ಯೋಧರಿಗಾಗಿ ಬರೋಬ್ಬರಿ 175 ಎಕರೆ ಭೂಮಿ ನೀಡುವುದಾಗಿ ಹೇಳಿದ ನಟ ಸುಮನ್
ಸೌತ್ ಚಿತ್ರರಂಗದ ಖ್ಯಾತ ನಾಯಕ ಸುಮನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಮೈಸೂರಿನಲ್ಲಿ ಹುಟ್ಟಿದ ಸುಮನ್ ತಮ್ಮ ಚಿತ್ರ ಜೀವನ ಶುರು ಮಾಡಿದ್ದು, ಫೇಮಸ್ ಆಗಿದ್ದು, ಎಲ್ಲವೂ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ.
ತಮ್ಮ ಸಿನಿಮಾಗಳ ಮೂಲಕ ಸಮಾಜದಲ್ಲಿ ಗೌರವ ಪಡೆದಿದ್ದಾರೆ. ಹಣ ಕೀರ್ತಿ ಎಲ್ಲವನ್ನು ಪಡೆದ ಸಮಾಜಕ್ಕೆ ಮತ್ತೆ ಏನಾದರೂ ನೀಡಬೇಕು ಎನ್ನುವ ಹಂಬಲ ಸುಮನ್ ಹೊಂದಿದ್ದಾರೆ. ಈ ಕಾರಣ ಒಂದು ಮಹತ್ವದ ಕೆಲಸಕ್ಕೆ ಅವರು ಕೈ ಹಾಕಿದ್ದಾರೆ.
'ಸದ್ಗುಣ ಸಂಪನ ಮಾಧವ 100 %' ಎಂಬ ಹೊಸ ಸಿನಿಮಾದ ಮೂಲಕ ಬಹಳ ವರ್ಷಗಳ ಬಳಿಕ ಕನ್ನಡಕ್ಕೆ ಸುಮನ್ ಬರುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು ಸೈನಿಕರಿಗಾಗಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ವಿವರ ನೀಡಿದರು. ನಿಜಕ್ಕೂ ಒಬ್ಬ ಭಾರತದ ಪ್ರಜೆಯಾಗಿ ಸುಮನ್ ಕೆಲಸ ಮೆಚ್ಚುವ ಹಾಗಿದೆ. ಮುಂದೆ ಓದಿ....

ಯೋಧರಿಗಾಗಿ 175 ಎಕರೆ ಜಾಗ
ಭಾರತೀಯ ಯೋಧರಿಗಾಗಿ ಸುಮನ್ ತಮ್ಮ 175 ಎಕರೆ ಜಾಗವನ್ನು ನೀಡುವುದಾಗಿ ಹೇಳಿದ್ದಾರೆ. ಸೈನಿಕರ ಬಗ್ಗೆ ಬಹಳ ಪ್ರೀತಿ ಹೊಂದಿರುವ ಅವರು ಈ ಕೆಲಸದ ಮೂಲಕ ಸೇನೆಗೆ ಗೌರವ ನೀಡುತ್ತಿದ್ದಾರೆ. ''40 ವರ್ಷ ಚಿತ್ರರಂಗದಲ್ಲಿ ಇದ್ದು, 400 ಸಿನಿಮಾಗಳನ್ನು ಮಾಡಿದ್ದೇನೆ ಅದನ್ನು ಬಿಟ್ಟು ದೇಶಕ್ಕಾಗಿ ಏನಾದರೂ ಮಾಡಬೇಕು ಅಂತ ಈ ಕೆಲಸ ಮಾಡಿದ್ದೇನೆ'' ಎಂದರು ಸುಮನ್

ಕಾರ್ಗಿಲ್ ಯೋಧರಿಗಾಗಿ ಭೂಮಿ
ಈ ಹಿಂದೆಯೇ ಸುಮನ್ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರಿಗಾಗಿ ಭೂಮಿ ನೀಡುವ ಯೋಜನೆ ಹೊಂದಿದ್ದರಂತೆ. ಆದರೆ, ಕೆಲ ಸಮಸ್ಯೆಗಳಿಂದ ಆಗ ಅದು ಆಗಲಿಲ್ಲ. ಈಗ ಆ ಜಾಗಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಸಮಸ್ಯೆ ಇಲ್ಲ. ಈ ಕಾರಣ ಶೀಘ್ರದಲ್ಲಿಯೇ ಯೋಧರಿಗಾಗಿ ಭೂಮಿ ನೀಡಲಿದ್ದಾರೆ.

ಸ್ಟೂಡಿಯೋ ಮಾಡುವ ಆಸೆ ಇತ್ತು
ಸುಮನ್ ಅವರ ಒಡೆತನದ 175 ಎಕರೆ ಜಾಗ ಹೈದರಾಬಾದ್ ನಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಈ ಜಾಗದಲ್ಲಿ ಸುಮನ್ ಸ್ಟೂಡಿಯೊ ಮಾಡುವ ಆಸೆ ಹೊಂದಿದ್ದರು. ಆದರೆ, ಯೋಧರಿಗಾಗಿ ತಮ್ಮ ಭೂಮಿ ನೀಡಿ ಸಾರ್ಥಕತೆ ಮೆರೆದಿದ್ದಾರೆ. ಸುಮನ್ ನಡೆಗೆ ಅವರ ಕುಟುಂಬ ಕೂಡ ಬೆಂಬಲ ಸೂಚಿಸಿದೆ.

ಅವರು ರಿಯಲ್ ಹೀರೋಗಳು
ಅಂದಹಾಗೆ, ಚಿತ್ರದ ಸುದ್ದಿಗೋಷ್ಠಿ ವೇಳೆ ಸೈನಿಕರ ಬಗ್ಗೆ ಮಾತನಾಡಿರುವ ಸುಮನ್ ''ಭಾರತದ ಸೈನಿಕರು ಬಹಳ ಕಷ್ಟ ಪಡುತ್ತಾರೆ. ಯಾವಾಗ ಬೇಕಾದರೂ ಸಾಯುತ್ತೇನೆ ಅಂತ ತಿಳಿದಿದ್ದರೂ ಆ ಕೆಲಸಕ್ಕೆ ಅವರು ಸೇರುತ್ತಾರೆ. ಸೈನಿಕರ ಕುಟುಂಬದ ಧೈರ್ಯ ಕೂಡ ದೊಡ್ಡದು.'' ಎಂದು ಯೋಧರ ತ್ಯಾಗವನ್ನು ಸುಮನ್ ಮೆಚ್ಚಿದ್ದಾರೆ.


Click it and Unblock the Notifications











