ಕಥೆ ಬರೆದು ಕಳುಹಿಸಿ: ಸಿನಿಮಾನೂ ಆಗುತ್ತೆ, ಒಂದು ಲಕ್ಷನೂ ಸಿಗುತ್ತೆ
ಸಿನಿಮಾರಂಗಕ್ಕೆ ಬರಬೇಕು, ನನ್ನ ಕಥೆಯೂ ಸಿನಿಮಾ ಆಗ್ಬೇಕು, ಬಣ್ಣದ ಲೋಕದಲ್ಲಿ ನಾನು ಸ್ಟಾರ್ ಆಗಿ ಮೆರಯಬೇಕು ಎಂಬ ದೊಡ್ಡ ಕನಸಿಟ್ಟುಕೊಂಡವರಿಗೆ ಒಂದೊಳ್ಳೆ ಅವಕಾಶ ಹುಡುಕಿಕೊಂಡು ಬಂದಿದೆ. ಅದೇ 'ನಿಮ್ಮ ಕಥೆ ಕೇಳುವುದಕ್ಕೆ ನಾವು ಇದ್ದೀವಿ' ಸ್ಪರ್ಧೆ.
ನಿರ್ದೇಶಕ ಎಂಜಿ ಶ್ರೀನಿವಾಸ್ ಅವರ ಕನಸಿನ ಕೂಸು ಇದಾಗಿದ್ದು, ಪ್ರಕಾಶನ ಸಂಸ್ಥೆ ಜೊತೆ ಸೇರಿಕೊಂಡು ಕಥಾ ಸ್ಪರ್ಧೆ ನಡೆಸುತ್ತಿದ್ದಾರೆ. ಕಥೆ ಬರೆಯುವ ಆಸಕ್ತರು ಮತ್ತು ಸಿನಿಮಾ ಮಾಡಬೇಕು ಅಂತ ಕನಸಿಟ್ಟುಕೊಂಡವರು ಈ ಕಥಾ ಸ್ಪರ್ಧೆಯಲ್ಲಿ ಭಾಗಿಯಾಗುವ ಮೂಲಕ ಒಳ್ಳೆಯ ಅವಕಾಶವನ್ನ ತಮ್ಮದಾಗಿಸಿಕೊಳ್ಳಬಹುದು.
ನೆನಪಿರಲಿ 2000 ಪದಗಳ ಒಳಗಿನ ಕತೆ ಬರೆದು ಕಳುಹಿಸಬೇಕು. ಆ ಕತೆ ಸಿನಿಮಾ ಆಗುತ್ತದೆ ಎನ್ನುವುದು ಮನಸ್ಸಿನಲ್ಲಿರಲಿ. ಆಯ್ಕೆಯಾದ ಒಂದು ಕತೆ ತಕ್ಷಣವೇ ಸಿನಿಮಾ ಆಗಲಿದೆ.

ಒಬ್ಬರಿಗೆ ಒಂದೇ ಕಥೆಯನ್ನು ಕಳುಹಿಸುವ ಅವಕಾಶ ಇರುವುದು. ಒಟ್ಟು 20 ಕಥೆಗಳನ್ನು ಆಯ್ಕೆ ಮಾಡಲಾಗುತ್ತೆ. ಈ 20 ಕಥೆಯಲ್ಲಿ ಒಂದು ಕಥೆ ಸಿನಿಮಾ ಆಗಿ ತೆರೆಮೇಲೆ ಬರಲಿದೆ. ಜೊತೆಗೆ ಒಂದು ಲಕ್ಷ ಬಹುಮಾನ ಕೂಡ ಸಿಗಲಿದೆ. ಆದ್ರೆ ಕಥೆಯನ್ನು ಇದೇ ತಿಂಗಳು 30 ಒಳಗೆ ಕಳುಹಿಸಬೇಕು.
ಇನ್ನು ಆಯ್ಕೆಯಾದ 20 ಕಥೆಗಳ ಕತೆಗಾರರಿಗೆ ಒಂದು ದಿನದ ಚಿತ್ರಕಥಾ ಶಿಬಿರವನ್ನು ನಡೆಸಲಾಗುವುದು. 'ಯೂ ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಜೊತೆಗೆ ಈ 20 ಕಥೆಗಳು ಪುಸ್ತಕ ರೂಪದಲ್ಲಿ ಹೊರಬರಲಿವೆ. ಆ ಕತೆಗಳ ಹಕ್ಕು ಆಯಾ ಲೇಖಕರದ್ದಾಗಿರುತ್ತೆ. ಪುಸ್ತಕ ಮಾಡುವ ಹಕ್ಕು ಜಮೀಲ್ ಸಾವಣ್ಣ ವಹಿಕೊಂಡಿದ್ದಾರೆ.

ನಿಮ್ಮ ಕಥೆಯನ್ನು ಈ ಇಮೇಲ್ ಗೆ ಕಳುಹಿಸಿ : [email protected]
ಇನ್ನು ವಿಶೇಷ ಅಂದ್ರೆ, ಕತೆಗಳ ತೀರ್ಪುಗಾರರಾಗಿ ಸಿನಿಮಾ ಶೇರ್ ಹರೀಶ್ ಮಲ್ಯ, ರಾಮಾರಾಮಾರೇ ನಿರ್ದೇಶಕ ಸತ್ಯಪ್ರಕಾಶ್, ಬೀರ್ ಬಲ್ ಶ್ರೀನಿ, ವಿಮರ್ಶಕಿ ಶ್ರುತಿ ಪ್ರಕಾಶ್ ಮತ್ತು ಪತ್ರಕರ್ತ ಜೋಗಿ ಇರಲಿದ್ದಾರೆ.


Click it and Unblock the Notifications











