ಹೀರೋಯಿಸಂ ತೇರೆಮೇಲೆ ತೋರಿಸೋದಲ್ಲ, ನಿಜವಾಗಲೂ ಹೀರೋ ಆಗ್ಬೇಕು
ಸಿನಿಮಾ ಚಿತ್ರೀಕರಣ ವೇಳೆ ನಡೆಯುವ ಅವಘಡಗಳ ಬಗ್ಗೆ ಪ್ರಮುಖ ನಟರು-ನಟಿಯರು ತಲೆಕೆಡಿಸಿಕೊಳ್ಳಲ್ಲ ಎಂಬ ಆಪಾದನೆ ಇದೆ. ಸೆಟ್ನಲ್ಲಿ ಯಾವುದಾದರೂ ಕಾರ್ಮಿಕರಿಗೆ, ಜೂನಿಯರ್ ಕಲಾವಿದರಿಗೆ ಪೆಟ್ಟಾಗುವುದು, ಗಂಭೀರ ಗಾಯವಾಗುವ ಘಟನೆಗಳು ನಡೆದರೂ ಹೀರೋಗಳು ಕೇರ್ ಮಾಡಲ್ಲ, ಅವರ ಪಾಡಿಗೆ ಶೂಟಿಂಗ್ ಮುಗಿಸಿ ಹೋಗ್ತಾರೆ ಎಂದು ಕಾರ್ಮಿಕರು, ಸಾಹಸ ಕಲಾವಿದರು, ಕಲಾವಿದರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆಗಳಿವೆ.
Recommended Video
ಇಂತಹ ಆರೋಪಗಳ ಮಧ್ಯೆ ನಟ ಶ್ರೀಮುರಳಿ ಸ್ವಲ್ಪ ವಿಭಿನ್ನವಾಗಿದ್ದಾರೆ. ತಮ್ಮ ಜೊತೆ ಕೆಲಸ ಮಾಡುವ ಕಾರ್ಮಿಕರು, ಸಣ್ಣ-ಪುಟ್ಟ ಕಲಾವಿದರಿಗೆ ಏನಾದರೂ ಕಷ್ಟ ಎದುರಾದಾಗ ಸಹಾಯ ಮಾಡಬೇಕು, ಜೊತೆಯಲ್ಲಿ ನಿಂತು ಧೈರ್ಯ ತುಂಬಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಶ್ರೀಮುರಳಿ ಅವರ ನಡೆಗೆ ಸಿನಿಮಾರಂಗದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
ನಡೆದಿದ್ದೇನು?
ಶ್ರೀಮುರಳಿ ನಟಿಸುತ್ತಿರುವ 'ಮದಗಜ' ಸಿನಿಮಾ ಚಿತ್ರೀಕರಣ ವೇಳೆ ಜೂನಿಯರ್ ಕಲಾವಿದರೊಬ್ಬರ ಕಾಲಿಗೆ ಪೆಟ್ಟಾಗಿದೆ. ಈ ವಿಷಯ ತಿಳಿದ ನಟ ಶ್ರೀಮುರಳಿ ಖುದ್ದು ಆ ಕಲಾವಿದ ಇದ್ದ ಸ್ಥಳಕ್ಕೆ ಧಾವಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮದಗಜ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಪುಟ್ಟಸ್ವಾಮಿ ಎಂಬ ಜೂನಿಯರ್ ಕಲಾವಿದ ಕಾಲಿಗೆ ಗಾಯವಾಗಿದೆ. ಕಾಲು ನೋವಿನಿಂದ ಅಲ್ಲೇ ಸೆಟ್ನಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಶ್ರೀಮುರಳಿ ಆ ಜೂನಿಯರ್ ಕಲಾವಿದನ ಬಳಿ ಹೋಗಿ, ಸ್ವತಃ ಅವರೇ ಕಾಲು ಮುಟ್ಟಿ ಗಾಯದ ತೀವ್ರತೆ ಪರೀಕ್ಷಿಸಿದ್ದಾರೆ. ನಂತರ ಅವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೋರಿಂಗ್ ಸ್ಟಾರ್ ನಡೆಗೆ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಮದಗಜ' ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಕೂಡ ಶ್ರೀಮುರಳಿ ಅವರ ಮಾನವೀಯತೆ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸಹಜವಾಗಿ ಶೂಟಿಂಗ್ ಸ್ಥಳದಲ್ಲಿ ಜೂನಿಯರ್ ಕಲಾವಿದರು, ಸಾಹಸ ಕಲಾವಿದರಿಗೆ ಯಾರಿಗಾದರೂ ಗಾಯವಾದರೆ ಹೀರೋಗಳು ಅಥವಾ ಪ್ರಮುಖ ನಟರು ಅಲ್ಲಿಂದ ಸೈಲೆಂಟ್ ಆಗಿ ಹೋಗಿ ಬಿಡ್ತಾರೆ. ನಿರ್ದೇಶಕ ಅಥವಾ ನಿರ್ಮಾಪಕರು ನೋಡಿಕೊಳ್ತಾರೆ ಬಿಡಿ ಎಂದು ನುಣುಚಿಕೊಳ್ಳುತ್ತಾರೆ. ಇಂತಹದೊಂದು ಮನೋಭಾವನೆ ಎಲ್ಲಾ ಚಿತ್ರರಂಗದಲ್ಲಿದೆ ಎಂದು ಅನೇಕರು ಅಸಮಾಧಾನಗೊಂಡಿರುವವರು ಇದ್ದಾರೆ.

ಇತ್ತೀಚಿಗಷ್ಟೆ 'ಲವ್ ಯೂ ರಚ್ಚು' ಸಿನಿಮಾ ಚಿತ್ರೀಕರಣ ವೇಳೆ ನಡೆದ ದುರಂತದ ವೇಳೆ ಗಾಯಗೊಂಡ ರಂಜಿತ್, ನಟ ಅಜಯ್ ರಾವ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಜಯ್ ರಾವ್ ಸೆಟ್ನಲ್ಲಿದ್ದರೂ, ಘಟನೆ ನಡೆದ ಮೇಲೂ ಅವರು ಬಂದು ನಮ್ಮನ್ನು ವಿಚಾರಿಸಿಲ್ಲ ಎಂದು ವಿಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಅಜಯ್ ರಾವ್ ಸ್ಪಷ್ಟನೆ ನೀಡಿದ್ದರು.
''ಹೀರೋಯಿಸಂ ಅಂದ್ರೆ ತೋರ್ಪಡಿಸುವುದು ಅಲ್ಲ. ಕೊನೆಯವರೆಗೂ ಅವರ ಜೊತೆ ನಿಲ್ಲಬೇಕು. ಲವ್ ಯೂ ರಚ್ಚು ದುರಂತದಲ್ಲಿ ಮೃತಪಟ್ಟ ವಿವೇಕ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾನು ಚಿತ್ರೀಕರಣಕ್ಕೆ ಬರಲ್ಲ'' ಎಂದಿದ್ದರು. ಇನ್ನು ಘಟನೆ ನಡೆದ ಸಂದರ್ಭದಲ್ಲಿ ನಾನು ಅಲ್ಲೇ ಇದ್ದಿದ್ದು ನಿಜ. ಆದರೆ, ದೂರದಲ್ಲಿ ಕುಳಿತಿದ್ದೆ. ಇಂತಹ ಘಟನೆಗಳು ಆದಾಗ ಸಹಜವಾಗಿ ನಿರ್ದೇಶಕ ಅಥವಾ ಸಾಹಸ ನಿರ್ದೇಶಕ ಸ್ಥಳದಲ್ಲಿರುವುದರಿಂದ ತಕ್ಷಣ ಅವರು ಪ್ರತಿಕ್ರಿಯಿಸುತ್ತಾರೆ. ಸುಖಾಸುಮ್ಮನೆ ನಾವು ಹೋಗಿ ಹೀರೋಯಿಸಂ ತೋರಿಸುವುದಲ್ಲ. ದುರಂತ ನಡೆದ ಮೇಲೂ ನಾನು ಓಡಿ ಹೋಗಿಲ್ಲ. ಅಲ್ಲಿಯೇ ಇದ್ದು, ಸ್ಥಿತಿಗತಿಗಳನ್ನು ಪರಿಶೀಲಿಸಿದೆ. ಆಸ್ಪತ್ರೆ ಬಳಿ ಹೋದೆ, ನಾನು ಎಲ್ಲ ರೀತಿಯಲ್ಲೂ ಸ್ಪಂದಿಸಿದ್ದೇನೆ'' ಎಂದಿದ್ದರು.
ಶ್ರೀಮುರಳಿ ನಟನೆಯ 'ಮದಗಜ' ಚಿತ್ರಕ್ಕೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಜಗಪತಿ ಬಾಬು ಪ್ರಮುಖ ಖಳನಟನಾಗಿ ಆಯ್ಕೆಯಾಗಿದ್ದಾರೆ.


Click it and Unblock the Notifications











