"ಇದು ಚಿತ್ರರಂಗಕ್ಕೆ ಕಪ್ಪು ಚುಕ್ಕಿ.. ಸಣ್ಣತನ, ಹೇಡಿತನ": ಸಂಸದೆ ಸುಮಲತಾ ಅಂಬರೀಶ್
ಕ್ರಾಂತಿ' ಸಿನಿಮಾ ಸಾಂಗ್ ರಿಲೀಸ್ ವೇಳೆ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ತಾರೆಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಿರಿಯ ನಟ ಜಗ್ಗೇಶ್, ವಸಿಷ್ಠ ಸಿಂಹ, ಶ್ರೀಮುರಳಿ, ನಟಿ ಅಮೂಲ್ಯ ಸೇರಿದಂತೆ ಹಲವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಶಿವರಾಜ್ಕುಮಾರ್ ಕೂಡ ವಿಡಿಯೋ ಮಾಡಿ ಮಾತನಾಡಿದ್ದು "ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸಿಕೊಂಡಿದ್ದರು. ಇದೀಗ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್ ಕೂಡ ದರ್ಶನ್ಗೆ ಬೆಂಬಲ ಸೂಚಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದಿರುವ ಸುಮಲತಾ ಅಂಬರೀಶ್ "ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ ದರ್ಶನ್ ಮೇಲೆ ನಡೆದಿರುವ ಹಲ್ಲೆ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ. ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಇಟ್ಟ ಈ ಘಟನೆ ಎಸಗಿದವರ ಸಣ್ಣತನ, ಹೇಡಿತನ ಮಾತ್ರ ಬಹಿರಂಗವಾಗಿದೆ. ಇಡೀ ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ" ಎಂದಿದ್ದಾರೆ. ಯಶ್, ಅಪ್ಪು, ಅಂಬಿ, ದರ್ಶನ್, ಉಪೇಂದ್ರ ಒಟ್ಟಿಗೆ ಇರುವ ಫೋಟೊ ಜೊತೆಗೆ ದರ್ಶನ್, ಅಭಿಷೇಕ್ ಜೊತೆ ತೆಗೆಸಿಕೊಂಡು ಫೋಟೊ ಶೇರ್ ಮಾಡಿ ನಾವೆಲ್ಲಾ ಒಂದೇ ಎಂದು ಸಾರಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು We Stand with Dboss ಎಂದು ಅಭಿಯಾನ ಶುರುಮಾಡಿದ್ದಾರೆ. ದರ್ಶನ್ ನೀವು ಬೇಸರ ಮಾಡಿಕೊಳ್ಳಬೇಡಿ. ನಾವು ನಿಮ್ಮ ಜೊತೆ ಸದಾ ಇರುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ತಿಳಿಸುತ್ತಿದ್ದಾರೆ. #WeStandWithDboss ಹ್ಯಾಷ್ಟ್ಯಾಗ್ ಟ್ರೆಂಡ್ ಆಗ್ತಿದೆ.


Click it and Unblock the Notifications











