ಕಿಚ್ಚನ ವಿರುದ್ಧ ಸಿಟ್ಟಾದ ಕವಿ ರನ್ನನ ಅಭಿಮಾನಿಗಳು
ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಬಿಡುಗಡೆಗೂ ಮುನ್ನವೆ ವಿವಾದಕ್ಕೆ ಗುರಿಯಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಕೈಬಿಡಬೇಕೆಂದು ಕವಿಚಕ್ರವರ್ತಿ ಹಾಗೂ "ಸಾಹಸಭೀಮ ವಿಜಯಂ (ಗದಾಯುದ್ಧ)" ಕೃತಿ ಕರ್ತೃ ರನ್ನನ ಹುಟ್ಟೂರು ಮುಧೂಳದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿರುವ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಣ್ಣ ಅವರು ಈ ಬಗ್ಗೆ ಮಾತನಾಡುತ್ತಾ, "ಕನ್ನಡ ರತ್ನತ್ರಯದಲ್ಲಿ ಒಬ್ಬರಾದ ರನ್ನನ ಹೆಸರಿನಲ್ಲಿ ಚಿತ್ರ ಮಾಡುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ. ಈ ಕೂಡಲೆ ಆ ಶೀರ್ಷಿಕೆಯನ್ನು ಕೈಬಿಡಬೇಕು" ಎಂದು ಅವರು ಆಗ್ರಹಿಸಿದರು. ['ರನ್ನ' ಶೀರ್ಷಿಕೆ ಅಂತರಾರ್ಥ ಏನು?]

ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲನ ಆಸ್ಥಾನ ಕವಿಯಾಗಿದ್ದ ಮಹಾನ್ ಕವಿಯ ಹೆಸರಿನಲ್ಲಿ ಚಿತ್ರ ತೆಗೆಯುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ ರನ್ನನ ಹುಟ್ಟೂರಿನ ಜನ. ತೆಲುಗಿನ ಯಶಸ್ವಿ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಇದಾಗಿದ್ದು ಶೂಟಿಂಗ್ ಭರದಿಂದ ಸಾಗಿದೆ.
'ರನ್ನ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ನಿರ್ದೇಶಕರಾದ ನಂದಕಿಶೋರ್ (ಸುಧೀರ್ ಅವರ ಪುತ್ರ) ಮಾತನಾಡುತ್ತಾ, ರನ್ನ ಎಂದರೆ ಒಂದು ಮಹಾ ಕವಿ ಹೆಸರು ಹೌದು, ಪ್ರೀತಿಯಿಂದ ಕರೆಯುವ ಹೆಸರು ಹೌದು. ನನ್ನ ಗುರುಗಳನ್ನು ಅಷ್ಟು ಪ್ರೀತಿಸುತ್ತೀನಿ ಎಂಬ ಸಂಕೇತವಾಗಿ ಈ ಶೀರ್ಷಿಕೆಯನ್ನು ಇಟ್ಟಿದ್ದೇನೆ ಎಂದಿದ್ದರು.
ರನ್ನ ಬರೆದಿರುವುದು "ಛಲದಿಂ ದುರ್ಯೋಧನ" ಎಂಬ ಕಾವ್ಯ. ದುರ್ಯೋಧನನಿಗೆ ಛಲ ಎಷ್ಟಿತ್ತು ಎಂಬುದು ಇದುವರೆಗೂ ಯಾರೂ ಅಷ್ಟು ಛಲ ತೋರಿಸಿಲ್ಲ. ನನ್ನ ಸಿನಿಮಾದ ನಾಯಕ ಸಹ ಅಷ್ಟೇ ಛಲದಿಂದ ಬರುತ್ತಾನೆ, ಬದುಕುತ್ತಾನೆ ಎಂಬ ಸಂಕೇತವಾಗಿ ಆ ಟೈಟಲ್ ಇಟ್ಟಿದ್ದೇನೆ ಎಂದಿದ್ದನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಬಹುದು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











