ಚೇತನ್ ಚಂದ್ರ ಚಿತ್ರಕ್ಕೆ ಟಾಲಿವುಡ್ ನಿರ್ದೇಶಕನಿಂದ ಆಕ್ಷನ್ ಕಟ್
'ಪ್ರೇಮಿಸಂ', 'ರಾಜಧಾನಿ', 'ಜಾತ್ರೆ' ಸಿನಿಮಾಗಳಲ್ಲಿ ನಟಿಸಿರುವ ಚೇತನ್ ಚಂದ್ರ ಎಲ್ಲಿ ಹೋದ್ರು, ಅವರ ಸಿನಿಮಾಗಳ ಬಗ್ಗೆ ಯಾವುದೇ ಸದ್ದು ಕೂಡ ಇಲ್ಲವಲ್ಲ ಎಂಬ ಗುಸು ಗುಸು ಸ್ಯಾಂಡಲ್ ವುಡ್ ಸಿನಿ ಪ್ರೇಮಿಗಳಲ್ಲಿ ಹಲವು ದಿನಗಳಿಂದ ಇದೆ. ಆದ್ರೆ ಸದ್ಯದಲ್ಲಿ ಚೇತನ್ ಚಂದ್ರ ಅವರ ಕನ್ನಡದ 'ವ್ಯಾಘ್ರ' ಸಿನಿಮಾ, ತಮಿಳು ಚಿತ್ರ 'ನಿಂದ್ರು ಕೊಲ್ವನ್' ಎರಡು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಈಗ ಅವರ ಮುಂದಿನ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ.
ಚೇತನ್ ಚಂದ್ರ ಅವರು ಈಗ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದು, ಇನ್ನೂ ಹೆಸರಿಡದ ಅವರ ಚಿತ್ರದಲ್ಲಿ ನಾಲ್ವರು ನಟಿಯರು ಅಭಿನಯಿಸಲಿದ್ದಾರೆ ಎಂಬ ಹೊಸ ಸುದ್ದಿ ಕೇಳಿಬಂದಿದೆ. ಇನ್ನೊಂದು ವಿಶೇಷತೆ ಎಂದರೆ ಈ ಚಿತ್ರಕ್ಕೆ ತೆಲುಗಿನ ಸೂರ್ಯ ಕಿರಣ್ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಮೂಲಗಳಿಂದ ತಿಳಿದಿದೆ.

ಚೇತನ್ ಚಂದ್ರ ಅವರಿಗೆ ಎರಡು ವರ್ಷಗಳ ಹಿಂದೆಯೇ ನಿರ್ದೇಶಕ ಸೂರ್ಯ ಕಿರಣ್ ಒಂದು ಕತೆಯನ್ನು ಹೇಳಿದ್ದರಂತೆ. ಈ ಕತೆ ಕೇಳಿ ಇಷ್ಟಪಟ್ಟಿದ್ದ ಚೇತನ್ ಚಾಲೆಂಜಿಂಗ್ ಪಾತ್ರ ನನಗೆ ಸಿಕ್ಕಿರುವುದಾಗಿ ಹೇಳಿ ಒಪ್ಪಿಕೊಂಡಿದ್ದಾರೆ. ಇನ್ನೂ ಟೈಟಲ್ ಇಡದ ಈ ಸಿನಿಮಾ ಮೂಲಕ ಈಗ ಚೇತನ್ ಟಾಲಿವುಡ್ ಅಂಗಳಕ್ಕೂ ಪಾದಾರ್ಪಣೆ ಮಾಡಲು ಹೊರಟಿದ್ದಾರೆ.
ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಸೂರ್ಯ ಕಿರಣ್ ಅನಂತರ ನಿರ್ದೇಶಕರಾಗಿ ತಮ್ಮ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಈಗ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಚೇತನ್ ಚಂದ್ರ ಅಭಿನಯಿಸಲಿರುವ ಈ ಚಿತ್ರದಲ್ಲಿ ರವಿಶಂಕರ್ 2ನೇ ಶತಮಾನದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ 'ಫ್ರೆಂಡ್ಸ್' ಮತ್ತು 'ಶ್ರೀಮತಿ' ಚಿತ್ರಕ್ಕೆ ಸಂಗೀತ ನೀಡಿದ್ದ ಜಿಕೆ ರವರು ಈ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ.


Click it and Unblock the Notifications











