ಅಪ್ಪು ಫ್ಯಾನ್ಸ್.. ದರ್ಶನ್ ಫ್ಯಾನ್ಸ್ ಮಧ್ಯೆ ಚಪ್ಪಲಿ ಎಸೆದವರು ಯಾರು?
ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ತಿದೆ. ಈ ಘಟನೆಯನ್ನು ಸಾಕಷ್ಟು ಜನ ಖಂಡಿಸುತ್ತಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲಾವಿದರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ವೇದಿಕೆ ದರ್ಶನ್ಗೆ ಬೆಂಬಲ ಸೂಚಿಸುತ್ತಿದ್ದಾರೆ.
ಅಷ್ಟಕ್ಕೂ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದು ಯಾರು ? ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಒಂದ್ಕಡೆ ದರ್ಶನ್ ಫ್ಯಾನ್ಸ್ ಪುನೀತ್ ಫ್ಯಾನ್ಸ್ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಹೊಸಪೇಟೆ ಅಪ್ಪು ಅಡ್ಡ ಎಂದು ಹೇಳಿಕೊಂಡು ಅಲ್ಲಿ 'ಕ್ರಾಂತಿ' ಸಾಂಗ್ ರಿಲೀಸ್ ಮಾಡುವುದನ್ನು ವಿರೋಧಿಸಿದ್ದರು. ಬೆಳಗ್ಗೆಯಿಂದಲೇ 'ಕ್ರಾಂತಿ' ಬ್ಯಾನರ್ಗಳನ್ನು ಹರಿದು ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದರು. ಸಂಜೆ ದರ್ಶನ್ ವೇದಿಕೆ ಏರಿದಾಗ ಇಂತಹ ಕೃತ್ಯ ಎಸಗಿದ್ದಾರೆ ಎಂದು ಭಾರೀ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದು ಕಡೆ ಸಚಿವರಾದ ಆನಂದ್ ಸಿಂಗ್ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ದೊಡ್ಡವರ ಕುಮ್ಮಕ್ಕು ಇಲ್ಲದೇ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎನ್ನುವುದು ಅವರ ವಾದ. ಇದೆಲ್ಲದರ ಮಧ್ಯೆ ಮಾಜಿ ಸಚಿವರಾದ ಹೆಚ್. ಸಿ ಮಹದೇವಪ್ಪನವರ ಟ್ವೀಟ್ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಪ್ರಕರಣ ಈಗ ರಾಜಕೀಯ ಬಣ್ಣ ಪಡೆದುಕೊಳ್ತಿದೆ.

ಹೆಚ್. ಸಿ ಮಹದೇವಪ್ಪ ಹೇಳಿದ್ದೇನು?
ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಮಾಜಿ ಸಚಿವರಾದ ಹೆಚ್. ಸಿ ಮಹದೇವಪ್ಪನವರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ದರ್ಶನ್ ಅಂತಹ ಮಾನವೀಯ ಕಲಾವಿದರ ಮೇಲೆ ಚಪ್ಪಲಿ ಎಸೆದಿರುವ ಕ್ರಮವು ಖಂಡನೀಯ.ಇದು ಕೋಮುವಾದಿ ಪುಂಡರ ಕೆಲಸವೆಂದೇ ಹೇಳಲಾಗುತ್ತಿದ್ದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪುಂಡರನ್ನು ಕೂಡಲೇ ಬಂಧಿಸಬೇಕು" ಎಂದಿದ್ದಾರೆ. ಈ ಟ್ವೀಟ್ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವರಲ್ಲಿ ಹೀಗೊಂದು ಅನುಮಾನ
ಅಭಿಮಾನಿಗಳ ಗುಂಪಿನಿಂದ ದರ್ಶನ್ ಮೇಲೆ ಚಪ್ಪಲಿ ತೂರಿದ ಕಿಡಿಗೇಡಿ ಯಾರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ದರ್ಶನ್ ಹಾಗೂ ಪುನೀತ್ ಫ್ಯಾನ್ಸ್ ನೆಚ್ಚಿನ ನಟರ ಫೋಟೊ ಇದ್ದ ಧ್ವಜಗಳನ್ನು ಹಿಡಿದು ಬಂದಿದ್ದರು. ಆದರೆ ಇದರ ನಡುವೆ ಕೇಸರಿ ಧ್ವಜಗಳು ಕಂಡುಬಂದಿತ್ತು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ತೆಗೆದು ಅಪ್ಪು ಹಾಗೂ ದರ್ಶನ್ ಫ್ಯಾನ್ಸ್ ನಿಮಗೇನು ಕೆಲಸ ಎಂದು ಕೆಲವರು ಕೇಳುತ್ತಿದ್ದಾರೆ. ಇದು ಈಗ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಆ 3 ವಿಷಯಗಳು ಇದಕ್ಕೆ ಕಾರಣ
ನಟ ದರ್ಶನ್ ಬೆಳಗಾವಿ ಪರ ಮಾತನಾಡಿದ್ದು, ಅದೃಷ್ಟ ದೇವತೆ ಬಗ್ಗೆ ಕೊಟ್ಟ ಹೇಳಿಕೆ ಹಾಗೂ ಝೈದ್ ಖಾನ್ ಚಿತ್ರಕ್ಕೆ ಬೆಂಬಲ ಸೂಚಿಸಿದ್ದು ಇಷ್ಟಕ್ಕೆಲ್ಲಾ ಕಾರಣ ಎನ್ನುವುದು ಕೆಲವರ ವಾದ. ದರ್ಶನ್ ಅವರ ಈ ನಡೆಯನ್ನು ವಿರೋಧಿಸಿದ್ದರು, ಫ್ಯಾನ್ಸ್ ಗುಂಪಿನಿಂದ ಚಪ್ಪಲಿ ತೂರಿರುವ ಸಾಧ್ಯತೆ ಹೇಳಲಾಗುತ್ತಿದೆ. ಅಪ್ಪು ಫ್ಯಾನ್ಸ್ ಕೂಡ ಇಂತದ್ದೇ ಆರೋಪ ಮಾಡುತ್ತಿದ್ದಾರೆ. ನಮ್ಮ ಅಪ್ಪು ಫ್ಯಾನ್ಸ್ ಹೀಗೆ ಮಾಡುವುದಕ್ಕೆ ಸಾಧ್ಯವಿಲ್ಲ. ಫ್ಯಾನ್ಸ್ ಮಧ್ಯೆ ತಂದಿಟ್ಟು ತಮಾಷೆ ನೋಡಲು ಹೀಗೆ ಮಾಡಿರಬಹುದು ಅನ್ನುವುದು ಅವರ ವಾದ.

ಕಿಡಿಗೇಡಿ ಬಂಧನಕ್ಕಾಗಿ ಪ್ರತಿಭಟನೆ
ಇಷ್ಟೆಲ್ಲಾ ವಾದ ವಿವಾದ, ಗಲಾಟೆ ನಡೆದರೂ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ ಯಾರು ಎನ್ನುವುದು ಗೊತ್ತಾಗಿಲ್ಲ. ಕೆಲವರು ಇದೆಲ್ಲ ಅಪ್ಪು ಫ್ಯಾನ್ಸ್ ಕೃತ್ಯ ಎನ್ನುತ್ತಿದ್ದಾರೆ. ಪ್ರಕರಣ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದರಿಂದ ಆ ಕಿಡಿಗೇಡಿಯ ಬಂಧನವಾದರೆ ಇದಕ್ಕೆಲ್ಲಾ ಉತ್ತರ ಸಿಗಬಹುದು. ಸೂಕ್ತ ತನಿಖೆ ನಡೆಸಿ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವಂತೆ ಚಿತ್ರದುರ್ಗ, ದಾವಣಗೆರೆಯಲ್ಲಿ ಪ್ರತಿಭಟನೆಗಳು ಶುರುವಾಗಿದೆ.


Click it and Unblock the Notifications











