಮುಖದಲ್ಲಿ ಕಿರುನಗೆ ಕಾಣುತ್ತಿದೆ.

ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಸಹ ಭೇಟಿ ಮಾಡಿದ್ದರು
ಚಿರು ಅಗಲಿಕೆ ನಂತರ ಮೇಘನಾ ರಾಜ್ ಅವರನ್ನು ಹಲವಾರು ಸಿನಿಮಾ ಬಂಧುಗಳು ಭೇಟಿ ಮಾಡಿ ಮಾತನಾಡಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಕುಟುಂಬ, ಮಲಯಾಳಂ ಸಿನಿಮಾದ ಮೇಘನಾ ಸ್ನೇಹಿತರು ಇನ್ನೂ ಅನೇಕರು ಭೇಟಿ ಮಾಡಿದ್ದರು. ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಸಹ ಭೇಟಿ ಮಾಡಿದ್ದರು.


Click it and Unblock the Notifications











