ಯುಗಾದಿ ಹಬ್ಬಕ್ಕೆ ಬರುತ್ತಿದೆ ಸುದೀಪ್ ಮಾಣಿಕ್ಯ
ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ಭರ್ಜರಿ ಚಿತ್ರ ಮಾಣಿಕ್ಯ. ನಲ್ಲ ಸುದೀಪ್ ಹಾಗೂ ಮಲ್ಲ ರವಿಚಂದ್ರನ್ ಇದೇ ಮೊದಲ ಸಲ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು ಯುಗಾದಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ.
ಸ್ವತಃ ಕಿಚ್ಚ ಸುದೀಪ್ ಅವರೇ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, "For all those who were enquiring about the release date of Maanikya,,, here it is,,"it'l b a Ugadhi release in March"...... cheers." ಎಂದಿದ್ದಾರೆ.
ಈಗಾಗಲೆ ಚಿತ್ರದ ಮೊದಲ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು ಚಿತ್ರಪ್ರೇಮಿಗಳ ಕುತೂಹಲವನ್ನು ಸ್ವಲ್ಪಮಟ್ಟಿಗೆ ತಣಿಸಿದೆ. ಇನ್ನೂ ಮೂರು ಮೇಕಿಂಗ್ ಟ್ರೇಲರ್ ಗಳು ಮುಂಬರುವ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ. ತೆಲುಗಿನ ಯಶಸ್ವಿ ಚಿತ್ರ ಮಿರ್ಚಿ ರಿಮೇಕ್ ಇದಾಗಿದೆ.ಮೂಲ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ.
ಅರ್ಜುನ್ ಜನ್ಯ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ರಮ್ಯಕೃಷ್ಣ ಸಹ ಇದ್ದಾರೆ. ಸುದೀಪ್ ಅವರಿಗೆ ತಂದೆಯಾಗಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ ಎಂಬುದು ಸದ್ಯದ ಮಾಹಿತಿ. ಇದೇ ಮೊದಲ ಬಾರಿಗೆ ನಲ್ಲ ಮಲ್ಲರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ.
ಹೈದರಾಬಾದಿನಲ್ಲಿ ನಡೆದ ಚಿತ್ರೀಕರಣ ವೇಳೆ ಸುದೀಪ್ ಗಾಯಗೊಂಡಿದ್ದರು. ಆದರೂ ಆ ನೋವನ್ನು ಲೆಕ್ಕಿಸದೆ ಅವರು ಚಿತ್ರದಲ್ಲಿ ತೊಡಗಿಕೊಂಡಿದ್ದರು. ಈ ಚಿತ್ರದ ಬಂಗಲೆ ಸೆಟ್ ಗಾಗಿ ಸುಮಾರು ರು.30 ಲಕ್ಷ ಖರ್ಚು ಮಾಡಲಾಗಿದೆ. ಪಾತ್ರವರ್ಗದಲ್ಲಿ ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












