ಸೈಮಾ 2022: ಪ್ರಶಸ್ತಿ ಗೆದ್ದ ನಂತರ 'ಅಪ್ಪು ಅಣ್ಣಾ' ಎಂದು ಕಣ್ಣೀರಿಟ್ಟ ತೆಲುಗು ಸಂಗೀತ ನಿರ್ದೇಶಕ ಥಮನ್

ಸದ್ಯ ನಮ್ಮ ಬೆಂಗಳೂರು ನಗರದಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅಗಲಿದ ಅಪ್ಪುಗೆ ನಮನವನ್ನು ಕೂಡ ಸಲ್ಲಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಈ ಬಾರಿಯ ಸೈಮಾ ಅವಾರ್ಡ್ಸ್ನಲ್ಲಿ 7 ವಿಭಾಗಗಳಲ್ಲಿ ನಾಮಿನೇಟ್ ಕೂಡ ಆಗಿದೆ. ಸ್ವತಃ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಾಯಕನಟ ಕೆಟಗರಿ ಅಡಿಯಲ್ಲಿ ನಾಮನಿರ್ದೇಶನಗೊಂಡಿದ್ದಾರೆ.
ಇನ್ನು ಯುವರತ್ನ ಚಿತ್ರದ ಪರ ಅತ್ಯುತ್ತಮ ಹಿನ್ನಲೆ ಗಾಯಕ ಪುರುಷ ವಿಭಾಗದಲ್ಲಿ ಗಾಯಕ ಅರ್ಮಾನ್ ಮಲಿಕ್ ಹಾಗೂ ಸಂಗೀತ ನಿರ್ದೇಶಕ ಎಸ್ ಥಮನ್ ನಾಮ ನಿರ್ದೇಶನಗೊಂಡಿದ್ದರು. ಯುವರತ್ನ ಚಿತ್ರದ 'ನೀನಾದೆನಾ' ಹಾಡಿಗಾಗಿ ನಾಮ ನಿರ್ದೇಶನಗೊಂಡಿದ್ದ ಗಾಯಕ ಅರ್ಮಾನ್ ಮಲಿಕ್ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಹೀಗೆ ಅರ್ಮಾನ್ ಮಲಿಕ್ ಹಾಗೂ ಎಸ್ ಥಮನ್ ಪ್ರಶಸ್ತಿ ಗೆದ್ದ ಖುಷಿಯನ್ನು ಹಂಚಿಕೊಂಡಿದ್ದಾರೆ. ಪ್ರಶಸ್ತಿ ಗೆದ್ದ ವಿಷಯವನ್ನು ಎಸ್ ಥಮನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಪುನೀತ್ ರಾಜ್ ಕುಮಾರ್ ಅಣ್ಣನವರಿಗೆ ನನ್ನ ಒಲವು, ಈ ಪ್ರಶಸ್ತಿ ನಿಮಗಾಗಿ ಅಪ್ಪು ಅಣ್ಣ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ವೇಳೆ ಕಣ್ಣೀರಿನ ಎಮೋಜಿಗಳನ್ನು ಬಳಸಿರುವ ಎಸ್ ಥಮನ್ ತನ್ನ ನೆಚ್ಚಿನ ಕನ್ನಡ ಹೀರೊವನ್ನು ನೆನೆದಿದ್ದಾರೆ.

ಅಪ್ಪು ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಥಮನ್
ತೆಲುಗಿನಲ್ಲಿ ಸಾಲು ಸಾಲು ಹಿಟ್ ಗೀತೆಗಳನ್ನು ನೀಡಿ ಟಾಪ್ ಮ್ಯೂಸಿಕ್ ಡೈರೆಕ್ಟರ್ ಎನಿಸಿಕೊಂಡಿದ್ದ ಥಮನ್ ಕನ್ನಡ ಚಲನ ಚಿತ್ರರಂಗಕ್ಕೆ ಕಾಲಿಟ್ಟದ್ದು ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಚಿತ್ರದ ಮೂಲಕ. ಮಹೇಶ್ ಬಾಬು ಅಭಿನಯದ ದೂಕುಡು ಸಿನಿಮಾದ ರಿಮೇಕ್ ಆಗಿದ್ದ ಈ ಚಿತ್ರಕ್ಕೆ ದೂಕುಡು ಸಿನಿಮಾಗೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದ ಥಮನ್ ಅವರನ್ನೇ ಸಂಗೀತ ನಿರ್ದೇಶಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಹೀಗೆ ಅಂದಿನಿಂದಲೂ ಅಪ್ಪು ಜೊತೆ ಒಡನಾಟ ಹೊಂದಿದ್ದ ಎಸ್ ಎಸ್ ಥಮನ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರೆಂದರೆ ತುಂಬಾ ಪ್ರೀತಿ.

ಅಪ್ಪು ಜೊತೆ ಮತ್ತೆರಡು ಚಿತ್ರಗಳಲ್ಲಿ ಕೆಲಸ
ಪವರ್ ಚಿತ್ರದ ನಂತರ ಎಸ್ ಎಸ್ ಥಮನ್ ಪುನೀತ್ ರಾಜ್ ಕುಮಾರ್ ಅಭಿನಯದ ಮತ್ತೊಂದು ಚಿತ್ರವಾದ ಚಕ್ರವ್ಯೂಹಕ್ಕೂ ಸಹ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಹಾಗೂ ಕಳೆದ ವರ್ಷವಷ್ಟೆ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ಅಭಿನಯದ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರಕ್ಕೂ ಸಹ ಎಸ್ ಎಸ್ ಥಮನ್ ಸಂಗೀತವಿತ್ತು.

ಗಣೇಶ್ ಮತ್ತು ನಿಖಿಲ್ ಕುಮಾರಸ್ವಾಮಿ ಚಿತ್ರಕ್ಕೂ ಎಸ್ ಥಮನ್ ಮ್ಯೂಸಿಕ್
ಇನ್ನು ಪುನೀತ್ ರಾಜ್ ಕುಮಾರ್ ಸಿನಿಮಾಗಳನ್ನು ಹೊರತುಪಡಿಸಿ ಎಸ್ ಎಸ್ ಥಮನ್ ನಿಖಿಲ್ ಕುಮಾರಸ್ವಾಮಿ ಅಭಿನಯದ ಚೊಚ್ಚಲ ಚಿತ್ರ ಜಾಗ್ವಾರ್ ಹಾಗೂ ಗಣೇಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿದ್ದ ಸೂಪರ್ ಹಿಟ್ ಜೂಮ್ ಚಿತ್ರಕ್ಕೂ ಸಹ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

ಪಾಠಶಾಲಾ ಸಖತ್ ವೈರಲ್
ಇನ್ನು ಪವರ್ ಚಿತ್ರದ ಎಲ್ಲಾ ಹಾಡುಗಳನ್ನು ಸಕತ್ತಾಗಿ ಕಂಪೋಸ್ ಮಾಡಿ ತ್ರಿಪಲ್ ಡೈಮಂಡ್ ಡಿಸ್ಕ್ ಬರುವಂತೆ ಕೆಲಸ ನಿರ್ವಹಿಸಿದ್ದ ಸಂಗೀತ ನಿರ್ದೇಶಕ ಥಮನ್ ಯುವರತ್ನ ಚಿತ್ರದಲ್ಲಿನ ಪಾಠಶಾಲಾ ಹಾಡಿಗಾಗಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಂದ ಅಪಾರವಾದ ಗೌರವವನ್ನು ಸಂಪಾದಿಸಿದ್ದಾರೆ. ಅದರಲ್ಲಿಯೂ ಅಪ್ಪು ಮರಣದ ನಂತರ ಇದೇ ಟ್ಯೂನಿನಲ್ಲಿ ಬಂದ 'ನೀ ಪುನೀತ' ಹಾಡು ಅಪ್ಪು ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ.


Click it and Unblock the Notifications











