ರಮ್ಯಾ ನಟಿಸಬೇಕಿದ್ದ ಪಾತ್ರದಲ್ಲಿ ಸಿರಿ ರವಿಕುಮಾರ್; ಸ್ವಾತಿ ಮುತ್ತಿನ ಮಳೆ ಹನಿಯೇ ಫಸ್ಟ್ ಲುಕ್ ರಿಲೀಸ್
ಗರುಡ ಗಮನ ವೃಷಭ ವಾಹವ ಬಳಿಕ ರಾಜ್ ಬಿ ಶೆಟ್ಟಿ ತಮ್ಮ ನಿರ್ದೇಶನದ ಮೂರನೇ ಚಿತ್ರವನ್ನು ಈ ಹಿಂದೆಯೇ ಘೋಷಿಸಿದ್ದರು. ಈ ಚಿತ್ರಕ್ಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ಶೀರ್ಷಿಕೆಯನ್ನು ಇಡಲಾಗಿತ್ತು. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಮೋಹಕತಾರೆ ರಮ್ಯಾ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಹೌದು, ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಣೆ ಮಾಡಿದ್ದ ನಟಿ ರಮ್ಯಾ ಇದಕ್ಕೆ 'ಆಪಲ್ ಬಾಕ್ಸ್ ಸ್ಟುಡಿಯೊ' ಎಂದು ಹೆಸರನ್ನೂ ಸಹ ಇಟ್ಟಿದ್ದರು. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡು ಆರೇಳು ವರ್ಷಗಳ ಬಳಿಕ ಚಂದನವನಕ್ಕೆ ಮರಳುವುದಾಗಿ ಸಹ ರಮ್ಯಾ ಘೋಷಿಸಿದ್ದರು.
ಚಿತ್ರದ ಶೀರ್ಷಿಕೆ ಅನಾವರಣದ ಪೋಸ್ಟರ್ನಲ್ಲಿ ರಮ್ಯಾ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಚಿತ್ರ ಎಂದೂ ಸಹ ಬರೆಯಲಾಗಿತ್ತು. ಆದರೆ ಕೆಲ ದಿನಗಳು ಉರುಳಿದ ಬಳಿಕ ಚಿತ್ರದಲ್ಲಿ ರಮ್ಯಾ ಅಭಿನಯಿಸುತ್ತಿಲ್ಲ, ರಮ್ಯಾ ಬದಲಿಗೆ ಯುವ ನಟಿ ಸಿರಿ ರವಿಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಈ ಸುದ್ದಿ ಗೊಂದಲಗಳನ್ನೂ ಸಹ ಸೃಷ್ಟಿಸಿತ್ತು. ರಮ್ಯಾ ಚಿತ್ರದಿಂದ ಹೊರನಡೆದ್ರಾ, ನಟಿಸದೇ ಇರುವಂತದ್ದು ಏನಾಯಿತು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಆದರೆ ಈ ಚಿತ್ರದಲ್ಲಿ ನಟಿ ರಮ್ಯಾ ನಿರ್ಮಾಪಕಿಯಾಗಿ ಮುಂದುವರಿಯಲಿದ್ದಾರೆ, ಚಿತ್ರದಿಂದ ಹೊರನಡೆದಿಲ್ಲ, ನಾಯಕಿಯ ಬದಲಾವಣೆ ಮಾತ್ರ ಆಗಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿತು. ಆದರೆ ಇಂದಿಗೂ ಸಹ ರಮ್ಯಾ ಬದಲಾಗಿ ಸಿರಿ ರವಿಕುಮಾರ್ ಯಾಕೆ ನಟಿಸಿದ್ರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗಲಿಲ್ಲ. ಹೀಗೆ ರಮ್ಯಾ ಬದಲಾಗಿ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಟಿಸಿರುವ ನಟಿ ಸಿರಿ ರವಿಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಇಂದು ( ಡಿಸೆಂಬರ್ 5 ) ಹಂಚಿಕೊಂಡಿದೆ. ಪ್ರತಿಭಾವಂತ ನಟಿ ಸಿರಿ ರವಿಕುಮಾರ್ ಅವರನ್ನು ಪ್ರೇರಣ ಆಗಿ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಸ್ವತಃ ರಮ್ಯಾ ಈ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ಇನ್ನು ಈ ಚಿತ್ರದ ಚಿತ್ರೀಕರಣ ಕೇವಲ ಹದಿನಾರು ದಿನಗಳಲ್ಲಿ ಮುಕ್ತಾಯಗೊಂಡಿದ್ದು, ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಕಾರಣ ಚಿತ್ರದ ಮೇಲೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಈ ಹಿಂದೆ 'ಸಕುಟುಂಬ ಸಮೇತ' ಎಂಬ ಚಿತ್ರದಲ್ಲಿ ಶ್ರದ್ಧಾ ಎಂಬ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಸಿರಿ ರವಿಕುಮಾರ್ ಈ ಬಾರಿ ಎಲ್ಲರ ಗಮನ ಸೆಳೆದಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆಯುವುದು ಖಚಿತ.


Click it and Unblock the Notifications











