ಸುಮಲತಾ v/s ಕುಮಾರಸ್ವಾಮಿ: ಅಂಬರೀಶ್ ಹೆಸರು ಬಳಕೆ
ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ, ನಿರ್ಮಾಪಕ ಕುಮಾರಸ್ವಾಮಿ ವಿರುದ್ಧದ ವಾಕ್ಸಮರ ತಾರಕಕ್ಕೇರಿದೆ. ಒಬ್ಬರ ಹೇಳಿಕೆಗೆ ಮತ್ತೊಬ್ಬರು ಕಠಿಣ ಪ್ರತ್ಯುತ್ತರವನ್ನೇ ನೀಡುತ್ತಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆ ಸಮಯದಲ್ಲಿ ಆರಂಭವಾಗಿದ್ದ ಈ ಪರಸ್ಪರ ವಾಕ್ಸಮರ ಚುನಾವಣೆ ನಂತರವೂ ಮುಂದುವರೆದು ಆಗೊಮ್ಮೆ, ಈಗೊಮ್ಮೆ ನಡೆಯುತ್ತಲೇ ಇತ್ತು. ಈಗ ಅದು ತಾರಕ್ಕೇರಿದೆ. ಇಬ್ಬರ ವಾಕ್ಸಮರದ ನಡುವೆ ಅಂಬರೀಶ್ ಹೆಸರು ಸಹ ಬಳಕೆಯಾಗುತ್ತಿದೆ.
ಜೂನ್ ಐದರಂದು ಸಿಎಂ ಭೇಟಿ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಎಚ್ಡಿ ಕುಮಾರಸ್ವಾಮಿ, ''ಕೆಆರ್ಎಸ್ನಿಂದ ನೀರು ಸೋರುತ್ತಿದೆ, ನೀರು ಸೋರದಂತೆ ಮಾಡಲು ಸುಮಲತಾ ಅನ್ನು ಅಡ್ಡ ಮಲಗಿಸಬೇಕು'' ಎಂದಿದ್ದರು. ಎಚ್ಡಿಕೆಯ ಈ ಮಾತುಗಳಿಗೆ ಜೆಡಿಎಸ್ ಮುಖಂಡರೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿದ್ದ ಸುಮಲತಾ, ''ಅವರ ಭಾಷೆಯೇ ಅವರ ಸಂಸ್ಕೃತಿಯನ್ನು ಹೇಳುತ್ತದೆ'' ಎಂದರು. ಜೊತೆಗೆ, 'ಪ್ರಜ್ವಲ್ ರೇವಣ್ಣನನ್ನು ನೋಡಿ ಕುಮಾರಸ್ವಾಮಿ ಕಲಿಯಬೇಕು, ಪ್ರಜ್ವಲ್ ರೇವಣ್ಣ ಮಾತ್ರವೇ ಜೆಡಿಎಸ್ ಪಕ್ಷದ ಆಶಾಕಿರಣ'' ಎಂದರು. ಜೊತೆಗೆ ಅಕ್ರಮ ಕಲ್ಲು ಗಣಿಗಾರಿಕೆಗೆ ಕುಮಾರಸ್ವಾಮಿ ಬೆಂಬಲವಾಗಿರುವ ಬಗ್ಗೆ ಆರೋಪವನ್ನೂ ಹೊರಿಸಿದರು.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮುಖಂಡರ ಪರ ಬೆಂಬಲಿಗರು ಪರಸ್ಪರ ವಾಗ್ವಾದಕ್ಕಿಳಿದು, ಎಚ್.ಡಿ.ಕುಮಾರಸ್ವಾಮಿ, ಅಂಬರೀಶ್ ಮುಂದೆ ಕೈಕಟ್ಟಿ ನಿಂತಿರುವ ಚಿತ್ರವನ್ನು ವೈರಲ್ ಆಗುವಂತೆ ಮಾಡಿದರು.
Recommended Video
ಇದಕ್ಕೆ ಉತ್ತರವಾಗಿ ಇಂದು (ಜುಲೈ 08) ಮಾತನಾಡಿರುವ ಕುಮಾರಸ್ವಾಮಿ, ''ನಾನು ಸಿಎಂ ಆಗಿ ಇದ್ದದ್ದಕ್ಕೆ ಅಂಬರೀಶ್ ಸ್ಮಾರಕ ಆಗಿದ್ದು'' ಎಂದು ಪ್ರತ್ಯುತ್ತರ ನೀಡಿದ್ದಾರೆ. ''ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟೆ, ಬೆಂಗಳೂರಿನಲ್ಲಿ ಅಂಬರೀಶ್ ಅವರ ಸಮಾಧಿಗೆ ಜಾಗ ನೀಡಿದೆ. ಆದರೆ ವಿಷ್ಣುವರ್ಧನ್ ನಿಧನರಾದಾಗ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೋತ್ತು. ಇಂದಿಗೂ ಸಹ ವಿಷ್ಣುವರ್ಧನ್ ಅವರಿಗೆ ಸರಿಯಾಗಿ ಸ್ಮಾರಕ ಕಟ್ಟಲು ಆಗಿಲ್ಲ. ಇದನ್ನು ಸುಮಲತಾ ಅವರು ಅರ್ಥ ಮಾಡಿಕೊಳ್ಳಬೇಕು'' ಎಂದಿದ್ದಾರೆ ಎಚ್ಡಿಕೆ.


Click it and Unblock the Notifications











