ಹಿಂದಿ ವಿವಾದ: ಅಜಯ್ ಟ್ವೀಟ್ಗೆ ಸರಿಯಾದ ತಿರುಗೇಟು ನೀಡಿದ ಸುದೀಪ್
'ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ' ಎಂಬ ಸುದೀಪ್ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿ ನಟ ಅಜಯ್ ದೇವಗನ್ ಮಾಡಿದ್ದ ಟ್ವೀಟ್ಗೆ ಸುದೀಪ್ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನಡೆದ ಉಪೇಂದ್ರ ನಟಿಸುತ್ತಿರುವ 'R' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದೀಪ್, ''ಕನ್ನಡದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನಬೇಡಿ, ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಬಾಲಿವುಡ್ನವರು ಹೇಳಬೇಕು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದು. ತೆಲುಗು, ತಮಿಳಿಗೆಲ್ಲ ಡಬ್ ಮಾಡಿ ಏನೇನೋ ಸಾಹಸ ಮಾಡುತ್ತಿದ್ದಾರೆ ಆದರೆ ಯಾವುದೂ ಸಹ ವರ್ಕ್ ಆಗುತ್ತಿಲ್ಲ ಬಹಳ ಕಷ್ಟಪಡುತ್ತಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಹಿಂದಿ ಸಿನಿಮಾ, ನಮ್ಮದಲ್ಲ, ನಾವು ಕೇವಲ ಸಿನಿಮಾ ಮಾಡುತ್ತಿದ್ದೇವೆ, ಅದು ವಿಶ್ವದೆಲ್ಲೆಡೆ ರೀಚ್ ಆಗುತ್ತಿದೆ ಅಷ್ಟೆ'' ಎಂದಿದ್ದರು.
ಇದರಿಂದ ಅಸಮಾಧಾನಗೊಂಡ ಅಜಯ್ ದೇವಗನ್ ಸುದೀಪ್ ಮಾತು ವಿರೋಧಿಸಿ ಟ್ವೀಟ್ ಮಾಡಿದ್ದರು. ದಕ್ಷಿಣ ಭಾರತ ಚಿತ್ರರಂಗದವರು ತಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬಾರದು ಎಂಬ ತಾತ್ಪರ್ಯ ಅಜಯ್ರ ಟ್ವೀಟ್ನಿಂದ ಹೊಮ್ಮುತ್ತಿತ್ತು ಅಜಯ್ರ ಈ ಟ್ವೀಟ್ಗೆ ಸರಿಯಾದ ತಿರುಗೇಟನ್ನೇ ಸುದೀಪ್ ನೀಡಿದ್ದಾರೆ.
ಮೊದಲಿಗೆ ಟ್ವೀಟ್ ಮಾಡಿದ್ದ ಅಜಯ್, ''ಸಹೋದರ ಸುದೀಪ್, ನಿಮ್ಮ ಅನುಸಾರ ಹಿಂದಿ ರಾಷ್ಟ್ರಭಾಷೆ ಅಲ್ಲದೇ ಇದ್ದರೆ ನೀವೇಕೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ರಾಷ್ಟ್ರಭಾಷೆ ಆಗಿತ್ತು, ಮುಂದೆಯೂ ಆಗಿರುತ್ತದೆ. ಜನ ಗಣ ಮನ'' ಎಂದಿದ್ದರು.
ಅಜಯ್ ದೇವಗನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ''ಹಲೋ ಅಜಯ್ ದೇವಗನ್ ಸರ್, ನಾನು ಆ ಮಾತುಗಳನ್ನು ಹೇಳಿದ ಸನ್ನಿವೇಶ, ಅರ್ಥ ಬೇರೆ. ಆದರೆ ನನ್ನ ಮಾತುಗಳು ಬೇರೆಯದೇ ಅರ್ಥ ಪಡೆದುಕೊಂಡು ನಿಮ್ಮನ್ನು ತಲುಪಿದಂತಿದೆ. ನಾನು ನಿಮ್ಮನ್ನು ಖುದ್ದಾಗಿ ಭೇಟಿಯಾದಾಗ ಆ ಬಗ್ಗೆ ವಿವರಿಸಬಹುದೇನೋ. ನಾನು ಆ ಮಾತುಗಳನ್ನು ಯಾರನ್ನೋ ನೋಯಿಸಲು, ಪ್ರಚೋದಿಸಲು ಅಥವಾ ಯಾವುದೇ ಚರ್ಚೆಯನ್ನು ಪ್ರಾರಂಭಿಸಲು ಆಡಿಲ್ಲ. ಅಂಥಹಾ ಕಾರ್ಯವನ್ನು ನಾನೇಕೆ ಮಾಡುತ್ತೇನೆ'' ಎಂದು ಸ್ಪಷ್ಟನೆ ನೀಡಿದ್ದಾರೆ ಸುದೀಪ್.

ಭಾರತದ ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ: ಸುದೀಪ್
ಮತ್ತೊಂದು ಟ್ವೀಟ್ನಲ್ಲಿ ''ನಾನು ಭಾರತದ ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ ಸರ್, ನಾನು ಆ ಮಾತನ್ನು ಭಿನ್ನವಾದ ಅರ್ಥದಲ್ಲಿ, ಸನ್ನಿವೇಶದಲ್ಲಿ ಹೇಳಿದ್ದೇನೆ ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಮುಗಿಸಿಬಿಡೋಣ. ನಿಮ್ಮ ಬಗ್ಗೆ ಪ್ರೀತಿ, ಗೌರವ ಇದೆ'' ಎಂದಿದ್ದಾರೆ ಸುದೀಪ್. ಆದರೆ ಈ ಟ್ವೀಟ್ ಮಾಡಿನ ನಂತರ ಮತ್ತೊಂದು ಟ್ವೀಟ್ ಮಾಡಿರುವ ಸುದೀಪ್, ಅಜಯ್ ದೇವಗನ್ಗೆ ಸರಿಯಾದ ಟಾಂಗ್ ನೀಡಿದ್ದಾರೆ.

''ನಾನು ಕನ್ನಡದಲ್ಲಿ ಟ್ವೀಟ್ ಮಾಡಿದರೆ ನಿಮಗೆ ಅರ್ಥವಾದೀತೆ?''
''ಸರ್ ಅಜಯ್ ದೇವಗನ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಏಕೆಂದರೆ ನಾವೆಲ್ಲ ಹಿಂದಿ ಭಾಷೆಯನ್ನು ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ. ಆದರೆ ತಪ್ಪು ತಿಳಿಯಬೇಡಿ, ನಾನು ಈ ಟ್ವೀಟ್ಗಳನ್ನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ನಾವೂ ಸಹ ಭಾರತಕ್ಕೆ ಸೇರಿದವರೇ ಅಲ್ಲವೆ?'' ಎಂದು ಪ್ರಶ್ನೆ ಮಾಡಿದ್ದಾರೆ ನಟ ಸುದೀಪ್.

ತಪ್ಪಾಗಿ ಅರ್ಥೈಸಿಕೊಂಡೆ ಎಂದ ಅಜಯ್ ದೇವಗನ್
ಸುದೀಪ್ ಸರಣಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಅಜಯ್ ದೇವಗನ್, ''ಸುದೀಪ್, ನೀವು ನನ್ನ ಗೆಳೆಯ, ತಪ್ಪು ಗ್ರಹಿಕೆಗಳನ್ನು ದೂರ ಮಾಡಿದ್ದಕ್ಕೆ ಧನ್ಯವಾದಗಳು. ಚಿತ್ರೋದ್ಯಮದ ಎಲ್ಲರೂ ಒಂದು ಎಂಬುದೇ ನನ್ನ ಭಾವನೆ. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ, ನಮ್ಮ ಭಾಷೆಯನ್ನೂ ಎಲ್ಲರೂ ಗೌರವಿಸಲಿ ಎಂದು ಎದುರು ನೋಡುತ್ತೇವೆ ಎಂದಿರುವ ಅಜಯ್, ''ತರ್ಜುಮೆ ಮಾಡುವಾಗ ಎಲ್ಲೋ ತಪ್ಪಾಗಿದೆ'' ಎಂದಿದ್ದಾರೆ. ಆ ಮೂಲಕ ಸುದೀಪ್ ಹೇಳಿದ ಮಾತನ್ನು ತಾವು ತಪ್ಪಾಗಿ ಗ್ರಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
Recommended Video


ಪೂರ್ತಿ ವಿಷಯ ತಿಳಿಯದೇ ಅಭಿಪ್ರಾಯ ನೀಡಬಾರದು: ಸುದೀಪ್
ಬಳಿಕ ಅಜಯ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ''ತರ್ಜುಮೆಗಳು, ವ್ಯಾಖ್ಯಾನುಗಳು ನಮ್ಮ ದೃಷ್ಟಿಕೋನದಂತೆಯೇ ಇರುತ್ತವೆ. ಹಾಗಾಗಿಯೇ, ಪೂರ್ಣ ವಿಷಯ ತಿಳಿಯದೇ ಯಾವುದೇ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ ಎನ್ನುವುದು. ನಿಮ್ಮ ಮೇಲೆ ನಾನು ದೋಷಾರೋಪಣೆ ಮಾಡುವುದಿಲ್ಲ, ಆದರೆ, ನಿಮ್ಮಿಂದ ಒಂದು ಒಳ್ಳೆಯ ಕಾರಣಕ್ಕೆ ಟ್ವೀಟ್ ಬಂದಿದ್ದರೆ ನನಗೆ ಇನ್ನೂ ಖುಷಿಯಾಗಿರುತ್ತಿತ್ತು, ನಿಮಗೆ ನನ್ನ ಪ್ರೀತಿ'' ಎಂದು ಟ್ವೀಟ್ ವಾರ್ ಮುಕ್ತಾಯ ಮಾಡಿದ್ದಾರೆ ಸುದೀಪ್.


Click it and Unblock the Notifications











