'ಮದಕರಿ ನಾಯಕ'ನ ನಂತರ ಮತ್ತೊಬ್ಬ ವೀರನ ಬಗ್ಗೆ ಸುದೀಪ್ ಸಿನಿಮಾ.!
Recommended Video

'ಮದಕರಿ ನಾಯಕ'ನ ಬಗ್ಗೆ ಕಿಚ್ಚ ಸುದೀಪ್ ಅವರೇ ಸಿನಿಮಾ ಮಾಡಬೇಕು ಎಂಬುದು ವಾಲ್ಮೀಕಿ ಸಮಯದಾಯದ ಸ್ವಾಮಿಗಳ ಒತ್ತಾಯ ಮತ್ತು ಬೇಡಿಕೆಯಾಗಿದೆ. ಈ ನಡುವೆ ಸುದೀಪ್ ಮತ್ತು ದರ್ಶನ್ ಇಬ್ಬರು ಮದಕರಿ ನಾಯಕನಾಗುತ್ತಿರುವುದು ವಿಶೇಷ.
ಈ ಮಧ್ಯೆ ಮದಕರಿ ನಾಯಕನ ನಂತರ ಮತ್ತೊಬ್ಬ ವೀರಾ ಹೋರಾಟಗಾರನ ಬಗ್ಗೆ ಸುದೀಪ್ ಸಿನಿಮಾ ಮಾಡಬೇಕು ಎಂಬುದು ಈಗ ಅದೇ ಸ್ವಾಮಿಜಿಗಳ ಆಸೆಯಾಗಿದೆ.
ಈ ಬಗ್ಗೆ ಮಾತನಾಡಿರುವ ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ 'ಮದಕರಿ ನಾಯಕನ ಕುರಿತು ಸುದೀಪ್ ಸಿನಿಮಾ ಮಾಡಿದ್ರೆ ನಾವು ಒಪ್ಪುತ್ತೇವೆ, ಅದಲ್ಲದೇ ಬೇರೆ ಯಾರೇ ಮಾಡಿದ್ರು ನಾವು ಒಪ್ಪುವುದಿಲ್ಲ. ಅದಾದ ಬಳಿಕ ಮತ್ತೊಬ್ಬ ವೀರನ ಸಿನಿಮಾ ಬಗ್ಗೆ ಸಿನಿಮಾ ಮಾಡಲು ಸುದೀಪ್ ಜೊತೆ ಚರ್ಚೆ ಕೂಡ ಮಾಡಲಿದ್ದೇವೆ ಎಂದಿದ್ದಾರೆ.? ಅಷ್ಟಕ್ಕೂ ಆ ವೀರ ಯಾರು.? ಮುಂದೆ ಓದಿ......

ಸುದೀಪ್ 'ವೀರ ಸಿಂಧೂರ ಲಕ್ಷ್ಮಣ'
'ಮದಕರಿ ನಾಯಕ' ಚಿತ್ರವನ್ನ ಸುದೀಪ್ ಅವರೇ ಮಾಡಲಿ ಎಂಬ ಅಭಿಪ್ರಾಯದ ಬೆನ್ನಲ್ಲೆ ಸ್ವಾಮೀಜಿಗಳು ಮತ್ತೊಂದು ಆಸೆಯನ್ನ ಹೊರಹಾಕಿದ್ದಾರೆ. ಮದಕರಿ ಸಿನಿಮಾದ ನಂತರ 'ವೀರ ಸಿಂಧೂರ ಲಕ್ಷ್ಮಣ' ಅವರ ಬಗ್ಗೆ ಸುದೀಪ್ ಸಿನಿಮಾ ಮಾಡಲಿ. ಈ ಬಗ್ಗೆ ಅವರ ಜೊತೆ ನಾವು ಮಾತನಾಡುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಹೇಳಿಕೊಂಡಿದ್ದಾರೆ.

ವೀರ ಸಿಂಧೂರ ಲಕ್ಷ್ಮಣನ ಇತಿಹಾಸ
ವೀರ ಸಿಂಧೂರ ಲಕ್ಷ್ಮಣ ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ತನ್ನದೇ ಆದ ಹಿಂಸಾತ್ಮಕ ರೀತಿಯಲ್ಲಿ ಆಂಗ್ಲ ಸರಕಾರದ ವಿರುದ್ಧ ಸಮರ ಸಾರಿದ್ದ ವೀರ ಸಿಂಧೂರ ಲಕ್ಷ್ಮಣ. ಈಗಿನ ಮಾಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸಿಂಧೂರ್ ಗ್ರಾಮದಲ್ಲಿ ಲಕ್ಷ್ಮಣ, ಸಾಬಣ್ಣ ಮತ್ತು ನರಸವ್ವ ಎಂಬ ದಂಪತಿಗಳಿಗೆ ಜನಿಸಿದರು. ಈ ದಂಪತಿಗಳ ಮೊದಲ ಸಾಕು ಮಗನ ಹೆಸರು ರಾಮ ಇದ್ದುದರಿಂದ ನಂತರ ಹುಟ್ಟಿದ ತಮ್ಮ ಸ್ವಂತ ಸಂತಾನಕ್ಕೆ ರಾಮನ ತಮ್ಮ ಲಕ್ಷ್ಮಣ ಎಂದು ಹೆಸರಿಟ್ಟಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಬ್ರಿಟಿಷರಿಗೆ ಕಾಡಿದ ಲಕ್ಷ್ಮಣ
1920ರ ಅಸುಪಾಸಿನಲ್ಲಿ ಭಾರತದಾದ್ಯಂತ ಅಸಹಕಾರ ಚಳುವಳಿ ಆವರಿಸಿದಾಗ ಲಕ್ಷ್ಮಣನು ತನ್ನದೇ ಆದ ರೀತಿಯಲ್ಲಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿದನು. ಐದು ಜನ ಸಮಾನ ಮನಸ್ಕರನ್ನು ಜೊತೆಗೂಡಿಸಿಕೊಂಡು ಒಂದು ಗುಂಪು ರಚಿಸಿ, ಆಂಗ್ಲ ಸರಕಾರವು ಶೇಖರಿಸಿದ್ದ ತೆರಿಗೆ ಹಣವನ್ನು ಖಜಾನೆಯಿಂದ ಲೂಟಿ ಮಾಡಲು ಪ್ರಾರಂಭಿಸಿದನು.

ಶ್ರೀಮಂತರ ವಿರುದ್ಧವೂ ಸಮರ ಸಾರಿದ್ದ
ಲಕ್ಷ್ಮಣ ಕೇವಲ ಆಂಗ್ಲರ ವಿರುದ್ಧವಷ್ಟೇ ಅಲ್ಲದೇ ನಿರ್ದಯಿ ಶ್ರೀಮಂತರ ಹಣವನ್ನು ಕೂಡ ದೋಚುತ್ತಿದ್ದನು. ಈ ರೀತಿ ದೋಚಿದ ಹಣವನ್ನು ತನ್ನ ಸುತ್ತ ಇರುವ ಬಡವರಿಗೆ ಹಂಚಿ ಸಹಾಯ ಮಾಡುತ್ತಿದ್ದನು. ಈ ರೀತಿ ಸಹಾಯ ಪಡೆದ ಜನರೇ ಲಕ್ಷ್ಮಣನಿಗೆ ಅಡಗುದಾಣ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸುತ್ತಿದರು. ಲಕ್ಷ್ಮಣ ನಿಜವಾಗಿಯೂ ಬಡವರ ಬಂಧುವಾಗಿದ್ದನು. ಆದರೆ ಅವನು ಆಂಗ್ಲ ಸರಕಾರಕ್ಕೆ ತಲೆ ನೋವಾಗಿದ್ದ ಕಾರಣ ಸರಕಾರ ಅವನ ವಿರುದ್ಧ ವಾರಂಟ್ ಹೊರಡಿಸಿತ್ತು.

ಕರ್ನಾಟಕದ ಪಾಲಿಗೆ ಐತಿಹಾಸಿಕ ವ್ಯಕ್ತಿ
ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಹತ್ತಿರದ ತೆಗ್ಗಿಯ ವೆಂಕಪ್ಪಗೌಡರಿಗೂ ಮತ್ತು ಲಕ್ಷ್ಮಣನಿಗೂ ನಿಕಟವಾದ ಗೆಳೆತನವಿತ್ತು. ಲಕ್ಷ್ಮಣನಿಗೆ ಗೌಡರು ಸಹಾಯ ಮಾಡುವದನ್ನು ಅರಿತ ಆಂಗ್ಲರು, ಗೌಡರಿಗೆ ಸಂದಿಗ್ಧತೆಯಲ್ಲಿ ಸಿಲುಕಿಸಿ ಲಕ್ಷ್ಮಣನನ್ನು ಸೆರೆ ಹಿಡಿಯವ ಅಥವಾ ಕೊಲೆಗಯ್ಯುವ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಿದರು. ಲಕ್ಷ್ಮಣನ ಜೊತೆ ಹೋರಾಡಿ ಗೆಲ್ಲುವದು ಅಸಾಧ್ಯವೆಂದು ಅರಿತ ಗೌಡರ ವಾಲಿಕಾರರು, ಅವನನ್ನು ಹತ್ಯೆ ಮಾಡುವ ಸಂಚನ್ನು ರೂಪಿಸಿದರು.

ಮೋಸಕ್ಕೆ ಬಲಿಯಾಗಿದ್ದ ವೀರಾ
1922ರ ಮಣ್ಣೇತ್ತಿನ ಅಮಾವಾಸ್ಯೆಯ ದಿನ ಲಕ್ಷ್ಮಣ ಮತ್ತು ಅವನ ಸಂಗಡಿಗರಿಗೆ ಔತಣದ ಬಿನ್ನಹ ನೀಡಿದರು. ಲಕ್ಷ್ಮಣನು ಊಟ ಮಾಡುವಾಗ ಮೊದಲೇ ಮರೆಯಲ್ಲಿ ಅವಿತು ಕೂತಿದ್ದ ಬಂದೂಕುಧಾರಿ, ಲಕ್ಷ್ಮಣನ ಮುಂದೆ ಕಂದೀಲಿನ ನಿಶಾನೆ ಮಾಡಿದ ತಕ್ಷಣ ಗುಂಡು ಹಾರಿಸಿದನು. ಮೋಸದಿಂದ ಗುಂಡು ತಾಗಿದುದರಿಂದ ವೀರ ಸಿಂಧೂರ ಲಕ್ಷ್ಮಣ ಹತನಾದನು. ತನ್ನ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಲಕ್ಷ್ಮಣ ಜನರ ಮನದಲ್ಲಿ ಅಮರನಾದನು. ಸಿಂಧೂರ ಲಕ್ಷ್ಮಣನನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈಗಲೂ ಕೂಡ ಒಬ್ಬ ಜನಪ್ರಿಯ ಬಂಡಾಯ ನಾಯಕನಂತೆ ಜನ ನೆನೆಯುತ್ತಾರೆ.

ಆಲ್ ರೆಡಿ ಸಿನಿಮಾ ಬಂದಿದೆ
ಹುಣುಸೂರು ಕೃಷ್ಣಮೂರ್ತಿ ಅವರು 1977ರಲ್ಲೇ ಸಿಂಧೂರ ಲಕ್ಷ್ಣಣ ಅವರ ಕುರಿತು ''ವೀರಾ ಸಿಂಧೂರ ಲಕ್ಷ್ಣಣ'' ಸಿನಿಮಾ ಮಾಡಿದ್ದಾರೆ. ಬಸವರಾಜು, ಕೆಎಸ್ ಅಶ್ವತ್ಥ, ಸುಧೀರ್, ವಜ್ರಮುನಿ ಸೇರಿದಂತೆ ಹಲವರು ಅಭಿನಯಿಸಿದ್ದರು.


Click it and Unblock the Notifications











