Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ರಾಜ್ಕುಮಾರ್ಗೆ ಪದ್ಮಶ್ರೀ ನೀಡಿ: ಸಿದ್ದರಾಮಯ್ಯ ಆಗ್ರಹ
ನಟ ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯಾವ ಪ್ರಶಸ್ತಿ ಗೌರವಗಳಿಗಿಂತಲೂ ಪುನೀತ್ ರಾಜಕುಮಾರ್ ಜನತೆಯಿಂದ ಗಳಿಸಿರುವ ಪ್ರೀತಿ-ಅಭಿಮಾನ ದೊಡ್ಡದು. ಹೀಗಿದ್ದರೂ, ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಇಂದು ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ, ಟ್ವೀಟ್ಗೆ ಹಲವರು ಸಮ್ಮತಿ ಸೂಚಿಸಿದ್ದಾರೆ. ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
''ಕರುಣೆಯಿಂದ ಪುನೀತ್ ಗೆ ಯಾವುದೇ ಪ್ರಶಸ್ತಿ ಕೊಡೋದು ಬೇಕಾಗಿಲ್ಲ. ಮಲ್ಟಿಪ್ಲೆಕ್ಸ್ ನಲ್ಲಿ ಒಂದು ವರ್ಷ ಸತತವಾಗಿ ತೆರೆಕಂಡು ಇತಿಹಾಸ ನಿರ್ಮಿಸಿದ್ದ ವರ್ಷವೇ ನಿಮ್ಮ ಸರ್ಕಾರ ಅಥವಾ ಪಕ್ಷ ಸೈಫ್ ಅಲಿಖಾನ್ ಗೆ ಅವಾರ್ಡ್ ಕೊಟ್ಟಿದ್ದು. ರಾಷ್ಟ್ರೀಯ ಪಕ್ಷಗಳ ಢೋಂಗಿ ನಾಟಕ ಬೇಡ. ಬೇಕಾದ್ರೆ ಕಂಗನಾಗೆ ಅಥವಾ ಸೈಫ್ ಗೆ ಇನ್ನೊಂದೆರಡು ಪದ್ಮ ಅಥವಾ ಭಾರತರತ್ನ ಕೊಡಿ'' ಎಂದು ಕಿರಣ್ ಕೊಡ್ಲಾಡಿ ಎಂಬುವರು ಪ್ರತಿಕ್ರಿಯೆ ನೀಡಿದ್ದಾರೆ.
''ನೀವಾಗಲಿ ನಿಮ್ಮ ಪಕ್ಷದವರಾಗಲಿ ವಿಷ್ಣು ಅವರಿಗೆ ಅಂಬರೀಶ್ ಅನಂತ್ ರವರಿಗೆ ಪದ್ಮ ಕೊಡಲು ಪ್ರಯತ್ನಿಸಲಿಲ್ಲ ಏಕೆ? ಶಿವಣ್ಣ ಕಾಣುತ್ತಿಲ್ಲವೇ ನಿಮಗೆ? ಪುನೀತ್ ಸಾವಿನ ನೋವು ಮಾಸುವ ಮುನ್ನವಾದರೂ ರಾಜಕೀಯ ಬಿಡಿ'' ಎಂದು ಅಭಿಷೇಕ್ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
''ಪ್ರಶಸ್ತಿಗಳ ಹಿಂದೆ ಯಾವತ್ತು ಹೋಗಬಾರ್ದು ,ಪ್ರಶಸ್ತಿಗಳೇ ನಮ್ಮನ್ನಾ ಹುಡುಕಿಕೊಂಡು ಬರಬೇಕು .ಅಪ್ಪು ಅವ್ರ ಸಾಧನೆಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಬಿಡಿ. ಅವ್ರನ್ನ ಕಣ್ಣು ತುಂಬಿ ಕೊಳ್ಳೋಕೆ ಹರಿದು ಬಂದ ಜನಸಾಗರವೇ ಹೇಳುತ್ತೆ ಅವ್ರ ವ್ಯಕ್ತಿತ್ವ ಎಂತದ್ದು ಅಂತಾ'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ''ಪುನೀತ್ ಅವರ ಸಮಾಜ ಸೇವೆ ,ಅವರಿಗಿದ್ದ ಸಾಮಾಜಿಕ ಕಳಕಳಿ,ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಲ್ಲವನ್ನು ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು'' ಎಂದು ಮತ್ತೊಬ್ಬರು ಅನುಮೋದನೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ನೀಡುವ ಮೊದಲು ಅಂಬರೀಶ್ ಅವರಿಗೆ, ವಿಷ್ಣುವರ್ಧನ್ ಅವರಿಗೆ ಪದ್ಮ ಪ್ರಶಸ್ತಿ ನೀಡಿ. ಮೊದಲು ಹಿರಿಯರನ್ನು ಗೌರವಿಸಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುನೀತ್ ಹೆಸರಲ್ಲಿ ರಾಜಕೀಯ ಕೆಸರೆರಚಾಟ ಮಾಡಬೇಡಿರೆಂದು ಸಹ ಕೆಲವು ಟ್ವಿಟರಾರ್ಟಿಗಳು ಸಲಹೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಜೋರಾಗಿ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ''ರಾಜ್ಯೋತ್ಸವ ಪ್ರಶಸ್ತಿಯ ನಿಯಮಾವಳಿ ಮತ್ತು ಕೋರ್ಟ್ ಆದೇಶದ ಪ್ರಕಾರ ಮರಣೋತ್ತರ ಪ್ರಶಸ್ತಿಗೆ ಅವಕಾಶವಿಲ್ಲ. ಹಾಗಾಗಿ ಈ ಬೇಡಿಕೆ ಪರಿಗಣಿಸಲು ಸಾಧ್ಯವಿಲ್ಲ, ಆದರೆ ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಸೇವೆಯನ್ನು ಪರಿಗಣಿಸುತ್ತೇವೆ. ಯಾವ ರೀತಿಯ ಗೌರವ ಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ. ಈಗಲೇ ಯಾವುದೇ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದೀಪಾವಳಿ ನಂತರ ಸಭೆ ನಡೆಸಿ ಗೌರವ ಸಲ್ಲಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಾಧ್ಯವಾಗದಿದ್ದರೆ ಕರ್ನಾಟಕದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನವನ್ನು ನೀಡಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.