ಕನ್ನಡಕ್ಕೆ 'ಭಜರಂಗಿ' ಕೊಟ್ಟ ಹೊಸ ಖಳನಟ ಲೋಕೇಶ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 105 'ಭಜರಂಗಿ' ಚಿತ್ರಕ್ಕೆ ರಾಜ್ಯದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ರಕ್ತಾಕ್ಷನಾಗಿ ಉಗಾಂಡಾದ ಈದಿ ಅಮೀನ್ ನೆನಪಿಸುವಂತೆ ಅಭಿನಯಿಸಿರುವ ನಟ ಸೌರವ್ ಲೋಕೇಶ್ ಈಗ ಎಲ್ಲರ ಗಮನಸೆಳೆಯುತ್ತಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ಲೋಕೇಶ್ ಚಿತ್ರದಲ್ಲಿ ತಮ್ಮದೇ ಆದಂತಹ ಮ್ಯಾನರಿಸಂ ಮೂಲಕ ಕನ್ನಡಕ್ಕೆ ಹೊಸ ಖಳನಟನಾಗಿ ಪರಿಚಯವಾಗಿದ್ದಾರೆ. ಕೋರೆಹಲ್ಲುಗಳನ್ನು ತೋರಿಸುತ್ತಾ, ಹೆಂಗೆಳೆಯರ ಮೇಲೆ ಮೃಗದಂತೆ ಹಾರಿ ತನ್ನ ಬಯಕೆ ತೀರಿಸಿಕೊಳ್ಳುವ ಪಾತ್ರ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. [ಭಜರಂಗಿ ಚಿತ್ರ ವಿಮರ್ಶೆ]
ಈ ಹಿಂದೆ ಶಿವಣ್ಣ ಅಭಿನಯದ 'ಶಿವ' ಚಿತ್ರದಲ್ಲಿ ಲೋಕೇಶ್ ಸಣ್ಣ ಪಾತ್ರ ಪೋಷಿಸಿದ್ದರು. ಈಗ 'ಭಜರಂಗಿ' ಚಿತ್ರದಲ್ಲಿ ಪೂರ್ಣ ಪ್ರಮಾಣದ ಖಳನಟನಾಗಿ ಹೊರಹೊಮ್ಮಿದ್ದಾರೆ. 'ಸವಾರಿ' ಹಾಗೂ 'ಮತ್ತೆ ಮುಂಗಾರು' ಚಿತ್ರಗಳಲ್ಲೂ ಲೋಕೇಶ್ ಅಭಿನಯಿಸಿದ್ದಾರೆ.'ಭಜರಂಗಿ' ಚಿತ್ರದಲ್ಲಿನ ಕುದುರೆ ಸವಾರಿ ಸನ್ನಿವೇಶಗಳ ಚಿತ್ರೀಕರಣ ವೇಳೆ ಲೋಕೇಶ್ ಗಾಯಗೊಂಡಿದ್ದರು. ಒಂದು ತಿಂಗಳು ಕಾಲ ಹಾಸಿಗೆ ಹಿಡಿಯುವಂತಾಗಿತ್ತು. ಮಧು ಗುರುಸ್ವಾಮಿ ಹಾಗೂ ಚೇತನ್ ಎಂಬ ಇನ್ನಿಬ್ಬರು ಕಲಾವಿದರೂ ಚಿತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ದೇವಕನ್ಯೆ ಕೃಷ್ಣೆಯಾಗಿ ರುಕ್ಮಿಣಿ ವಿಜಯ್ ಕುಮಾರ್ ಅವರದು ಮನಮಿಡಿಯುವ ಪಾತ್ರ. ಇಷ್ಟೆಲ್ಲಾ ಕಲಾವಿದರಿಗೆ 'ಭಜರಂಗಿ' ಚಿತ್ರ ಹೊಸ ಜೀವವನ್ನು ಪ್ರಸಾದಿಸಿದೆ. (ಏಜೆನ್ಸೀಸ್)


Click it and Unblock the Notifications












