ರಾಜಮೌಳಿ ನೋಡಿದ ಮೊದಲ ಕನ್ನಡ ಸಿನಿಮಾ

ಎಸ್ ಎಸ್ ರಾಜಮೌಳಿಯವರು ಹುಟ್ಟಿ, ಬೆಳೆದದ್ದೆಲ್ಲಾ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ 'ಅಮರೇಶ್ವರ ಕ್ಯಾಂಪ್' ಎಂಬ ಊರಿನಲ್ಲಿ. ನಂತರ ಅವರ ಫ್ಯಾಮಿಲಿ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದಾರೆ. ಹೀಗಾಗಿ ಆಂಧ್ರದ ನಂಟು ರಾಜಮೌಳಿಯವರಿಗಿದೆ. ತೆಲುಗು ಭಾಷೆ ಮಾತನಾಡುತ್ತಾರೆ.
ತೆಲುಗು ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಟಿವಿ ಧಾರಾವಾಹಿಗಳ ನಿರ್ದೇಶನದ ಮೂಲಕ ರಾಜಮೌಳಿಯವರು ತಮ್ಮ ನಿರ್ದೇಶನದ ವೃತ್ತಿ ಪ್ರಾರಂಭಿಸಿದವರು. ನಂತರ 2001 ರಲ್ಲಿ 'ಸ್ಟೂಡೆಂಟ್ ನಂ 1' ತೆಲುಗು ಚಿತ್ರದ ಮೂಲಕ ಸಿನಿಮಾ ನಿರ್ದೇಶಕ ಎನಿಸಿಕೊಂಡವರು. ನಂತರ 9 ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಸೆಂಟ್ ಪರ್ಸೆಂಟ್ ಸಕ್ಸಸ್ ಕೊಡುವ ನಿರ್ದೇಶಕ ಎನಿಸಿಕೊಂಡವರು.
ಇಂಥ ರಾಜಮೌಳಿಯವರು ಮೊದಲು ನೋಡಿದ ಚಿತ್ರ ಉಪೇಂದ್ರ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಓಂ'. ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ ವಿಶಿಷ್ಟ ನಿರೂಪಣೆಯಿಂದ ಭಾರೀ ಗಮನ ಸೆಳೆದು ದೊಡ್ಡ ಮಟ್ಟಿಗಿನ ಯಶಸ್ಸು ದಾಖಲಿಸಿದ ಈ ಚಿತ್ರವೇ ರಾಜಮೌಳಿಯವರು ನೋಡಿದ ಮೊಟ್ಟಮೊದಲ ಕನ್ನಡ ಸಿನಿಮಾವಂತೆ. ಹೀಗೆಂದು ಸ್ವತಃ ರಾಜಮೌಳಿಯವರೇ ಹೇಳಿದ್ದಾರೆ.
ಈಗಿನ ತಮ್ಮ 'ಈಗ' ಚಿತ್ರದ ಭಾರೀ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ "ರಾಯಚೂರಿನಲ್ಲಿ ಹುಟ್ಟಿ ಬೆಳೆದ ನನಗೆ ಕನ್ನಡ ಸಿನಿಮಾಗಳನ್ನು ನೋಡಬೇಕೆಂದರೂ ಸಾಧ್ಯವಾಗುತ್ತಿರಲಿಲ್ಲ' ಕಾರಣ, ನಾನಿದ್ದ ವೇಳೆಯಲ್ಲಿ ರಾಯಚೂರಿನ ನಮ್ಮೂರಿನಲ್ಲಿ ಚಿತ್ರಮಂದಿರಗಳೇ ಇರಲಿಲ್ಲ. ಹೀಗಾಗಿ 1995 ರಲ್ಲಿ ಉಪೇಂದ್ರ ನಿರ್ದೇಶನದ 'ಓಂ' ಚಿತ್ರವನ್ನು ನೋಡಿದ್ದೇ ಮೊದಲು. ನನಗೆ ಓಂ ಚಿತ್ರದ ನಿರೂಪಣೆ ತುಂಬಾ ಇಷ್ಟವಾಗಿತ್ತು" ಎಂದಿದ್ದಾರೆ.
ಉಪೇಂದ್ರ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪ್ರೇಮಾ ಜೋಡಿಯ ಈ ಚಿತ್ರ ಭಾರೀ ದಾಖಲೆಯನ್ನೇ ನಿರ್ಮಿಸಿದೆ. ಈಗಲೂ ಆಗಾಗ ಹೊಸ ಪ್ರಿಂಟ್ ಪಡೆದುಕೊಂಡು ಸಾಕಷ್ಟು ಚಿತ್ರಮಂದಿರಗಳಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಾ ಥಿಯೇಟರ್ ಮಾಲೀಕರ ಅನ್ನಕ್ಕೆ ಆಧಾರವಾಗುತ್ತಿದೆ ಓಂ ಚಿತ್ರ. ಓಂ ಬಿಡುಗಡೆಯಾದಾಗ ರಾಜಮೌಳಿ ನಿರ್ದೇಶಕರಾಗಿರಲಿಲ್ಲ. ಆಂಧ್ರದಲ್ಲಿ ವಾಸಿಸುತ್ತಾ ಬಣ್ಣದ ಲೋಕಕ್ಕೆ ಧುಮುಕಿದ್ದರಷ್ಟೇ. (ಒನ್ ಇಂಡಿಯಾ ಕನ್ನಡ)


Click it and Unblock the Notifications











