ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದ ಸುದೀಪ್ ಕೊಟ್ಟರು ಸರ್ಪ್ರೈಸ್
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿಯಿದೆ. ಸೆಪ್ಟೆಂಬರ್ 2 ರಂದು ಅಭಿನಯ ಚಕ್ರವರ್ತಿಯ ಜನುಮದಿನ. ಕಳೆದ ವರ್ಷ ಕೊರೊನಾದಿಂದ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಈ ವರ್ಷವಾದರೂ ನೆಚ್ಚಿನ ನಟನನ್ನು ನೋಡಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳು ಸುದೀಪ್ ನಿರಾಸೆ ಮಾಡಿದ್ದರು.
ಈ ವರ್ಷವೂ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದು ವಿನಂತಿಸಿದ್ದರು. ''ನನ್ನೆಲ್ಲಾ, ಪ್ರೀತಿಯ ಅಭಿಮಾನಿಗಳಿಗೆ ಸ್ನೇಹಿತರಲ್ಲಿ ಮನವಿ. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ ಎಂದು ಕೋರುವ ನಿಮ್ಮ ಕಿಚ್ಚ. ಕ್ಷಮೆ ಇರಲಿ, ಮುಂದೆ ಪರಿಸ್ಥಿತಿ ಸುಧಾರಿಸಿದ ಬಳಿಕ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ" ಎಂದು ಸುದೀಪ್ ಮನವಿ ಮಾಡಿದ್ದರು.
ಈ ಸಲವೂ ಸುದೀಪ್ ಅವರನ್ನು ಭೇಟಿ ಮಾಡುವ ಅವಕಾಶ ಇಲ್ಲ ಎಂದು ನಿರಾಸೆಯಾಗಿದ್ದ ಅಭಿಮಾನಿಗಳಿಗೆ ಕಿಚ್ಚ ಸರ್ಪ್ರೈಸ್ ಕೊಟ್ಟಿದ್ದಾರೆ. ನೇರವಾಗಿ ಭೇಟಿ ಮಾಡದಿದ್ದರೂ ಫೇಸ್ಬುಕ್ ಲೈವ್ ಮೂಲಕ ಫ್ಯಾನ್ಸ್ ಜೊತೆ ಸಂವಾದ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಡಿಜಿಟಲ್ ಒಟಿಟಿ ಫ್ಲಾಟ್ಫಾರ್ಮ್ (Digital_OTT) ಅಧಿಕೃತ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀಪ್ ಲೈವ್ ಬರಲಿದ್ದಾರೆ ಎಂದು ಪ್ರಕಟಿಸಿದೆ. ಸೆಪ್ಟೆಂಬರ್ 2 ರಂದು ಸಂಜೆ 6 ಗಂಟೆಗೆ ಲೈವ್ನಲ್ಲಿ ಸುದೀಪ್ ಜೊತೆ ಮಾತುಕತೆ ಮಾಡಬಹುದು.
ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ 'ವಿಕ್ರಾಂತ್ ರೋಣ' ಸಿನಿಮಾದ ಆಂಥೆಮ್ ಹಾಡು ಬಿಡುಗಡೆಯಾಗಲಿದೆ. ಕೋಟಿಗೊಬ್ಬ 3 ಚಿತ್ರತಂಡದಿಂದಲೂ ಉಡುಗೊರೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಹೊಸ ಸಿನಿಮಾಗಳು ಘೋಷಣೆಯಾಗಬಹುದು ಎನ್ನಲಾಗಿದೆ.
ಇನ್ನು ತಮಿಳು ನಿರ್ದೇಶಕ ವಿಕ್ರಂ ಪ್ರಭು ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ. ಇತ್ತೀಚಿಗಷ್ಟೆ ವಿಕ್ರಂ ಪ್ರಭು ಬೆಂಗಳೂರಿಗೆ ಆಗಮಿಸಿ ಸುದೀಪ್ ಅವರನ್ನು ಭೇಟಿ ಮಾಡಿದರು. ಬಳಿಕ ಟ್ವಿಟ್ಟರ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದ ಪ್ರಭು, 'ಸದ್ಯದಲ್ಲೇ ಸಿನಿಮಾ ಮಾಡ್ತೇವೆ' ಎಂದು ಪ್ರಕಟಿಸಿದ್ದರು.


Click it and Unblock the Notifications











