'ಡಾ.ವಿಷ್ಣುವರ್ಧನ ರಾಷ್ಟೀಯ ಉತ್ಸವ'ದ ಹತ್ತು ಹಲವು ವಿಶೇಷಗಳು
ಇದೇ ತಿಂಗಳ 27 ರಂದು (ಭಾನುವಾರ) 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಕಾರ್ಯಕ್ರಮ ನಡೆಯಲಿದೆ. ದೆಹಲಿಯಲ್ಲಿರುವ ಕರ್ನಾಟಕ ಸಂಘದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯಲಿದೆ.
'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಕಾರ್ಯಕ್ರಮದ ಎಲ್ಲ ತಯಾರಿಗಳು ಈಗಾಗಲೇ ನಡೆದಿದ್ದು, ಇಂದು ಈ ಬಗ್ಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್ ತಮ್ಮ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಮುಂದೆ ಓದಿ....

ಇದೇ ತಿಂಗಳ 27ಕ್ಕೆ ಕಾರ್ಯಕ್ರಮ
'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಇದೇ ತಿಂಗಳ 27 ರಂದು ನಡೆಯಲಿದೆ. ದೆಹಲಿಯಲ್ಲಿರುವ ಕರ್ನಾಟಕ ಸಂಘದಲ್ಲಿ ಬೆಳ್ಳಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ವರೆಗೆ ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗಿನ ಕಾರ್ಯಕ್ರಮಗಳು
ಬೆಳಗ್ಗೆ 6 ಗಂಟೆಗೆ ಬಲರಾಮ್ ಎಂಬ ಆಸ್ಟ್ರೇಲಿಯಾ ಅಭಿಮಾನಿಯಿಂದ ವಿಷ್ಣು ಅವರ ಭಾವಚಿತ್ರಕ್ಕೆ ಪೂಜೆ, ನಂತರ 7 ಗಂಟೆಗೆ ಡಾ.ವಿಷ್ಣು ಅವರ ಭಾವಚಿತ್ರದ ಮೆರವಣಿಗೆ, 9 ಗಂಟೆಗೆ ಮನು ಬಳಿಗಾರ್ ಅವರಿಂದ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರದ ಪ್ರತಿಮೆ ಅನಾವರಣ, ಮತ್ತು 9.30ಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಅವರಿಂದ ವಿಷ್ಣುವರ್ಧನ್ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನೆ ಸಮಾರಂಭ
ಬೆಳಗ್ಗೆ 10 ಗಂಟೆಗೆ ಖ್ಯಾತ ಸಾಹಿತಿ ಪುರುಷೋತ್ತಮ ಅವರಿಂದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಡಾ.ವಿ.ನಾಗೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದಾರೆ. ನಂತರ 'ಕರ್ನಾಟಕ ಸಾಂಸ್ಕೃತಿಕ ಲೋಕಕ್ಕೆ ಡಾ.ವಿಷ್ಣುವರ್ಧನ್ ಕೊಡುಗೆಗಳು' ಹಾಗೂ 'ನಿರ್ದೇಶಕರು ಕಂಡಂತೆ ಡಾ.ವಿಷ್ಣುವರ್ಧನ್' ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕರಾದ ದ್ವಾರಕೀಶ್, ಎಸ್.ನಾರಾಯಣ್, ಭಾರ್ಗವ ಸೇರಿದಂತೆ ಪ್ರಮುಖ ನಿರ್ದೇಶಕರು ಮುಖ್ಯ ಅತಿಥಿಯಾಗಿದ್ದಾರೆ.

'ಡಾ.ವಿಷ್ಣುವರ್ಧನ್ ರಾಷ್ಟೀಯ ಪ್ರಶಸ್ತಿ'
ಸಂಜೆ 3.30ಕ್ಕೆ 'ಡಾ.ವಿಷ್ಣುವರ್ಧನ್ ರಾಷ್ಟೀಯ ಪ್ರಶಸ್ತಿ' ಕಾರ್ಯಕ್ರಮ ನಡೆಲಿದ್ದು, ಈ ಬಾರಿ ಹಿರಿಯ ನಟ ಶಿವರಾಮ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ವಹಿಸಲಿದ್ದಾರೆ.

ಕೊನೆಯ ಕಾರ್ಯಕ್ರಮ
ಡಾ.ವಿಷ್ಣುವರ್ಧನ್ ಅವರ ಚಿತ್ರಗೀತೆಗಳ ಮ್ಯೂಸಿಕಲ್ ನೈಟ್ ಮೂಲಕ 'ಡಾ.ವಿಷ್ಣುವರ್ಧನ ರಾಷ್ಟೀಯ ಉತ್ಸವ'ಕ್ಕೆ ತೆರೆಬೀಳಲಿದೆ. ಶ್ರೀ ಗುರುರಾಜ್, ಶಿವಮೊಗ್ಗ ಚೇತನ್ ಸೇರಿದಂತೆ ಕನ್ನಡದ ಗಾಯಕರು ವಿಷ್ಣು ಹಾಡುಗಳನ್ನು ಹಾಡಲಿದ್ದಾರೆ.

ಚಿತ್ರ ಪ್ರದರ್ಶನ
ಈ ಕಾರ್ಯಕ್ರಮದಲ್ಲಿ ವಿಷ್ಣು ಅವರ 'ನಾಗರಹಾವು' ಮತ್ತು 'ಮುತ್ತಿನಹಾರ' ಚಿತ್ರಗಳು ಪ್ರದರ್ಶನ ಆಗಲಿವೆ.

530ಕ್ಕೂ ಹೆಚ್ಚು ಅಭಿಮಾನಿಗಳು
ಈ ಅದ್ಧೂರಿ ಕಾರ್ಯಕ್ರಮದಲ್ಲಿ 530ಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗಲಿದ್ದು, ಎಲ್ಲರೂ ಕರ್ನಾಟಕದಿಂದ ದೆಹಲಿ ವಿಮಾನವೇರಲಿದ್ದಾರೆ.

ಡಾ.ವಿ.ನಾಗೇಂದ್ರ ಪ್ರಸಾದ್ ಹಾಡು
ಖ್ಯಾತ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಈ ಕಾರ್ಯಕ್ರಮಕ್ಕಾಗಿ 'ಸಿಂಹದ ಹೆಜ್ಜೆ..' ಎಂಬ ಹಾಡನ್ನು ರಚಿಸಿದ್ದಾರೆ.

ಚಿತ್ರರಂಗದ ಗಣ್ಯರು
ಅಂದಹಾಗೆ, 'ಡಾ.ವಿಷ್ಣುವರ್ಧನ ರಾಷ್ಟೀಯ ಉತ್ಸವ' ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಹಿರಿಯ ನಟ ಶಿವರಾಮ್, ಸಾ.ರಾ.ಗೋವಿಂದು, ರಾಜೇಂದ್ರಸಿಂಗ್ ಬಾಬು, ನಟ ಆದಿತ್ಯ, ಶ್ರೀನಗರ ಕಿಟ್ಟಿ, ಸಾಧುಕೋಕಿಲ, ಬಿ.ಸಿ.ಪಾಟೀಲ್, ನಟಿ ತಾರಾ, ರಾಗಿಣಿ, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


Click it and Unblock the Notifications











