ಇಬ್ಬರ ನಡುವಿನ ಕಿತ್ತಾಟದಲ್ಲಿ 'ರನ್ನ' ಚಿತ್ರಕ್ಕೆ ಬಿತ್ತು ಬ್ರೇಕ್ !
ಇಬ್ಬರ ನಡುವಿನ ಕಿತ್ತಾಟದಿಂದ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಕಲೆಕ್ಷನಿಗೆ ಸುಖಾಸುಮ್ಮನೆ ಹೊಡೆತ ಬೀಳುತ್ತಿರುವುದು ವಿಷಾದನೀಯ.
ಬೆಂಗಳೂರು, ಕೋಲಾರ (ಬಿಕೆಟಿ) ಪ್ರಾಂತ್ಯದ ಕೆಲವೊಂದು ಚಿತ್ರಮಂದಿರದಲ್ಲಿ ರನ್ನ ಶೋಗೆ ಬ್ರೇಕ್ ಬಿದ್ದಿದೆ. ಈ ಸಮಸ್ಯೆಗೆ ಕಾರಣ ನಿರ್ಮಾಪಕರು ಮತ್ತು ಹಂಚಿಕೆದಾರರ ನಡುವಿನ ಮನಸ್ತಾಪ.
ಬೆಂಗಳೂರು, ಕೋಲಾರ ಮತ್ತು ಚನ್ನಪಟ್ಟಣ ಸೇರಿದಂತೆ, ಸುಮಾರು 25 ಚಿತ್ರಮಂದಿರದಲ್ಲಿ ರನ್ನ ಚಿತ್ರವನ್ನು ಡೌನ್ ಲೋಡ್ ಮಾಡಲಾಗದೇ, ಚಿತ್ರಮಂದಿರದ ಮಾಲೀಕರು ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರಿಗೆ ದುಡ್ಡು ರಿಫಂಡ್ ಮಾಡಿದ ಘಟನೆಯೂ ನಡೆದಿದೆ. (ವಿಮರ್ಶಕರು ಕಂಡಂತೆ ರನ್ನ ಚಿತ್ರ)

ಭರ್ಜರಿನ ಪ್ರದರ್ಶನ ಕಾಣುತ್ತಿರುವ ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಮತ್ತು ಹಂಚಿಕೆದಾರ ಗೋಕುಲ್ ಫಿಲಂಸಿನ ಬಲರಾಮ್ ನಡುವೆ ಆರ್ಥಿಕ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾಗಿರುವುದರಿಂದ, ಕೆಲವೊಂದು ಚಿತ್ರಮಂದಿರದಲ್ಲಿ ರನ್ನ ಪ್ರದರ್ಶನ ರದ್ದಾಗಿದೆ.
ಹಂಚಿಕೆದಾರರಿಗೆ ಚಿತ್ರ ಡೌನ್ ಲೋಡ್ ಮಾಡಲು ಲೈಸೆನ್ಸ್ ಸಿಗದೇ ಇರುವುದರಿಂದ ಚಿತ್ರ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ ಎಂದು ಕೆಲವು ಚಿತ್ರಮಂದಿರದ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕರು ಮತ್ತು ಹಂಚಿಕೆದಾರರು ತಾವೇ ಚಿತ್ರ ಬಿಡುಗಡೆ ಮಾಡುತ್ತೇವೆಂದು ಹಠ ಹಿಡಿದಿರುವುದು ಈ ಸಮಸ್ಯೆ ಉಲ್ಬಣವಾಗಲು ಕಾರಣ.
ಆದಾಗ್ಯೂ, ತೊಂದರೆ ಅನುಭವಿಸುತ್ತಿರುವ ಕೆಲವೊಂದು ಚಿತ್ರಮಂದಿರಗಳಲ್ಲಿ ರನ್ನ ಪ್ರದರ್ಶನ ಮತ್ತೆ ಆರಂಭವಾಗಿದೆ. (ಮಾಹಿತಿ ಕೃಪೆ: ಚಿತ್ರಲೋಕ)


Click it and Unblock the Notifications











