ನಿರ್ದೇಶಕರ ಸಂಘದಲ್ಲಿ ಭುಗಿಲೆದ್ದ ವಿವಾದ: ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕರು ಗರಂ
ಸಿನಿಮಾ ನಿರ್ದೇಶಕರ ಸಂಘದ ಒಳಜಗಳ ತಾರಕಕ್ಕೇರಿದೆ. ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ವಿರುದ್ಧ ಸಂಘದ ಕೆಲವು ಸದಸ್ಯರು ಹಾಗೂ ನಿರ್ದೇಶಕರುಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಂಘದ ಆಡಳಿತಾಧಿಕಾರಿ ರೂಪ ಅಯ್ಯರ್ ನೇಮಕಕ್ಕೆ ಟೇಶಿ ವೆಂಕಟೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಯಾಗಿ ರೂಪ ಅಯ್ಯರ್ ಸಹ ಟೇಶಿ ವೆಂಕಟೇಶ್ ಆಯ್ಕೆ ಬೈಲಾ ಪ್ರಕಾರ ನಡೆದಿಲ್ಲ ಎಂದಿದ್ದರು. ಇದೀಗ ಈ ವಿವಾದ ಇನ್ನಷ್ಟು ಹೆಚ್ಚಾಗಿದೆ.
ಕೊರೊನಾ ಸಂಕಷ್ಟ ಸಮಯದಲ್ಲಿ ಚಲನಚಿತ್ರ ಅಕಾಡೆಮಿಯಾಗಲಿ, ಸರ್ಕಾರವಾಗಲಿ ನಿರ್ದೇಶಕರಿಗೆ ಏನೂ ಮಾಡಿಲ್ಲ ಎಂದಿದ್ದರು. ಅಲ್ಲದೆ, ಫಿಲಂ ಸಿಟಿ ಹೆಸರಲ್ಲಿ ಹಣ ದೋಚಲು ಯತ್ನಿಸುತ್ತಿರುವವರಿಗೆ ನಾನು ಅಡ್ಡಗಾಲಾಗಿದ್ದೇನೆ ಹಾಗಾಗಿ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದರು.
ಇದಕ್ಕೆ ಪ್ರತಿಯಾಗಿ ಇಂದು ನಿರ್ದೇಶಕರಾದ, ಜೆಜೆ ಶ್ರೀನಿವಾಸ್, ನಾಗೇಂದ್ರ ಅರಸ್, ಮಳವಳ್ಳಿ ಸಾಯಿಕೃಷ್ಣ ಇನ್ನೂ ಕೆಲವರು ಸುದ್ದಿಗೋಷ್ಠಿ ನಡೆಸಿದ್ದು, ''ಟೇಶಿ ವೆಂಕಟೇಶ್ ಅವರು 'ಸಿನಿಮಾ ಬಜಾರ್' ಯೋಜನೆ ಹೆಸರಲ್ಲಿ ನಿರ್ಮಾಪಕರಿಗೆ ಮೋಸ ಮಾಡಿದ್ದಾರೆ'' ಎಂದಿದ್ದಾರೆ.

''ಸಿನಿಮಾ ನಿರ್ದೇಶಕರ ಸಂಘಕ್ಕೆ ಚುನಾವಣೆಯೇ ನಡೆಯದೆ ಟೇಶಿ ವೆಂಕಟೇಶ್ ಅಧ್ಯಕ್ಷರಾಗಿದ್ದಾರೆ. 2 ಲಕ್ಷ ಹಣಕ್ಕೆ ಅಧ್ಯಕ್ಷಗಿರಿಯನ್ನು ಅವರು ಡೀಲ್ ಮಾಡಿಕೊಂಡಿದ್ದಾರೆ. ಹಳೆಯ ಅಧ್ಯಕ್ಷರು ರಾಜೀನಾಮೆಯೇ ನೀಡದೇ ಅಧ್ಯಕ್ಷರ ಆಯ್ಕೆ ಆಗುವುದು ಮಾನ್ಯವಲ್ಲ'' ಎಂದು ಕೆಲವರು ಆರೋಪ ಮಾಡಿದ್ದಾರೆ.
''ನಿರ್ಮಾಪಕರನ್ನು ಕರೆದು ಖಾಸಗಿ ಹೋಟೆಲ್ನಲ್ಲಿ ಕಾರ್ಯಕ್ರಮ ಮಾಡಿ, ಕನ್ನಡ ಸಿನಿಮಾಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಎಂದಿದ್ದರು. ಸಾಕಷ್ಟು ಮಂದಿ ನಿರ್ಮಾಪಕರು ಅದನ್ನು ನಂಬಿ ಹಣ ನೀಡಿದ್ದರು ಆದರೆ ಯಾವ ಸಿನಿಮಾವೂ ಮಾರಾಟವಾಗಲಿಲ್ಲ'' ಎಂದಿದ್ದಾರೆ ಜೆಜೆ ಶ್ರೀನಿವಾಸ್.
Recommended Video
ರೂಪ ಅಯ್ಯರ್, ಸಂಘದ ಆಡಳಿತಾಧಿಕಾರಿಯಾಗಿ ಆಯ್ಕೆ ಆಗಿದ್ದು ಅವರ ಆಯ್ಕೆ ಬಗ್ಗೆ ಟೇಶಿ ವೆಂಕಟೇಶ್ ಅಪಸ್ವರ ಎತ್ತಿದ್ದಾರೆ. ರೂಪ ಅಯ್ಯರ್ ಆಯ್ಕೆ ಸೂಕ್ತವಲ್ಲ ಎಂದಿದ್ದಾರೆ. ರೂಪ ಅಯ್ಯರ್ ಸಹ ಟೇಶಿ ವೆಂಕಟೇಶ್ ಆಯ್ಕೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











