ಸಿದ್ದರಾಮಯ್ಯ ಟ್ವೀಟ್ನಲ್ಲಿ 'ಕಾಂತಾರ', 'ಕೆಜಿಎಫ್'! ಹೊಂಬಾಳೆಗೆ ಎಚ್ಚರಿಕೆ ಕೊಟ್ಟ ಟಗರು!
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಭಾಷಣಗಳು, ವಿಧಾನಸಭೆ ಚರ್ಚೆಗಳಷ್ಟೆ ಹರಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ರಾಜ್ಯ ಸರ್ಕಾರವನ್ನು ಆಗಾಗ್ಗೆ ಟೀಕಿಸುತ್ತಲೇ ಇರುತ್ತಾರೆ.
ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಎಂಬ ಎನ್ಜಿಓ, ಸರ್ಕಾರ ತನಗೆ ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮತದಾರರ ದಾಖಲೆಗಳ್ನು ದುರ್ಬಳಕೆ ಮಾಡಿಕೊಂಡಿರುವುದರ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದು, ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿರುವುದಲ್ಲದೆ, ರಾಜ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ.
ಇದೇ ವಿಷಯವಾಗಿ ಫೇಸ್ಬುಕ್ನಲ್ಲಿ ಬರಹವೊಂದನ್ನು ಪ್ರಕಟಿಸಿರುವ ಸಿದ್ದರಾಮಯ್ಯ ತಮ್ಮ ಪೋಸ್ಟ್ನಲ್ಲಿ 'ಕಾಂತಾರ' ಹಾಗೂ 'ಕೆಜಿಎಫ್' ಸಿನಿಮಾದ ಹೆಸರುಗಳ ಉಲ್ಲೇಖ ಮಾಡಿರುವುದು ಗಮನ ಸೆಳೆದಿದೆ. ಎರಡೂ ನಿರ್ದಿಷ್ಟವಾಗಿ ಇದೇ ಸಿನಿಮಾದ ಹೆಸರುಗಳನ್ನು ಉಲ್ಲೇಖಿಸಿರುವುದರ ಹಿಂದೆ ಕಾರಣವೂ ಇದೆ ಎನ್ನಲಾಗುತ್ತಿದೆ.

ಹಗರಣ ಏನು?
ಚಿಲುಮೆ ಸಂಸ್ಥೆಯು ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತೇವೆ ಎಂದು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರಿಂದ ಅವರಿಗೆ ಕೆಲವು ಷರತ್ತುಗಳ ನಡುವೆ ನಿರ್ದಿಷ್ಟ ಕಾರ್ಯವನ್ನು ವಿಧಿಸಲಾಗಿತ್ತು. ಆದರೆ ಚಿಲುಮೆಯ ಏಜೆಂಟುಗಳು ತಮಗೆ ನೀಡಿದ್ದ ಅಧಿಕಾರ ವ್ಯಾಪ್ತಿಯನ್ನು ಮೀರಿ, ನಿಯಮಗಳನ್ನು ಮುರಿದು ಮನೆ-ಮನೆಗೆ ತೆರಳಿ ಮತದಾರರ ದಾಖಲೆಗಳನ್ನು ಸಂಗ್ರಹಿಸಿದೆ ಎಂದು ಆರೋಪಿಸಲಾಗಿದೆ. ಈ ಮಾಹಿತಿಯನ್ನು ಚಿಲುಮೆ ಸಂಸ್ಥೆ ಬಿಜೆಪಿಗೆ ಮಾರಿತೆ ಅಥವಾ ಬೇರೆ ಪ್ರಭಾವಿಗಳಿಗೆ ಮಾರಿದೆಯೇ ಎಂಬುದು ಸಿದ್ದರಾಮಯ್ಯ ಅವರ ಪ್ರಶ್ನೆ.

ಹೊಂಬಾಳೆಗೆ ಎಚ್ಚರಿಕೆ ಕೊಟ್ಟರಾ ಸಿದ್ದರಾಮಯ್ಯ?
ಆದರೆ ಈ ವಿಷಯದಲ್ಲಿ 'ಕಾಂತಾರ' ಹಾಗೂ 'ಕೆಜಿಎಫ್' ಅನ್ನು ಎಳೆದು ತಂದಿರುವುದಕ್ಕೆ ಕಾರಣವಿದೆ. ಈ ಎರಡೂ ಸಿನಿಮಾಗಳು ಹೊಂಬಾಳೆ ಸಂಸ್ಥೆಯ ಸಿನಿಮಾ. ಹೊಂಬಾಳೆಯ ಮಾಲೀಕ ವಿಜಯ್ ಕಿರಗಂದೂರ್ ಅವರು ಸಚಿವ ಅಶ್ವತ್ಥ್ನಾರಾಯಣ್ ಅವರ ಹತ್ತಿರದ ಸಂಬಂಧಿ. ಸಿದ್ದರಾಮಯ್ಯ ಅವರು ಮತದಾರರ ಪಟ್ಟಿ ಹಗರಣದಲ್ಲಿ 'ಕಾಂತಾರ' ಹಾಗೂ 'ಕೆಜಿಎಫ್' ಹೆಸರು ತಂದು ಪರೋಕ್ಷವಾಗಿ ಈ ಹಗರಣದ ಹಿಂದೆ ಅಶ್ವತ್ಥ್ನಾರಾಯಣ್ ಹಾಗೂ ವಿಜಯ್ ಕಿರಗಂದೂರ್ ಅವರ ಕೈವಾಡ ಇದೆ ಎಂದು ಸೂಚ್ಯವಾಗಿ ತಿಳಿಸುತ್ತಿರುವ ಪ್ರಯತ್ನ ಕಾಣುತ್ತಿದೆ.

ಸಿದ್ದರಾಮಯ್ಯ ಬರೆದಿರುವುದೇನು?
ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, ''ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು "ಕೆಜಿಎಫ್" ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, "ಕಾಂತಾರ" ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು'' ಎಂದಿದ್ದಾರೆ ಸಿದ್ದರಾಮಯ್ಯ. ಇದೊಂದು ರೀತಿಯಲ್ಲಿ ಹೊಂಬಾಳೆಗೆ ಪರೋಕ್ಷ ಎಚ್ಚರಿಕೆ ನೀಡಿದ ಮಾದರಿಯಲ್ಲಿಯೇ ಇದೆ ಎಂದು ರಾಜಕೀಯ ಅರಿತವರು, ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಬಲ್ಲವರು ಸುಲಭವಾಗಿ ಗುರುತಿಸಬಲ್ಲರು.

ಹೊಂಬಾಳೆ ಕಚೇರಿಗೆ ಭದ್ರತೆ
ಹೊಂಬಾಳೆಯ ಹಲವು ಉದ್ಯಮಗಳಲ್ಲಿ ಅಶ್ವತ್ಥ್ನಾರಾಯಣ್ ಅವರ ನೇರ ಭಾಗಿದಾರಿಕೆ ಇದೆ. ಹೊಂಬಾಳೆ ಕನ್ಸ್ಟ್ರಕ್ಷನ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಪಡೆದಿರುವ ನೂರಾರು ಕೋಟಿ ಹಣ ಸಾಲಕ್ಕೆ ಗ್ಯಾರೆಂಟಿಯರ್ ಆಗಿ ಸಹಿ ಮಾಡಿರುವುದು ಸಚಿವ ಅಶ್ವತ್ಥ್ನಾರಾಯಣ್! ಹಗರಣ ಹೊರಬಿದ್ದು, ಹಗರಣದ ಹಿಂದೆ ಹೊಂಬಾಳೆಯ ಕೈವಾಡ ಇರುವ ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ಇಂದು ಕೆಲವು ಕಾಂಗ್ರೆಸ್ ಸದಸ್ಯರು ಹೊಂಬಾಳೆ ಕಚೇರಿ ಬಳಿ ಗಸ್ತು ತಿರುಗಿದ್ದಾರೆ. ಅದರ ಬೆನ್ನಲ್ಲೆ ಹೊಂಬಾಳೆ ಕಚೇರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.


Click it and Unblock the Notifications











