ಮೂರು ರಾಜ್ಯಗಳಲ್ಲಿ ಸುದೀಪ್ ಈಗ ಅರ್ಧ ಸೆಂಚುರಿ
ಕಿಚ್ಚ ಸುದೀಪ್ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿದ ಚಿತ್ರ 'ಈಗ'. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅರ್ಧ ಶತಕ ಸಿಡಿಸಿ ಮುನ್ನುಗುತ್ತಿದೆ. ತಮಿಳಿನಲ್ಲಿ ಈ ಚಿತ್ರಕ್ಕೆ 'ನಾನ್ ಈ' ಎಂದು ಹೆಸರಿಡಲಾಗಿತ್ತು.
ಬಾಕ್ಸಾಫೀಸಲ್ಲಿ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರ ತಮಿಳುನಾಡಿನಲ್ಲಿ ಭರ್ಜರಿ ರು.25 ಕೋಟಿ ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಅತ್ಯಧಿಕ ವಸೂಲಿ ಮಾಡಿದ ಚಿತ್ರವಾಗಿ 'ನಾನ್' ಈ ಹೊರಹೊಮ್ಮಿದೆ.
ಎಂ ಎಂ ಕೀರವಾಣಿ ಸಂಗೀತ ಸಂಯೋಜನೆಯ ಈ ಚಿತ್ರವನ್ನು ಸಾಯಿ ಕೊರ್ರಪತಿ ನಿರ್ಮಿಸಿದ್ದಾರೆ. ಜುಲೈ 6ರಂದು ಬಿಡುಗಡೆಯಾದ ಈ ಚಿತ್ರ ಊಹೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಗಳಲ್ಲಿ ಚಿತ್ರ ಎತ್ತಂಗಡಿಯಾಗಿದ್ದರೂ ಮಲ್ಟಿಫ್ಲೆಕ್ಸ್ ಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.
ಕೇವಲ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಷ್ಟೇ ಅಲ್ಲದೆ ಕರ್ನಾಟಕದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಸುರೇಶ್ ಮೂವೀಸ್ ಫಿಲಂ ಡಿಸ್ಟ್ರಿಬ್ಯೂಟರ್ಸ್ 'ಈಗ' ಚಿತ್ರದ ಕರ್ನಾಟಕ ವಿತರಣೆ ಹಕ್ಕುಗಳನ್ನು ಪಡೆದಿತ್ತು.
ಎರಡು ವರ್ಷಗಳಷ್ಟು ಕಾಲ ಶ್ರಮವಹಿಸಿ ತೆಗೆದ ರಾಜಮೌಳಿ ಕೃಷಿ 'ಈಗ' ಚಿತ್ರದ ಮೂಲಕ ಫಲಿಸಿದೆ. ರಾಜಮೌಳಿ ನಿರ್ದೇಶನ, ಗ್ರಾಫಿಕ್ಸ್ ಮಾಯಾಜಾಲ, ಸುದೀಪ್ ಕ್ರೂರ ಅಭಿನಯ, ಸಮಂತಾ ಗ್ಲಾಮರ್ ಈ ಚಿತ್ರದ ಪ್ರಮುಖ ಆಕರ್ಷಣೆ.
ಕರ್ನಾಟದಲ್ಲಿ ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ಬಿಡುಗಡೆಯಾಗಿತ್ತು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಇದುವರೆಗೂ ರು.125 ಕೋಟಿ ಕಲೆಕ್ಷನ್ಸ್ ಮಾಡಿದೆ ಎಂದರೆ ನಿಜಕ್ಕೂ ಅದ್ಭುತ ಫಸಲು ಎನ್ನಬೇಕು. (ಏಜೆನ್ಸೀಸ್)


Click it and Unblock the Notifications











