ಈಗತಾನೆ ಯಶಸ್ಸಿನ ಉತ್ತುಂಗ ಏರಿದ್ದರು: ಸಿದ್ಧಾರ್ಥ್ ಶುಕ್ಲಾ ಬಗ್ಗೆ ಸಂಜನಾ ಮಾತು
ಹಿಂದಿ ಕಿರುತೆರೆಯ ಖ್ಯಾತ ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿಧನರಾದ ಸುದ್ದಿ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ಬಾಲಿವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಸಿದ್ಧಾರ್ಥ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಕೂಡ ಸಿದ್ಧಾರ್ಥ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿರುವ ಸಂಜನಾ ಸಿದ್ಧಾರ್ಥ ಸಾವು ತಂದಿದೆ ಎಂದಿದ್ದಾರೆ.
'ಮುಜ್ಸೆ ಶಾದಿ ಕರೋಗೆ' ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಮತ್ತು ಸಂಜನಾ ಗಲ್ರಾನಿ ಜೊತೆಯಾಗಿ ಕೆಲಸ ಮಾಡಿದ್ದರು. ಈ ಬಗ್ಗೆ ಸಂಜನಾ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಸಿದ್ಧಾರ್ಥ್ ಶುಕ್ಲಾ ನಿಧನರಾದ ಸುದ್ದಿ ಈಗ ತಾನೇ ತಿಳಿಯಿತು. ಮೊನ್ನೆಯಷ್ಟೇ ಅವರ ಹೊಸ ಹಾಡು ಬಿಡುಗಡೆಯಾಗಿತ್ತು. ಅದನ್ನು ನೋಡಿ ತುಂಬಾ ಖುಷಿ ಪಟ್ಟಿದ್ದೆ. ನಾನು 'ಮುಜ್ಸೆ ಶಾದಿ ಕರೋಗೆ' ಶೋನಲ್ಲಿ ಭಾಗವಹಿಸಿದ್ದೆ. ಆ ಶೋನಲ್ಲಿ ಅವರೂ ಭಾಗಿ ಆಗಿದ್ದರು. ಇಂದು ಅವರು ಇಲ್ಲ ಎಂಬುದು ಶಾಕಿಂಗ್ ಅನಿಸುತ್ತಿದೆ. ಬದುಕಿರುವವರು ಯಾಕಿಷ್ಟು ಜಗಳ ಮಾಡುತ್ತಾರೆ? ಯಾಕೆ ಅಹಂಕಾರದಲ್ಲಿ ಬದುಕುತ್ತಾರೆ? 40 ವರ್ಷದ ಸಿದ್ಧಾರ್ಥ್ ಇಂದು ನಮ್ಮೊಂದಿಗೆ ಇಲ್ಲ ಎಂದರೆ ಜೀವನಕ್ಕೆ ಏನು ಅರ್ಥ?" ಎಂದು ಸಂಜನಾ ಹೇಳಿದ್ದಾರೆ.
"ಇರುವ ಜೀವನ ತುಂಬ ಚಿಕ್ಕದು. ಅದರಲ್ಲಿ ನೆಗೆಟಿವಿಟಿ ಯಾಕೆ ಬೇಕು? ಇಂದು ಇದ್ದವರು ನಾಳೆ ಇರುತ್ತಾರೋ ಇಲ್ಲವೋ ಎಂಬುದು ಗ್ಯಾರಂಟಿಯಾಗಿ ಯಾರೂ ಹೇಳಲು ಸಾಧ್ಯವಿಲ್ಲ. ಇರುವಷ್ಟು ದಿನ ಒಳ್ಳೆಯದು ಮಾಡಬೇಕು. ಈ ದುರ್ಘಟನೆ ನೋಡಿದರೆ ಜೀವನವೇ ಒಂದು ಮೋಸ ಎನಿಸುತ್ತದೆ. ಈಗತಾನೇ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದರು" ಎಂದು ಸಂಜನಾ ಹೇಳಿದ್ದಾರೆ.

"ನಾನು ಹಿಂದಿ ಕಿರುತೆರೆಯನ್ನು ಜಾಸ್ತಿ ನೋಡುತ್ತೇನೆ. ಸಿದ್ಧಾರ್ಥ್ ಶುಕ್ಲಾ ಒಬ್ಬ ಜಂಟಲ್ಮ್ಯಾನ್ ಆಗಿದ್ದರು. ತುಂಬ ಮೃದುವಾಗಿ ಮಾತನಾಡುತ್ತಿದ್ದರು. ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತಿದ್ದರು. ಅವರನ್ನು ನೋಡಿದರೆ ನೋಡುತ್ತಲೇ ಇರಬೇಕು ಎನಿಸುತ್ತಿತ್ತು. ಮನೆಗೆ ಬಂದು ನಾನು ಅವರ ಬಗ್ಗೆಯೇ ಮಾತನಾಡುತ್ತಿದ್ದೆ. ಕಿರುತೆರೆಗಿಂತಲೂ ಹೆಚ್ಚಾಗಿ ಅವರು ಸಿನಿಮಾದಲ್ಲಿ ಇರಬೇಕಿತ್ತು. ನಮ್ಮ ಮನೆಯಲ್ಲಿ ಎಲ್ಲರಿಗೂ ಅವರೆಂದರೆ ತುಂಬ ಇಷ್ಟ" ಎಂದು ಸಂಜನಾ ಹೇಳಿದ್ದಾರೆ.
"ಸಿದ್ಧಾರ್ಥ್ ಜೊತೆ ಕೆಲಸ ಮಾಡಿದ ಮೇಲೆ ಅವರು ನನಗೆ ಇನ್ನಷ್ಟು ಇಷ್ಟ ಆಗಿದ್ದರು. ಕಳೆದ ವರ್ಷ ಸುಶಾಂತ್ ಸಿಂಗ್ ರಜಪೂತ್ ನಿಧನರಾದರು. ಈ ವರ್ಷ ಸಿದ್ಧಾರ್ಥ್ ಶುಕ್ಲಾ ಹೋದರು. ಇದೇನಾ ಜೀವನ ಎನಿಸುತ್ತದೆ. ಇದಷ್ಟು ದಿನ ಚೆನ್ನಾಗಿ ಇರೋಣ. ಒಬ್ಬರಿಗೊಬ್ಬರು ಸಹಾಯ ಮಾಡೋಣ. ಇನ್ನೊಬ್ಬರ ನೋವನ್ನು ಕಡಿಮೆ ಮಾಡೋಕೆ ಪ್ರಯತ್ನಿಸೋಣ. ಬದುಕು ಚಿಕ್ಕದಾದರೂ ಅದಕ್ಕೆ ಅರ್ಥ ಇರಬೇಕು. ಬೇರೆಯವರಿಗೋಸ್ಕರ ನಾವು ಏನು ಮಾಡುತ್ತೇವೋ ಅದೇ ಹೆಚ್ಚು ಕಾಲ ಉಳಿಯುವಂಥದ್ದು. ದುರಹಂಕಾರ ಬಿಡಿ" ಎಂದು ಸಂಜನಾ ಹೇಳಿದ್ದಾರೆ.
ಸಿದ್ಧಾರ್ಥ್ ಶುಕ್ಲಾ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗಷ್ಟೆ ಪ್ರಸಾರವಾದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. 'ಡ್ಯಾನ್ಸ್ ದಿವಾನೆ-3' ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ ಜೊತೆ ಭಾಗವಹಿಸಿದ್ದರು.
ಸಿದ್ಧಾರ್ಥ್ 2019ರಲ್ಲಿ ಪ್ರಸಾರವಾದ ಬಿಗ್ ಬಾಸ್ 13 ರಲ್ಲಿ ಭಾಗಿಯಾಗಿದ್ದರು. ಅದ್ಭುತವಾಗಿ ಆಟವಾಡುವ ಮೂಲಕ ಸಿದ್ಧಾರ್ಥ್ ಪ್ರೇಕ್ಷಕರ ಮನಗೆದ್ದಿದ್ದರು. ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಇನ್ನು ಬಿಗ್ ಬಾಸ್ 14ನಲ್ಲೂ ಸಿದ್ಧಾರ್ಥ್ ಗೆಸ್ಟ್ ಆಗಿ ಭಾಗಿಯಾಗಿದ್ದರು.


Click it and Unblock the Notifications











