ಅಪ್ಪು ಅಭಿಮಾನಿ ರಾಯಚೂರು ಸಾದಿಕ್ ಅನ್ನದಾನ ನೋಡಿ ಪುನೀತ್ ಏನಂದಿದ್ದರು?
ಬೆಂಗಳೂರು, ನ. 02: ದಿವಂಗತ ಪುನೀತ್ ಎಂದರೆ ರಾಯಚೂರಿನ ಸಾದಿಕ್ ಗೆ ಹುಚ್ಚು ಅಭಿಮಾನ. ಅಪ್ಪು ಯೂತ್ ಬ್ರಿಗೇಡ್ ಹುಟ್ಟು ಹಾಕಿದ ಸಾದಿಕ್, ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರಾರಂಭಿಸಿದ ಅನ್ನದಾನ ಕಾರ್ಯ ಈಗಲೂ ಮುಂದುವರೆದಿದೆ. ಅಪ್ಪು ಹುಟ್ಟುಹಬ್ಬದ ಅಂಗವಾಗಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಆರಂಭಿಸಿದ ಅನ್ನದಾನ ಕಾರ್ಯಕ್ರಮ ನಿರಂತರ 155 ದಿನ ಮುಂದುವರೆಸಿದ್ದ. ಅಪ್ಪು ಯೂತ್ ಬ್ರಿಗೇಡ್ ಸದಸ್ಯರ ಹುಟ್ಟುಹಬ್ಬದ ದಿನವೂ ಅಪ್ಪು ಹೆಸರಿನಲ್ಲಿ ಅನ್ನದಾನ ನಡೆಯುತ್ತಿದೆ. ಇದನ್ನು ತಿಳಿದುಕೊಂಡಿದ್ದ ಅಪ್ಪು ರಾಯಚೂರಿನ ಸಾಧಿಕ್ ಗೆ ಪೋನ್ ಮಾಡಿ ಏನಂದಿದ್ದರು ಗೊತ್ತಾ ? ಇಲ್ಲಿದೆ ನೋಡಿ ಸ್ಟೋರಿ.
ರಾಯಚೂರಿನ ಸಾದಿಕ್, ಉದ್ಯಮಿಯಲ್ಲ, ಶ್ರೀಮಂತನೂ ಅಲ್ಲ. ಬದುಕಿಗಾಗಿ ಕೇಬಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ದುಡಿಮೆಗಾಗಿ ಯಾರಾದರೂ ಲೇಔಟ್ ಮಾಡಿದರೆ ಅದರಲ್ಲಿ ಹತ್ತು ನಿವೇಶನವನ್ನು ತನಗೆ ಬೇಕಾದವರಿಗೆ ಮಾರಾಟ ಮಾಡಿಸುತ್ತಾನೆ. ಬಂದ ಹಣದಲ್ಲಿ ಅಪ್ಪು ಹೆಸರಿನಲ್ಲಿ ಬಡವರಿಗೆ, ನಿರ್ಗತಿಕರಿಗೆ ಊಟ ಹಾಕಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಅಂದಹಾಗೆ ಸಾದಿಕ್ ರಾಯಚೂರಿನಲ್ಲಿ ಅಪ್ಪು ಯೂತ್ ಬ್ರಿಗೇಡ್ ಹುಟ್ಟು ಹಾಕಿದ್ದಾನೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅಪ್ಪು ಹುಟ್ಟು ಹಬ್ಬದ ಅಂಗವಾಗಿ ಮಾರ್ಚ್ 17, 2020 ರಂದು ಆರಂಭಿಸಿದ ಅನ್ನದಾನ ಈಗಲೂ ಮುಂದುವರೆದಿದೆ. ಆದರೆ ಒಂದು ದಿನ ಬಿಟ್ಟು ಇನ್ನೊಂದು ದಿನ ಅನ್ನದಾನ ಕಾರ್ಯಕ್ರಮ ಮೂಲಕ ರಾಯಚೂರಿನಲ್ಲಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಅನ್ನ ಹಾಕುವ ಕಾಯಕವನ್ನು ಸಾದಿಕ್ ಮುಂದುವರೆಸಿದ್ದಾನೆ.

"ಅಪ್ಪು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ಸರ್. ರಿಯಲ್ ಹೀರೋ. ಅವರು ಸಿನಿಮಾದಲ್ಲಿ ಒಂದು ಮಾತು ಹೇಳಿದ್ದರು. ಉಸಿರು ಇರುವವರೆಗೂ ಹೆಸರು ಮಾಡು ಅಂತ. ಅದೇ ರೀತಿ ಅವರು ನಡೆದುಕೊಂಡಿದ್ದಾರೆ. ಅವರ ಸಿನಿಮಾಗಳು ಎಂದರೆ ನನಗೆ ಹುಚ್ಚು. ಹೀಗಾಗಿ ಅಪ್ಪು ಹೆಸರಿನಲ್ಲಿ ಕಳೆದ ಲಾಕ್ ಡೌನ್ ಸಮಯದಲ್ಲಿ ಆರಂಭಿಸಿದ ಅನ್ನದಾನ ಸೇವೆ ನಿರಂತರವಾಗಿ 155 ದಿನ ಮುಂದುವರೆಸಿದ್ದೇನೆ. ಈಗಲೂ ಅಪ್ಪು ಯೂತ್ ಬ್ರಿಗೇಡ್ ಸದಸ್ಯರ ಹುಟ್ಟುಹಬ್ಬ ಆಚರಿಸಿಕೊಂಡರೆ, ಅವರು ಎಲ್ಲೋ ದುಂದು ವೆಚ್ಚ ಮಾಡುವ ಬದಲಿಗೆ ಅಪ್ಪು ಹೆಸರಿನಲ್ಲಿ ಹಸಿದವರಿಗೆ ಅನ್ನ ಕೊಡುವ ಕೆಲಸ ಮಾಡುತ್ತಿದ್ದೇನೆ'' ಎಂದು ಸಾದಿಕ್ ತನ್ನ ಮನದಾಳದ ಮಾತು ಹಂಚಿಕೊಂಡರು.

"ನಾನು ಅನ್ನದಾನ ಸೇವೆ ಮಾಡುವುದು ಅಪ್ಪುಗೆ ಗೊತ್ತಾಗಿತ್ತು. ಒಂದು ದಿನ ಕರೆ ಮಾಡಿದ್ದರು. ಸಾದಿಕ್ ನೀನು ಅನ್ನದಾನ ಮಾಡಿ, ನನ್ನ ಹೆಸರು ಯಾಕೆ ಹಾಕುತ್ತಿದ್ದೀಯಾ ಎಂದು ಕೇಳಿದ್ದರು. ಅಣ್ಣ ನೀವು ಎಂದರೆ ನನ್ನ ಉಸಿರು. ನಿಮ್ಮ ಅಭಿಮಾನಿಯಾಗಿ ನಾನು ನನ್ನ ಕೈಯಲ್ಲಾದ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದೆ. ಖುಷಿಪಟ್ಟಿದ್ದರು. ರಾಯಚೂರಿಗೆ ಬರುವುದಾಗಿ ಹೇಳಿದ್ದರು. ಅಪ್ಪು ಒಮ್ಮೆ ಮಂತ್ರಾಲಯಕ್ಕೆ ಹೋಗಿದ್ದಾಗ, ನಾನು ಹೋಗಿದ್ದೆ. ಲಾಕ್ ಡೌನ್ ಸಮಯದಲ್ಲಿ ಅನೇಕರು ಊಟವಿಲ್ಲದೇ ಹಸಿವಿನಿಂದ ಕೂತಿದ್ದರು. ರಾಯಚೂರಿನಿಂದ ಅಲ್ಲಿಗೆ ಹೋಗಿ ಅಪ್ಪು ಹೆಸರಿನಲ್ಲಿ 300 ಮಂದಿಗೆ ಅನ್ನ ಕೊಟ್ಟಿದ್ದೆವು'' ಎಂದು ಸಾದಿಕ್ ನೆನಪಿಸಿಕೊಂಡರು.

ಅಪ್ಪುಗಾಗಿ ಜೀವದ ಆಸೆ ಬಿಟ್ಟು ಲಾಕ್ ಡೌನ್ ಸಮಯದಲ್ಲಿ ಅಪ್ಪು ಬ್ರಿಗೇಡ್ ಕೆಲಸ ಮಾಡಿತು. ಎರಡನೇ ಅಲೆ ಬಂದಾಗ, ರಂಜಾನ್- ಬಸವ ಜಯಂತಿ ಒಂದೇ ದಿನ ಬಂತು. ಕೋವಿಡ್ ಪಾಸಿಟಿವ್ ಬಂತು. ಆಗಲೂ ಫುಟ್ ಪಾತ್ ಮೇಲೆ ಮಲಗಿದ್ದೆ. ಕೆಲವೊಮ್ಮೆ ಅಕ್ಕಿಯೂ ಇರುತ್ತಿರಲಿಲ್ಲ. ರಾಯಚೂರಿನಲ್ಲಿ ಯಾವ ಗಣ್ಯ ವ್ಯಕ್ತಿಗಳು ಬಡವರಿಗೆ ನೆರವಾಗಲಿಲ್ಲ. ಲಾಕ್ ಡೌನ್ ಸಮಯದಲ್ಲಿ ಅಪ್ಪು ಬ್ರಿಗೇಡ್ , ಕೂಲಿ ಕಾರ್ಮಿಕರಿಗೆ, ಬಡವರಿಗೆ, ಭಿಕ್ಷುಕರಿಗೆ, ಲಾರಿ ಚಾಲಕರಿಗೆ ಅನ್ನ ಹಾಕುವ ಕಾಯಕ ಮಾಡಿತು. ಎಲ್ಲವೂ ಪುನೀತ್ ಅಣ್ಣನಿಗಾಗಿ. ಆದರೆ ಅವರೇ ಇಲ್ಲದಿರುವುದು ಎದೆ ಒಡೆದುಹೋದಂತಾಗಿದೆ. ಅಪ್ಪು ಮಾಡ್ತಿಡುತ್ತಿದ್ದ ಸೇವೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಅನ್ನುವುದಕ್ಕಿಂತ ಅಪ್ಪು ಅಭಿಮಾನಿಯಾಗಿ ಸಣ್ಣ ಸೇವೆಯನ್ನು ನನ್ನ ಉಸಿರು ಇರವವರೆಗೂ ಮಾಡುತ್ತೇನೆ'' ಎನ್ನುತ್ತಾರೆ ರಾಯಚೂರಿನ ಸಾದಿಕ್.


Click it and Unblock the Notifications











